ಕಾರವಾರ: ಪಾಕಿಸ್ತಾನ ಬೆಂಬಲಿತ ಉಗ್ರರಿಂದ ಪಹಲ್ಗಾಮ್ನಲ್ಲಿ ನರಮೇಧವೇ ನಡೆದುಹೋಯಿತು. ಕೇಂದ್ರ ಸರ್ಕಾರ ಆಪರೇಷನ್ ಸಿಂಧೂರ್ ಮೂಲಕ ತಕ್ಕ ತಿರುಗೇಟನ್ನೇನೋ ಕೊಟ್ಟಿದೆ. ಜೊತೆಗೆ ಪಾಕಿಸ್ತಾನದ ಜತೆ ವಾಣಿಜ್ಯ ವ್ಯವಹಾರ ಸಹ ಬಂದ್ ಮಾಡಿದೆ. ಇದೀಗ ಉತ್ತರ ಕನ್ನಡ ಜಿಲ್ಲೆಯ ರೈತರು ಸಹ ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ರಫ್ತು ಮಾಡಲು ಸಮ್ಮತಿಸುವುದಿಲ್ಲ ಎಂದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಶರಾವತಿ ನದಿ ಪಾತ್ರ ಭಾಗದ ರೈತರು ಬೆಳೆದ ವೀಳ್ಯದೆಲೆಯನ್ನು, ಈ ಮೊದಲು ದೆಹಲಿ ವರ್ತಕರು ಖರೀದಿಸಿ ಪಾಕಿಸ್ತಾನಕ್ಕೆ ರಫ್ತು ಮಾಡುತ್ತಿದ್ದರು. ಇದು ಹಲವು ತಲೆಮಾರಿನಿಂದಲೂ ನಡೆದುಕೊಂಡು ಬಂದಿದೆ. ಕೇಂದ್ರ ಸರ್ಕಾರ ಭಾರತದ ವಸ್ತುಗಳು ಪಾಕಿಸ್ತಾನಕ್ಕೆ ಹೋಗದಂತೆ ನಿರ್ಬಂಧ ವಿಧಿಸಿದ ಬೆನ್ನಲ್ಲೇ ಪಾಕಿಸ್ತಾನದಲ್ಲಿ ಬಹು ಬೇಡಿಕೆ ಇರುವ ಹೊನ್ನಾವರ ವೀಳ್ಯೆದೆಲೆಗೂ ಅದರ ಬಿಸಿ ತಾಗಿದೆ.
ಇಷ್ಟೆಲ್ಲ ಆದರೂ ಹೊನ್ನಾವರದಿಂದ ದೆಹಲಿಗೆ ಸರಬರಾಜಾಗುವ ವೀಳ್ಯದೆಲೆ ಅನ್ಯ ಮಾರ್ಗದಿಂದ ಪಾಕಿಸ್ತಾನಕ್ಕೆ ತೆರಳುತಿತ್ತು. ಪ್ರತಿ ದಿನ ಹೊನ್ನಾವರದಿಂದ 11ಕ್ಕೂ ಹೆಚ್ಚು ಟನ್ ವೀಳ್ಯದೆಲೆ ದೆಹಲಿ ತಲುಪಿ ನಂತರ ಇತರೆ ಮಾರ್ಗಗಳ ಮೂಲಕ ಪಾಕಿಸ್ತಾನ ತಲುಪುತ್ತಿತ್ತು. ಆದರೆ, ಇದೀಗ ಈ ವಿಷಯ ಮನಗಂಡ ಹೊನ್ನಾವರದ ರೈತರು ದೆಹಲಿಯ ವರ್ತಕರಿಗೆ ವೀಳ್ಯದೆಲೆ ಕಳುಹಿಸುವುದನ್ನೇ ನಿರ್ಬಂಧಿಸಿದ್ದಾರೆ. ಇದರಿಂದ ಪಾಕಿಸ್ತಾನಕ್ಕೆ ಹೋಗುತಿದ್ದ ವಿಳ್ಯದೆಲೆ ಇದೀಗ ದೇಶದ ಮಾರುಕಟ್ಟೆಯಲ್ಲಿ ಬಿಕರಿ ಆಗುತಿದೆ.
