ಮನೆ ಸ್ಥಳೀಯ ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ: ೩೨ ಪಿಡಿಓ ಅಮಾನತಿಗೆ ಆಗ್ರಹ, ಸಿಎಂ ಕಾರಿಗೆ ಮುತ್ತಿಗೆ ಎಚ್ಚರಿಕೆ

ಕನ್ನಡಾಂಬೆ ರಕ್ಷಣಾ ವೇದಿಕೆಯಿಂದ ಪ್ರತಿಭಟನೆ: ೩೨ ಪಿಡಿಓ ಅಮಾನತಿಗೆ ಆಗ್ರಹ, ಸಿಎಂ ಕಾರಿಗೆ ಮುತ್ತಿಗೆ ಎಚ್ಚರಿಕೆ

0

ಮೈಸೂರು : ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ೩೨ ಗ್ರಾಮ ಪಂಚಾಯಿತಿಗಳ ಸಾಮಾಗ್ರಿ ಖರೀದಿಯಲ್ಲಿ
೭.೯೨ಕೋಟಿ ಭ್ರಷ್ಟಾಚಾರ ನಡೆದಿದ್ದು, ಸರ್ಕಾರ ಕೂಡಲೇ ಆಯಾ ಪಿಡಿಓಗಳನ್ನು ಅಮಾನತುಪಡಿಸಿ ತನಿಖೆಗೆ ಆದೇಶಿಸಬೇಕೆಂದು ಆಗ್ರಹಿಸಿ ಕನ್ನಡಾಂಬೆ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರು ಜಿಲ್ಲಾಧಿಕಾರಿಗಳ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಪ್ರತಿಭಟನೆಯ ನೇತೃತ್ವದ ವಹಿಸಿದ್ದ ಕನ್ನಡಾಂಬೆ ರಕ್ಷಣಾ ವೇದಿಕೆ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ಬಿ.ಬಿ.ರಾಜಶೇಖರ್ ಅವರು ಮಾತನಾಡಿ, ಅಮೃತ್ ಗ್ರಾಮ ಪಂಚಾಯಿತಿ ಯೋಜನೆಗೆ ಆಯ್ಕೆಯಾಗಿರುವ ಮೈಸೂರು ಜಿಲ್ಲೆಯ ವಿವಿಧ ತಾಲ್ಲೂಕುಗಳ ೩೨ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಂಗನವಾಡಿಗಳಿಗೆ ನಲಿ-ಕಲಿ ಸಾಮಗ್ರಿ, ಶಾಲೆಗಳಿಗೆ
ಕ್ರೀಡಾ ಸಾಮಾಗ್ರಿ ಹಾಗೂ ಲ್ಯಾಬ್‌ಗಳ ಸಾಮಗ್ರಿ, ಡಿಜಿಟಲ್ ಗ್ರಂಥಾಲಯಗಳ ಸಾಮಗ್ರಿ, ಸೋಲಾರ್ ಬೀದಿ ದೀಪ, ಕುಡಿಯುವ ನೀರು ಇತರೆ ಮೂಲಭೂತ ಸೌಕರ್ಯಗಳಿಗೆ ಸರ್ಕಾರವು ೭ ಕೋಟಿ ೯೨ ಲಕ್ಷ ರೂಪಾಯಿಗಳನ್ನು ಬಿಡುಗಡೆ ಮಾಡಿದ್ದು, ಖರೀದಿಯಲ್ಲಿ ಕೆಟಿಪಿಪಿ ನಿಯಮ ಪಾಲಿಸಿಲ್ಲ, ಎಲ್ಲ ಖರೀದಿಯಲ್ಲಿ ಭಾರಿ ಭಷ್ಟಾಚಾರ ನಡೆದಿದೆ. ಈ ಬಗ್ಗೆ ಗ್ರಾಪಂ ಸದಸ್ಯ ಜಲೇಂದ್ರ ಅವರು ಒಂದು ವರ್ಷದ ಹಿಂದೆ ದೂರು ನೀಡಿದ್ದರೂ ಜಿಲ್ಲಾಧಿಕಾರಿಗಳು, ಜಿಪಂ ಕಾರ್ಯನಿರ್ವಾಹಕ ಅಧಿಕಾರಿಗಳು ಯಾವುದೇ ತನಿಖೆಗೆ ಆದೇಶಿಸದೆ, ಭ್ರಷ್ಟಾಚಾರಕ್ಕೆ ಕುಮ್ಮಕ್ಕು ನೀಡಿದ್ದಾರೆ ಎಂದು ಕಿಡಿ ಕಾರಿದರು.

