ಮೈಸೂರು: ರಾಜ್ಯ ಚುನಾವಣಾ ಪ್ರಚಾರದಲ್ಲಿರುವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ಅವರು ಬುಧವಾರ ಬೆಳಿಗ್ಗೆ ನಗರದ ಸಯ್ಯಾಜಿ ರಾವ್ ರಸ್ತೆಯಲ್ಲಿರುವ ‘ಮೈಲಾರಿ ಅಗ್ರಹಾರ’ ಹೋಟೆಲ್ನಲ್ಲಿ ದೋಸೆ ಸವಿದರು.
ಮಂಗಳವಾರ ವಿವಿಧೆಡೆ ಚುನಾವಣಾ ಪ್ರಚಾರ ಮುಗಿಸಿ, ನಗರದ ‘ರ್ಯಾಡಿಸನ್ ಬ್ಲೂ’ ಹೋಟೆಲ್ನಲ್ಲಿ ತಂಗಿದ್ದ ಅವರು ಬುಧವಾರ ಬೆಳಿಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸುರ್ಜೆವಾಲಾ ಜೊತೆಗೆ ವಿಶೇಷ ಭದ್ರತೆಯಲ್ಲಿ ‘ಮೈಲಾರಿ ಹೋಟೆಲ್’ಗೆ ಬಂದರು.
ಕಾರಿನಿಂದ ಕೆಳಗಿಳಿದು, ಸೀದಾ ಅಡುಗೆ ಕೋಣೆಗೆ ತೆರಳಿ, ಕಾವಲಿಗೆ ಹಿಟ್ಟು ಹಾಕಿ ದೋಸೆ ಹೊಯ್ದರು.
ನಂತರ ಡಿ.ಕೆ.ಶಿವಕುಮಾರ್ ಜೊತೆಗೆ ದೋಸೆ ಸವಿಯುವ ಜೊತೆಗೆ ಅಲ್ಲಿದ್ದ ಮಕ್ಕಳ ಜೊತೆಗೂ ಸಂಭಾಷಣೆ ನಡೆಸಿದರು.
ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,’ದೋಸೆ ತುಂಬಾ ರುಚಿಯಾಗಿತ್ತು’ ಎಂದು ಪ್ರಶಂಸಿದರು.
ರಾಜ್ಯದಲ್ಲಿರುವ ಬಿಜೆಪಿ ಸರ್ಕಾರವು ಎಲ್ಲ ರಂಗದಲ್ಲಿ ವಿಫಲವಾಗಿದ್ದು, ರಾಜ್ಯದ ಸಮಗ್ರ ಅಭಿವೃದ್ಧಿ, ಭ್ರಷ್ಟಾಚಾರ ಮುಕ್ತ ಸರ್ಕಾರ ರಚನೆಗೆ ಕಾಂಗ್ರೆಸ್ ಬೆಂಬಲಿಸಬೇಕು’ ಎಂದು ಮನವಿ ಮಾಡಿದರು.