ಮನೆ ಸುದ್ದಿ ಜಾಲ ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ..!

ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ..!

0

ಬೆಂಗಳೂರು : ನಿರೀಕ್ಷಣಾ ಜಾಮೀನು ಪಡೆದು ಠಾಣೆಗೆ ಹೋದ ವ್ಯಕ್ತಿ ಮೇಲೆ ಪಿಎಸ್‌ಐ ಹಲ್ಲೆ ನಡೆಸಿರುವ ಘಟನೆ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ. ಮಾಗಡಿ ರೋಡ್ ಪೊಲೀಸ್ ಠಾಣೆಯ ಪಿಎಸ್‌ಐ ಕೌಶಿಕ್ ವಿರುದ್ಧ ಸ್ವತಃ ತಾವು ಕರ್ತವ್ಯ ನಿರ್ವಹಿಸುತ್ತಿದ್ದ ಠಾಣೆಯಲ್ಲೇ ಎಫ್‌ಐಆರ್ ದಾಖಲಾಗಿದೆ.

ನಿರೀಕ್ಷಣಾ ಜಾಮೀನು ಪ್ರತಿ ಹಿಡಿದು ಠಾಣೆಗೆ ಬಂದಿದ್ದ ಆರೋಪಿಯೊಬ್ಬರ ಮೇಲೆ ಹಲ್ಲೆ ನಡೆಸಿ, ಅವಾಚ್ಯ ಪದಗಳಿಂದ ನಿಂದಿಸಿದ ಆರೋಪದಡಿ ಈ ಪ್ರಕರಣ ದಾಖಲಾಗಿದೆ. ಅವಿನಾಶ್ ಎಂಬಾತ ಕೋರ್ಟ್ ಮೂಲಕ ಖಾಸಗಿ ದೂರು ದಾಖಲಿಸಿದ್ದು, ಕೋರ್ಟ್ ಆದೇಶದಂತೆ ಪಿಎಸ್‌ಐ ಕೌಶಿಕ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಸಿವಿಲ್ ಕೇಸಲ್ಲಿ ಜಾಮೀನು ಪಡೆದು ಠಾಣೆಗೆ ಬಂದಿದ್ದಾಗ ಬೇಲ್ ಜೊತೆ ಬಂದಿದಿಯಾ? ಎಂದು ಆರೋಪಿ ಅವಿನಾಶ್‌ಗೆ ಅವಾಚ್ಯವಾಗಿ ನಿಂದಿಸಿ, ಕೆನ್ನೆಗೆ ಹೊಡೆದು ಕಿವಿಗೆ ಹಾನಿ ಮಾಡಿದ್ದಾರೆ. ಈ ಬಗ್ಗೆ ಎಂಎಲ್‌ಸಿ ರಿಪೋರ್ಟ್‌ನಲ್ಲಿ ಉಲ್ಲೇಖವಾಗಿದೆ.

ಅಲ್ಲದೆ, ಈ ಕೇಸ್‌ನಲ್ಲಿ ಬೇಲ್ ಪಡೆದುಕೊಂಡರೆ, ನಿನ್ನ ಮೇಲೆ ಮತ್ತೊಂದು ಕೇಸ್ ದಾಖಲಿಸುತ್ತೇನೆ ಎಂದು ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಮೊದಲು ಆರೋಪಿ ಅವಿನಾಶ್ ಅವರ ತಾಯಿ ಪ್ರಮೀಳಾ ಅವರ ವಿರುದ್ಧ ಚೀಟಿ ಹಣ ವಂಚನೆ ಸಂಬಂಧ ಲಕ್ಷ್ಮೀ ಎಂಬುವವರು ದೂರು ನೀಡಿದ್ದರು. ಈ ದೂರಿನನ್ವಯ ಪ್ರಮೀಳಾ ವಿರುದ್ಧ ಪ್ರಕರಣ ದಾಖಲಾಗಿತ್ತು.

ಈ ಪ್ರಕರಣದ ತನಿಖೆ ವೇಳೆ, ಪಿಎಸ್‌ಐ ಕೌಶಿಕ್ ಅವರು ನೋಟಿಸ್ ನೀಡದೆ ಅವಿನಾಶ್ ಅವರ ಕುಟುಂಬ ಸದಸ್ಯರಾದ ತಾಯಿ, ಸಹೋದರಿ ಮತ್ತು ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಜಾಮೀನು ಪಡೆದ ನಂತರವೂ ಅವಿನಾಶ್ ಅವರನ್ನು ನಿಂದಿಸಿ, ಅವರ ತಾಯಿ ಮತ್ತು ಸಹೋದರಿ ಎದುರಲ್ಲೇ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ಈ ಹಿನ್ನೆಲೆ ಅವಿನಾಶ್ ಮಾಗಡಿ ರೋಡ್ ಪೊಲೀಸ್ ಠಾಣೆಯಲ್ಲಿ ಪಿಎಸ್‌ಐ ಕೌಶಿಕ್, ಲಕ್ಷ್ಮೀ ಹಾಗೂ ನರಸಿಂಹ ಎಂಬುವವರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.