ಒಂದು ಪಂಚಾಯಿತಿಗೆ ೨೪ ಲಕ್ಷದ ೭೫ ಸಾವಿರ ಗಳಂತೆ ೩೨ಪಂಚಾಯ್ತಿಗಳಿಗೆ ಒಟ್ಟು ೭ ಕೋಟಿ ೯೨ ಲಕ್ಷಗಳನ್ನು ಸರ್ಕಾರ ಬಿಡುಗಡೆ ಮಾಡಿದೆ. ಹಲವು ಗ್ರಾಮ ಪಂಚಾಯಿತಿಗಳು ಒಂದೇ ಏಜೆನ್ಸಿಗೆ ಅನುಕೂಲವಾಗುವಂತೆ ಕೆಟಿಪಿಪಿ ನಿಯಮ ಉಲ್ಲಂಘಸಿ ಸಾಮಗ್ರಿ ಖರೀದಿ ಮಾಡಿರುತ್ತಾರೆ. ಒಂದೇ ಏಜೆನ್ಸಿಯಿಂದ ಒಂದೇ ವಸ್ತುವಿಗೆ ಬೇರೆ ಬೇರೆ ಗ್ರಾಮ ಪಂಚಾಯತಿಗಳು ಬೇರೆ ಬೇರೆ ದರದಲ್ಲಿ, ಸಾಮಗ್ರಿ ಖರೀದಿ ಮಾಡಿದ್ದಾರೆ. ವರಕೋಡು ಗ್ರಾಮ ಪಂಚಾಯಿತಿ ಒಂದು ವಾಲಿಬಾಲಿಗೆ ೬,೯೬೬ ರೂಪಾಯಿಗೆ ಖರೀದಿ ಮಾಡಿದ್ದರೆ, ಹೆಬ್ಬಾಳು ಗ್ರಾಮ ಪಂಚಾಯಿತಿ ೩೯೦೦ ರೂಪಾಯಿಗಳಿಗೆ ಒಂದು ವಾಲಿಬಾಲ್ ಖರೀದಿ ಮಾಡಿದೆ.

ದೂರ ಗ್ರಾಮ ಪಂಚಾಯಿತಿ ಬುಕ್ ಕಿಟ್ ಒಂದಕ್ಕೆ ೧೬.೫೨೫ ರೂಪಾಯಿಗಳಿಗೆ ಖರೀದಿ ಮಾಡಿದ್ದರೆ, ಅದೇ ಬುಕ್‌ಕಿಟ್ ವರಕೋಡು ಗ್ರಾಮ ಪಂಚಾಯಿತಿ ೨೨,೫೯೮ ರೂಪಾಯಿಗಳಿಗೆ ಹಾಗೂ ಹೆಬ್ಬಾಳು ಗ್ರಾಮ ಪಂಚಾಯಿತಿ ೪೯,೯೯೦ ರೂಪಾಯಿಗಳಿಗೆ ಖರೀದಿ ಮಾಡಿದೆ. ಹೆಬ್ಬಾಳು ಗ್ರಾಮ ಪಂಚಾಯತಿಯಿಂದ ಒಂದು ಸೋಲಾರ್ ಬೀದಿ ದೀಪವನ್ನು ೪೪,೬೦೦ ಗಳಿಗೆ ಖರಿದಿಸಿದರೆ, ವರಕೋಡು ಗ್ರಾಮ ಪಂಚಾಯತಿಯಲ್ಲಿ ಅದೇ ೩೯,೫೦೦ ಗಳಿಗೆ ಸೋಲಾರ್ ಬೀದಿ ದೀಪ ಖರೀದಿ ಮಾಡಿದ್ದಾರೆ. ಸಾಲಿಗ್ರಾಮ ತಾಪಂ ಹಳಿಯೂರು ಗ್ರಾಪಂ ಸೋಲಾರ್ ಬೀದಿ ದೀಪವನ್ನು ೨೬,೪೫೪ ರೂ.ಗಳಿಗೆ ಖರೀದಿ ಮಾಡಿದಾರೆ. ಅದೇ ರೀತಿ ಗೌಡಗೆರೆ ಗ್ರಾಪಂ ೩೭, ೪೦೬ ರೂ, ತಾಯೂರು ಗ್ರಾಪಂ ೩೩,೮೮೯ ರೂಪಾಯಿಗಳಿಗೆ ಖರೀದಿ ಮಾಡಿದ್ದಾರೆ. ವರಕೋಡು ಗ್ರಾಪಂಯಲ್ಲಿ ಡೆಸ್ಟ್ರಾವನ್ನು ೫೮,೪೫೦ ಗಳಿಗೆ ಖರೀದಿ ಮಾಡಿದರೆ, ಹೆಬ್ಬಾಳು ಗ್ರಾಪಂಯಲ್ಲಿ ೪೨,೩೬೪ ರೂ.ಗಳಿಗೆ ಖರೀದಿ ಮಾಡಿದಾರೆ. ಗೌಡಗೆರೆ ಗ್ರಾಪಂ ಯಲ್ಲಿ ಒಂದು ಲ್ಯಾಪ್‌ಟಾಪ್ ೬೭,೭೮೮ ರೂ.ಗಳಿಗೆ ಖರೀದಿ ಮಾಡಿದರೆ, ಅದೇ ಕಂಪನಿಯ ಲ್ಯಾಪ್‌ಟಾಪ್ ಅಳಿಯೂರು ಗ್ರಾಪಂ ಯವರು ೫೯,೫೨೧ ರೂ.ಗಳಿಗೆ ಖರೀದಿ ಮಾಡಿದ್ದಾರೆ.

