ತುಮಕೂರು: ಜಿಲ್ಲೆಯಲ್ಲಿ ರಾಜ್ಯದ 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ತಿಳಿಸಿದ್ದಾರೆ.
ಗಣರಾಜ್ಯೋತ್ಸವ ಆಚರಣೆ ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಗೃಹ ಸಚಿವರು, ತುಮಕೂರಲ್ಲಿ ವಿಜೃಂಭಣೆಯಿಂದ ಗಣರಾಜ್ಯೋತ್ಸವ ಆಚರಣೆ ಮಾಡಿದ್ದೇವೆ. ಜಿಲ್ಲಾಡಳಿತ ಸೇರಿದಂತೆ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ತುಮಕೂರು ರಾಜ್ಯದಲ್ಲಿ ಪ್ರತಿಷ್ಠಿತವಾದ ಜಿಲ್ಲೆ. ವಿಸ್ತೀರ್ಣದಲ್ಲಿ ತುಮಕೂರು ಮೂರನೇ ಸ್ಥಾನ ಪಡೆದುಕೊಂಡಿದೆ. 11 ವಿಧಾನಸಭಾ ಕ್ಷೇತ್ರಗಳು ತುಮಕೂರಿಗೆ ಬರುತ್ತದೆ. ಬೆಂಗಳೂರಿಗೆ ಹತ್ತಿರವಿರುವ ವೇಗವಾಗಿ ಬೆಳೆಯುವ ಪಟ್ಟಣ ತುಮಕೂರು ಎಂದರು.
ಮುಂದಿನ 10 ವರ್ಷದಲ್ಲಿ ಬೆಂಗಳೂರು ತುಮಕೂರಿಗೆ ಯಾವುದೇ ವ್ಯತ್ಯಾಸವಿರುದಿಲ್ಲ. ತುಮಕೂರು ಸಹ ಬೆಂಗಳೂರಿಗೆ ಹೊಂದುಕೊಂಡಂತೆ ಬೆಳವಣೆಗೆ ಆಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಈಗಾಗಲೇ ನಾನು ಮನವಿ ಮಾಡಿದ್ದೇನೆ. ವಿಮಾನ ನಿಲ್ದಾಣವನ್ನು ತುಮಕೂರಿನ ಆಸುಪಾಸಿನಲ್ಲಿ ಮಂಜೂರು ಮಾಡಲು ಕೇಳಿದ್ದೇನೆ ಎಂದು ತಿಳಿಸಿದರು.
ವಿಮಾನ ನಿಲ್ದಾಣಕ್ಕಾಗಿ ಎರಡು ಭಾಗದಲ್ಲಿ ಜಾಗ ಗುರುತಿಸಿದ್ದಾರೆ. ವಸಂತನರಸಾಪುರ ಹೊಂದಿಕೊಂಡಂತೆ ಸುಮಾರು 3 ಸಾವಿರ ಎಕರೆ ಭೂಮಿ ಮತ್ತು ಸೀಬಿ ದೇವಸ್ಥಾನ ಮಧುಗಿರಿ ಹಾಗೂ ಕೊರಟಗೆರೆವರೆಗೆ 4 ಸಾವಿರ ಎಕರೆ ಭೂಮಿ ನಕ್ಷೆ ಮಾಡಲಾಗಿದೆ. ಈ ಪ್ರಸ್ತಾವನೆ ಸರ್ಕಾರಕ್ಕೆ ಹೋಗಿದೆ. ನಾವು ಪಕ್ಷಾತೀತವಾಗಿ ಒತ್ತಾಯ ಮಾಡುತ್ತೇವೆ ಎಂದು ಹೇಳಿದರು.
ಅಮಾನಿಕೆರೆಯಲ್ಲಿ ಗ್ಲಾಸ್ ಬ್ರಿಡ್ಜ್ ಮಾಡಿ ಹೈಲೆಂಡ್ಗಳಿಗೆ ಕನೆಕ್ಟ್ ಮಾಡಲಾಗುವುದು. ಪಕ್ಷಿಗಳ ಪಾರ್ಕ್ ಮಾಡಲು ನಿರ್ಧಾರ ಮಾಡಲಾಗಿದೆ. ಟೌನ್ಹಾಲ್ ಸರ್ಕಲ್ನಲ್ಲಿ ಹೆಚ್ಎಎಲ್ನ ಮಾಡೆಲ್ ಹೆಲಿಕಾಪ್ಟರ್ ಇಡಲಾಗುವುದು ಎಂದು ಸಚಿವರು ತಿಳಿಸಿದರು.
ಈಗಾಗಲೇ ಅಂಬೇಡ್ಕರ್ ಅವರ ಪುತ್ಥಳಿ ಇಡಲು ತೀರ್ಮಾನಿಸಲಾಗಿದೆ. ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರ ಅನುಮತಿ ಕೊಟ್ಟ ಬಳಿಕ ಸ್ಥಾಪಿಸಲಾಗುತ್ತದೆ ಎಂದರು.
ಯಾವ ಜಿಲ್ಲೆಗಳಲ್ಲಿ ಸರ್ಕಾರಿ ಕಾಲೇಜುಗಳಿಲ್ಲ ಅಲ್ಲಿ ಕೊಡಲಾಗುವುದು. ಈಗಾಗಲೇ ಈ ವಿಚಾರವಾಗಿ ಸಿಎಂ ಜೊತೆ ಚರ್ಚೆ ಮಾಡಿದ್ದೇವೆ ಎಂದು ಮಾಹಿತಿ ನೀಡಿದರು.