ರಾಯಚೂರು(Raichur): ಜಿಲ್ಲೆಯ ಚಿಕ್ಕಹೆಸರೂರು ಗ್ರಾಮದ ಬಳಿ ಸಂಚರಿಸುವ ವೇಳೆ ಚಾಲಕನಿಗೆ ಹೃದಯಾಘಾತ ಸಂಭವಿಸಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಈ ಘಟನೆ ರಾಯಚೂರು-ಲಿಂಗಸೂಗುರು ರಸ್ತೆಯಲ್ಲಿ ಬರುವ ಚಿಕ್ಕಹೆಸರೂರು ಗ್ರಾಮದಲ್ಲಿ ಸಂಭವಿಸಿದೆ. ಚಾಲಕ ಹೃದಯಾಘಾತದಿಂದ ಮೃತಪಟ್ಟು, ಬಸ್ ಪಲ್ಟಿಯಾದ ಪರಿಣಾಮ ಹಲವು ಪ್ರಯಾಣಿಕರು ಗಾಯಗೊಂಡಿದ್ದಾರೆ.
ಶ್ರೀನಿವಾಸ್ ನಾರಾಯಣ ಗೌಡ (52) ಮೃತಪಟ್ಟ ಬಸ್ ಚಾಲಕ.
ಚಾಲಕ ಅಸ್ವಸ್ಥಗೊಂಡ ಕಾರಣ ರಾಜಹಂಸ ಬಸ್ ರಸ್ತೆ ಪಕ್ಕಕ್ಕೆ ಪಲ್ಟಿಯಾಗಿದೆ. ನಿರ್ವಾಹಕ ಸೇರಿದಂತೆ 15 ಪ್ರಯಾಣಿಕರು ಗಾಯಗೊಂಡಿದ್ದಾರೆ. ಓರ್ವ ಮಹಿಳೆಗೆ ತೀವ್ರ ಸ್ವರೂಪದ ಗಾಯವಾಗಿದೆ. ಗಾಯಾಳುಗಳನ್ನು ಲಿಂಗಸೂಗೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಸ್ ರಾಯಚೂರಿನಿಂದ ಬೆಳಗಾವಿಗೆ ಸಂಚರಿಸುತ್ತಿತ್ತು. ಮಾರ್ಗಮಧ್ಯದಲ್ಲಿ ಚಾಲಕನಿಗೆ ಹೃದಯಾಘಾತವಾಗಿದೆ.
ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.