ದರ ಕುಸಿದರೂ ಪರವಾಗಿಲ್ಲ. ನಷ್ಟವನ್ನು ತಡೆದುಕೊಳ್ಳುತ್ತೇವೆ. ಆದರೆ, ಪಾಕಿಸ್ತಾನಕ್ಕೆ ಕಳುಹಿಸಿಕೊಡಲು ಸುತರಾಂ ಒಪ್ಪಲಾರೆವು. ವೀಳ್ಯದೆಲೆಯನ್ನು ಪಾಕಿಸ್ತಾನಕ್ಕೆ ಕಳುಹಿಸುವುದಕ್ಕೆ ಶಾಶ್ವತವಾಗಿ ನಿರ್ಬಂಧ ವಿಧಿಸಿದ್ದೇವೆ ಎಂದು ಜಿಲ್ಲೆಯ ರೈತರ ಪರವಾಗಿ ಸತೀಶ್ ಭಟ್ ಎಂಬವರು ಹೇಳಿದ್ದಾರೆ.
ಹೊನ್ನಾವರದ ಶರಾವತಿ ನದಿ ತೀರ ಭಾಗದಲ್ಲಿ ಬೆಳೆಯುವ ವೀಳ್ಯದೆಲೆ ದೇಶದಲ್ಲಿ ಅಲ್ಲದೇ ವಿದೇಶದಲ್ಲೂ ಹೆಸರು ಗಳಿಸಿದೆ. ‘ರಾಣಿ ವೀಳ್ಯದೆಲೆ’ ಎಂದೇ ಪ್ರಸಿದ್ಧಿ ಪಡೆದಿರುವ ಇಲ್ಲಿನ ವೀಳ್ಯದೆಲೆ ಹೆಚ್ಚು ಬಾಳಿಕೆ ಬರುತ್ತದೆ. ಜತೆಗೆ, ವಿಶೇಷ ಖಾರ ಮತ್ತು ಸ್ವಾದ ಹೊಂದಿದೆ. ಈ ವೀಳ್ಯೆದೆಲೆಗೆ ಪಾಕಿಸ್ತಾನವೇ ದೊಡ್ಡ ಮಾರುಕಟ್ಟೆಯಾಗಿದೆ. ಮೊದಲು ಮುಂಬೈ ಮೂಲಕ ಪಾಕಿಸ್ತಾನಕ್ಕೆ ಈ ವೀಳ್ಯದೆಲೆ ರಫ್ತಾಗುತಿತ್ತು. ನಂತರ ದೆಹಲಿ ಮಾರುಕಟ್ಟೆ ಮೂಲಕ ಪಾಕಿಸ್ತಾನಕ್ಕೆ ರಫ್ತಾಗುತಿತ್ತು. ಐತಿಹಾಸಿಕ ರಫ್ತು ವಹಿವಾಟು ಹೊಂದಿದ್ದ ಈ ವೀಳ್ಯದೆಲೆ ಪಾಕಿಸ್ತಾನಿಯರ ಅಚ್ಚುಮೆಚ್ಚು ಕೂಡ ಆಗಿತ್ತು.
ವೀಳ್ಯದೆಲೆ ಬೆಳೆಗೆ ಪ್ರತಿ ಎಕರೆಗೆ ಮೂರು ಲಕ್ಷ ರೂಪಾಯಿಯಂತೆ ಲಾಭವನ್ನು ಇಲ್ಲಿನ ರೈತರು ಗಳಿಸುತಿದ್ದರು. ಇದೀಗ ರೈತರ ಈ ನಿರ್ಧಾರದಿಂದ ಒಂದು ಎಲೆ ಮೂರು ರೂಪಾಯಿಯಿಂದ ಮೂವತ್ತು ಪೈಸೆಗೆ ಇಳಿಮುಖವಾಗಿದೆ. ಇದೀಗ ಕೋಲ್ಕತ್ತ, ಉತ್ತರ ಪ್ರದೇಶಕ್ಕೆ ಮಾತ್ರ ಈ ಎಲೆ ಸೀಮಿತವಾಗಿದೆ. ಹೀಗಿದ್ದರೂ ಹೊನ್ನಾವರದ ರೈತರು ಮಾತ್ರ, ನಮಗೆ ನಷ್ಟವಾದರೂ ತೊಂದರೆ ಇಲ್ಲ. ಲಾಭಕೊಸ್ಕರ ವೀಳ್ಯದೆಲೆ ಕೊಟ್ಟು ಬಾಂಬ್ ಹಾಕಿಸಿಕೊಳ್ಳುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದ್ದಾರೆ.