ಹೀಗೆ ಹಲವು ಗ್ರಾಪಂಗಳಲ್ಲಿ ಇ-ಟೆಂಡರ್ ನಲಿ, ಒಂದೇ ಏಜೆನ್ಸಿ ಭಾಗವಹಿಸಿ ಒಂದೇ ರೀತಿಯ ವಸ್ತುವಿಗೆ ಬೇರೆ, ಬೇರೆ ದರ ನಿಗದಿ ಮಾಡಿ, ಖರೀದಿ ಮಾಡಿರುವ ಭಾರಿ ಅನುಮಾನ ಮೂಡಿದೆ. ಈ ಅಕ್ರಮದಲ್ಲಿ ಭಾಗವಹಿಸಿರುವ ೩೨ ಗ್ರಾಪಂಗಳ ಪಿಡಿಒಗಳನ್ನು ಈ ಕೂಡಲೇ ಸೇವೆಯಿಂದ ಅಮಾನತ್ತು ಮಾಡಿ ತನಿಖೆ ನಡೆಸಬೇಕು. ಮುಖ್ಯಮಂತ್ರಿಗಳತವರು ಜಿಲ್ಲೆಯಲ್ಲೇ ಇಷ್ಟೋಂದು ಭ್ರಷ್ಟಾಚಾರ ನಡೆದಿದ್ದರೆ, ಇನ್ನು ಇಡೀ ರಾಜ್ಯದ ಗತಿ ಏನು ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆಯಲ್ಲಿ ಕನ್ನಡಾಂಬೆ ರಕ್ಷಣಾ ವೇದಿಕೆಯ ರಾಜ್ಯ ಖಜಾಂಚಿ ನಂಜುಂಡ ಶಿವಕುಮಾರ್, ಜಿಲ್ಲಾಧ್ಯಕ್ಷರಾದ ಸಂತೋಷ್, ಪ್ರಧಾನ ಕಾರ್ಯದರ್ಶಿ ಪ್ರತಾಪ್ ಜಿ., ಜಿಲ್ಲಾ, ಮಹಿಳಾ ಘಟಕದ ಅಧ್ಯಕ್ಷರಾದ ಮಂಜುಳಾ, ಕರುನಾಡು ಲಾರಿ ಚಾಲಕರ ಪರಿಷತ್ ಅಧ್ಯಕ್ಷರಾದ ಮಹದೇವಸ್ವಾಮಿ, ಹೋರಾಟಗಾರ ಡಿಪಿಕೆ ಪರಮೇಶ್, ದೂರುದಾರ ಜಲೇಂದ್ರ, ಶಿವಕುಮಾರ್ ಸಿಂಧುವಳ್ಳಿ, ಹರೀಶ್, ಕಿರಣ್, ದಿಲೀಪ್, ಶ್ರೀನಿವಾಸ್, ಮಾಲಿನಿ, ಭಾಗ್ಯ, ಮಹೇಂದ್ರ, ರವಿ ಗೌಡ, ವರಕೋಡು ಕೃಷ್ಣಗೌಡ, ಮನುಗೌಡ, ಅನುರಾಜ್, ಗೌತಮ್, ಕನ್ನಡಾಂಬೆ ರಕ್ಷಣಾ ವೇದಿಕೆ ಪದಾಧಿಕಾರಿಗಳು ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು.