ಬೆಂಗಳೂರು : ಪ್ರತಾಪ್ ಸಿಂಹ ಮತ್ತು ಬಿಜೆಪಿ ನಾಯಕರು ಮೊದಲು ಸಂವಿಧಾನವನ್ನ ಓದಿಕೊಳ್ಳಲಿ ಎಂದು ಡಿಸಿಎಂ ಡಿಕೆ ಶಿವಕುಮಾರ್, ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬಾನು ಮುಷ್ತಾಕ್ ದಸರಾ ಉದ್ಘಾಟನೆ ಮಾಡಬಾರದು ಎಂದು ಹೈಕೋರ್ಟ್ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಕಿದ್ದ ಪ್ರತಾಪ್ ಸಿಂಹ ಅರ್ಜಿ ಕೋರ್ಟ್ ವಜಾ ಮಾಡಿದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಬ್ಯಾಲೆಟ್ನಲ್ಲಿ ಬಂದಿರೋ ಸರ್ಕಾರ ಇದು. ಬ್ಯಾಲೆಟ್ ಬಗ್ಗೆ ನಾವು ಚರ್ಚೆ ಮಾಡುತ್ತಿದ್ದೇವೆ.
ನನ್ನ ಮತ ನನ್ನ ಹಕ್ಕು ಎಂದು ಹೇಳುತ್ತಿದ್ದೇವೆ. ಮತ ಆಯ್ಕೆ ಮಾಡಿರೋ ಸರ್ಕಾರ ಇದು. ಈ ಸರ್ಕಾರ ಮಾಡಿರೋ ನಿರ್ಧಾರ ಇದು. ಸಂವಿಧಾನ ಬದ್ಧವಾದ ನಿರ್ಧಾರ ನಾವು ಮಾಡಿಕೊಂಡು ಬಂದಿದ್ದೇವೆ. ಸಂವಿಧಾನವನ್ನು ಪ್ರತಾಪ್ ಸಿಂಹ ಮತ್ತು ಬಿಜೆಪಿಯವರು ಸರಿಯಾಗಿ ಓದಲಿ. ಆಗ ನಿಮಗೆ ಏನೇನು ಹಕ್ಕು ಇದೆ ಅರ್ಥ ಆಗುತ್ತದೆ ಎಂದು ಕಿಡಿಕಾರಿದರು.
ನ್ಯಾಯಾಲಯ ಕೂಡಾ ಸಂವಿಧಾನದ ಮೇಲೆ ನಡೆಯುತ್ತದೆ. ನಾವು ಸಂವಿಧಾನದ ಮೇಲೆ ನಡೆಯೋದು. ಪ್ರಮಾಣ ಸ್ವೀಕಾರ ಮಾಡೋದು ಸಂವಿಧಾನದ ಮೇಲೆ. ಪಾಪ ಅವನಿಗೆ ಪಾರ್ಟಿಯಲ್ಲಿ ಟಿಕೆಟ್ ಕೊಡಲಿಲ್ಲ. ನಾನು ರಾಜಕೀಯದಲ್ಲಿ ಬದುಕಿರಬೇಕು ಅಂತ ಪಾಪ ಇಂತಹ ಕೆಲಸ ಮಾಡುತ್ತಿದ್ದಾರೆ, ಅವರಿಗೆ ಒಳ್ಳೆಯದಾಗಲಿ ಎಂದರು.















