ಕೋಲಾರ: ರಾಹುಲ್ ಗಾಂಧಿ ಏಪ್ರಿಲ್ 5 ಕ್ಕೆ ಕೋಲಾರಕ್ಕೆ ಆಗಮಿಸಲಿದ್ದಾರೆ ಎಂದು ಕೇಂದ್ರದ ಮಾಜಿ ಸಚಿವ ಕೆ.ಎಚ್.ಮುನಿಯಪ್ಪ ತಿಳಿಸಿದರು.
ಮಂಗಳವಾರ ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕೋಲಾರಿಂದಲೇ ಸಂವಿಧಾನ ರಕ್ಷಣೆಗೆ ಕಹಳೆ ಮೊಳಗಿಸಲಿದ್ದಾರೆ ಎಂದರು.
ರಾಹುಲ್ ಅವರ ಸಂಸತ್ ಸದಸ್ಯತ್ವ ಅನರ್ಹತೆ ಬಳಿಕ ಮೊದಲ ಬಹಿರಂಗ ಸಮಾವೇಶ ಇದಾಗಲಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಗೆ ರಾಹುಲ್ ಇಲ್ಲಿಂದಲೇ ಉತ್ತರ ನೀಡಲಿದ್ದಾರೆ. 1 ಲಕ್ಷಕ್ಕೂ ಅಧಿಕ ಜನರನ್ನು ಸೇರಿಸಲಾಗುವುದು ಎಂದರು.
2019ರ ಏ.13 ರಂದು ಕೋಲಾರದಲ್ಲಿ ರಾಹುಲ್ ಭಾಷಣ ಮಾಡಿದ್ದರು. ಹೀಗಾಗಿ, ಇಲ್ಲಿಯೇ ಸಮಾವೇಶ ನಡೆಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಧಾನಿ ಮೋದಿ ಅವರಿಂದ ಪ್ರಜಾಪ್ರಭುತ್ವ ಕಗ್ಗೊಲೆಯಾಗಿದೆ. ಸಂವಿಧಾನಕ್ಕೆ ಅಪಮಾನವಾಗಿದೆ. ಕೋರ್ಟ್ ತೀರ್ಪಿನ ಬಗ್ಗೆ ನಾನು ಮಾತನಾಡುವುದಿಲ್ಲ. ಆದರೆ, ನ್ಯಾಯಾಲಯದ ಆದೇಶ ಪ್ರತಿ ಸಿಕ್ಕುವ ಮುನ್ನವೇ ಅನರ್ಹಗೊಳಿಸಿದ್ದಾರೆ. ಸ್ಪೀಕರ್ ಸ್ಥಾನಕ್ಕೆ ಅಪಮಾನವಾಗಿದೆ. ವಯನಾಡಿನಲ್ಲಿ ಚುನಾವಣೆಗೆ ಸಿದ್ಧತೆ ನಡೆಸಿದ್ದಾರೆ. ಭಾರತ್ ಜೋಡೊ ಯಾತ್ರೆಯಲ್ಲಿ ಲಭಿಸಿದ ಬೆಂಬಲದಿಂದ ಬಿಜೆಪಿ ಭಯಭೀತವಾಗಿದೆ ಎಂದು ತಿಳಿಸಿದರು.














