ದಾವಣಗೆರೆ : ಎರಡೂವರೆ ವರ್ಷ ಅಧಿಕಾರ ಹಂಚಿಕೆಗೆ ಒಪ್ಪಂದ ಆಗಿದೆ. ಅದು ನನಗೆ ಮಾಹಿತಿ ಇದೆ ಎಂದು ದಾವಣಗೆರೆಯಲ್ಲಿ ಚನ್ನಗಿರಿ ಕಾಂಗ್ರೆಸ್ ಶಾಸಕ ಬಸವರಾಜ್ ವಿ ಶಿವಗಂಗಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ದಾವಣಗೆರೆ ನಿವಾಸದಲ್ಲಿ ಪವರ್ ಶೇರಿಂಗ್ ಬಗ್ಗೆ ಮಾತನಾಡಿದ ಅವರು, 139 ಶಾಸಕರ ಬೆಂಬಲ ಡಿಸಿಎಂ ಡಿಕೆ ಶಿವಕುಮಾರ್ಗೆ ಇದೆ. 40 ರಿಂದ 50 ಜನ ನಮ್ಮಂತ ಯುವ ಶಾಸಕರು ಡಿಕೆಶಿ ಏನೇ ಹೇಳಿದ್ರೂ ಮಾಡಲು ಸಿದ್ಧರಿದ್ದೇವೆ. ಅವರು ಪ್ರಾಣ ಕೇಳಿದ್ರೂ ಕೊಡೋಕೆ ನಾವುಗಳು ಸಿದ್ಧರಿದ್ದೇವೆ. ಅಲ್ಲದೇ ನನಗಿರುವ ಮಾಹಿತಿ ಪ್ರಕಾರ ಅಧಿಕಾರ ಹಂಚಿಕೆ ಒಪ್ಪಂದ ಆಗಿದೆ.
ಸಿಎಂ ಸಿದ್ದರಾಮಯ್ಯ ಐದು ವರ್ಷ ತನಕ ಸಿಎಂ ಎಂಬ ವಿಧಾನ ಪರಿಷತ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ ಅವರು ಪದೇ ಪದೇ ಈ ರೀತಿ ಹೇಳಿಕೆ ನೀಡುತ್ತಲೇ ಇದ್ದಾರೆ. ಯತೀಂದ್ರ ಸಿದ್ದರಾಮಯ್ಯ ಹೇಳಿಕೆಯನ್ನು ಪಕ್ಷದ ಹೈಕಮಾಂಡ್ ಗಮನಿಸಿದೆ. ರಾಹುಲ್, ಖರ್ಗೆ ಪ್ರಿಯಾಂಕಾ ಗಾಂಧಿ ಇದ್ದಾರೆ. ಪಕ್ಷದಲ್ಲಿ ಅಧಿಕಾರ ಹಂಚಿಕೆ ಆಗಿದೆಯಾ ಇಲ್ವಾ ಎಂಬುದು ಸ್ಪಷ್ಟಪಡಿಸಬೇಕು ಎಂದರು.
ಡಿಕೆಶಿ ಸಾಹೇಬರು ಹೇಳಿದಂತೆ ಯತೀಂದ್ರ ಸಿದ್ದರಾಮಯ್ಯ ಪದೇ ಪದೇ ಮಾಧ್ಯಮಗಳ ಮುಂದೆ ಬಂದು ಪಕ್ಷಕ್ಕೆ ಡ್ಯಾಮೇಜ್ ಆಗುವ ಕೆಲಸ ಮಾಡುತ್ತಿದ್ದಾರೆ. ನಮ್ಮ ಹೈಕಮಾಂಡ್ ಬೇರೆ ಇದೆ, ಖರ್ಗೆ ಸಾಹೇಬರು, ರಾಹುಲ್ ಗಾಂಧಿಯವರು ಇದ್ದಾರೆ. ಹೈಕಮಾಂಡ್ ಕೂಡಲೇ ಒಪ್ಪಂದದ ಬಗ್ಗೆ ಸ್ಪಷ್ಟಪಡಿಸಲಿ. ಇಲ್ಲ ನಾನು ಯಾವುದೇ ಮಾತು ಕೊಟ್ಟಿಲ್ಲ ಎಂದು ಸಿದ್ದರಾಮಯ್ಯನವರು ಕ್ಲಿಯರ್ ಮಾಡಲಿ. ಆಗ ನಾವು ಎಲ್ಲರು ಯಾವುದೇ ಪ್ರಶ್ನೆ ಎತ್ತೋದಿಲ್ಲ ಎಂದು ತಿಳಿಸಿದರು.
ಸಿಎಂ ಬದಲಾವಣೆ ವಿಚಾರವಾಗಿ ನನ್ನ ಹೇಳಿಕೆಯನ್ನು ಗಣನೆಗೆ ತೆಗೆದುಕೊಳ್ಳಿ. ಯಾಕಂದ್ರೆ ನಂದು ಒಂದು ವೋಟ್ ಇದೆ. ಆದರೆ ಯತೀಂದ್ರ ಸಿದ್ದರಾಮಯ್ಯನವರದ್ದು ವೋಟ್ ಇಲ್ಲ, ಅವರ ಹೇಳಿಕೆ ಏಕೆ ಗಣನೆಗೆ ತೆಗೆದುಕೊಳ್ಳುತ್ತೀರಿ ಎನ್ನುವ ಮೂಲಕ ಯತೀಂದ್ರ ಸಿದ್ದರಾಮಯ್ಯಗೆ ಟಾಂಗ್ ನೀಡಿದರು. ಡಿಕೆಶಿ ಸಾಹೆಬ್ರು ಸಿಎಂ ಆಗಬೇಕು ಎಂದು ನಾನು ಕೂಡ ವ್ರತ ಮಾಡುತ್ತಿದ್ದೇನೆ ಎಂದರು.
ಸಂಕಲ್ಪ ದಾರವನ್ನು ತೋರಿಸುವ ಮೂಲಕ ವ್ರತ ಮಾಡುತ್ತಿದ್ದೇನೆ ಎಂದು ಹೇಳಿದ ಶಿವಗಂಗಾ ಬಸವರಾಜ್, ನಮ್ಮ ಹೈಕಮಾಂಡ್ ತುಂಬಾ ಸ್ಟ್ರಾಂಗ್ ಇದೆ. ಯತೀಂದ್ರ ಸಿದ್ದರಾಮಯ್ಯ ನವರಿಗೆ ಕಡಿವಾಣ ಹಾಕುತ್ತಾರೆ ಕಾದು ನೋಡಿ. ನನಗೆ ನೋಟೀಸ್ ಕೊಟ್ಟಿದ್ದನ್ನು ಸ್ವಾಗತ ಮಾಡಿದ್ದೇನೆ. ಆದರೆ ಸಿಎಂ ಮಗ ಅಂತ ಸುಮ್ನೆ ಆಗಿಲ್ಲ. ಹೈಕಮಾಂಡ್ ವಿರುದ್ಧ ಮಾತನಾಡಿದ ಸಚಿವರನ್ನೇ ತೆಗೆದರು. ಆದ್ದರಿಂದ ಎಲ್ಲವನ್ನು ಹೈಕಮಾಂಡ್ ಗಮನಿಸುತ್ತಿದೆ ಎಂದು ಹೇಳಿದರು.















