ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ಮಹಾಕುಂಭ ಮೇಳ ನಡೆಯುತ್ತಿದೆ. ಬಹುಭಾಷಾ ನಟ ಪ್ರಕಾಶ್ ರೈ ಅವರು ಕುಂಭಮೇಳದಲ್ಲಿ ಸ್ನಾನ ಮಾಡುತ್ತಿರುವ ರೀತಿ ಫೋಟೋ ಇತ್ತು. ಈ ರೀತಿ ಫೋಟೋ ವೈರಲ್ ಮಾಡಿದ ಪ್ರಶಾಂತ್ ಸಂಬರಗಿ ವಿರುದ್ಧ ಪ್ರಕಾಶ್ ರಾಜ್ ಕೇಸ್ ದಾಖಲು ಮಾಡಿದ್ದಾರೆ.
ಪ್ರಕಾಶ್ ರಾಜ್ ಅವರು ಎಡಪಂಕ್ತೀಯ ಚಿಂತನೆಗಳಿಂದ ಪ್ರಭಾವಿತರಾದವರು. ಅವರು ಬಿಜೆಪಿ ನಿರ್ಧಾರಗಳನ್ನು ಸಾಕಷ್ಟು ಟೀಕೆ ಮಾಡುತ್ತಾ ಇರುತ್ತಾರೆ. ಈಗ ಅವರು ಕುಂಭ ಮೇಳದಲ್ಲಿ ಭಾಗಿ ಆಗಿ ಪವಿತ್ರ ಸ್ನಾನ ಮಾಡುತ್ತಿರುವ ರೀತಿಯಲ್ಲಿ ಎಐ ಫೋಟೋ ಮಾಡಲಾಗಿತ್ತು. ಪೋಟೋ ವೈರಲ್ ಮಡಿದ ಪ್ರಶಾಂತ್ ಸಂಬರಗಿ ವಿರುದ್ಧ ಪ್ರಕಾಶ್ ರೈ ದೂರು ನೀಡಿದ್ದಾರೆ.
ಈ ಫೋಟೋ ನಿಜ ಎಂದು ನಂಬಿಸುವ ಕೆಲಸ ಕೆಲವರಿಂದ ಆಗಿದೆ. ಇಲ್ಲದ್ದನ್ನು ಇರುವ ರೀತಿಯಲ್ಲಿ ತೋರಿಸುತ್ತಿರುವ ಬಗ್ಗೆ ಪ್ರಕಾಶ್ ರೈಗೆ ಅಸಮಾಧಾನ ಇದೆ. ಹೀಗಾಗಿ, ಮೈಸೂರಿನ ಲಕ್ಷ್ಮೀಪುರಂ ಪೊಲೀಸ್ ಠಾಣೆಗೆ ಆಗಮಿಸಿ ದೂರು ಕೊಟ್ಟಿದ್ದಾರೆ. ‘ತಮ್ಮ ಪೋಟೋವನ್ನು ಎಐ ತಂತ್ರಜ್ಞಾನ ಬಳಸಿ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು’ ಎಂದು ಪ್ರಕಾಶ್ ರೈ ದೂರಿನಲ್ಲಿ ಕೋರಿದ್ದಾರೆ.
‘ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವುದರಲ್ಲಿ ತಪ್ಪಿಲ್ಲ. ಅದು ಅವರ ನಂಬಿಕೆ. ನನಗೆ ದೇವರ ಮೇಲೆ ನಂಬಿಕೆ ಇಲ್ಲ. ನನಗೆ ಮನ್ಯುಷ್ಯರ ಮೇಲೆ ನಂಬಿಕೆ. ದೇವರಿಲ್ಲದೆ ಬದುಕಬಹುದು ಆದರೆ, ಮನುಷ್ಯರಿಲ್ಲದೆ ಬದುಕಲು ಸಾಧ್ಯವಿಲ್ಲ. ಹಾಗಾಂತ ಅವರ ನಂಬಿಕೆಯನ್ನ ಪ್ರಶ್ನೆ ಮಾಡಲ್ಲ. ಅದನ್ನ ರಾಜಕಾರಣಕ್ಕೆ ಬಳಸಿಕೊಳ್ಳುವುದು ತಪ್ಪು’ ಎಂದಿದ್ದಾರೆ ಪ್ರಕಾಶ್ ರೈ.
ಪ್ರಕಾಶ್ ರೈ ಕಳೆದ ಮೂರುವರೆ ವರ್ಷಗಳಿಂದ ನಟನಾ ರಂಗದಲ್ಲಿ ಬ್ಯುಸಿ ಇದ್ದಾರೆ. ವಿಲನ್ ಆಗಿ, ಹೀರೋ ಆಗಿ, ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ. ಚಿಂತನೆಗಳ ವಿಚಾರಕ್ಕೆ ಕೆಲವರು ಅವರನ್ನು ಟೀಕೆ ಮಾಡಿದ್ದೂ ಇದೆ. ಆದರೆ, ಇದಕ್ಕೆ ಅವರು ಹೆಚ್ಚು ತಲೆಕೆಡಿಸಿಕೊಂಡಿಲ್ಲ. ತಮ್ಮ ಕಾಯಕವನ್ನು ಅವರು ಮುಂದುವರಿಸಿದ್ದಾರೆ. ಹತ್ತಾರು ಸಿನಿಮಾಗಳು ಅವರ ಕೈಯಲ್ಲಿ ಇವೆ.