ಹುಬ್ಬಳ್ಳಿ : ತೋಟದ ಮನೆಯೊಂದರಲ್ಲಿ ನಕಲಿ ಮದ್ಯ ತಯಾರಿಕೆ ಅಡ್ಡೆ ಮೇಲೆ ಬೆಳಗಾವಿ ವಿಭಾಗದ ಅಬಕಾರಿ ಜಂಟಿ ಆಯುಕ್ತರ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಅಪಾರ ಪ್ರಮಾಣದ ನಕಲಿ ಮದ್ಯ ಹಾಗೂ ಇತರ ವಸ್ತುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಪ್ರಕರಣದಲ್ಲಿ ಸದ್ಯ ಇಬ್ಬರನ್ನು ಬಂಧಿಸಲಾಗಿದೆ.
ಈ ಕುರಿತಂತೆ ಧಾರವಾಡ ಜಿಲ್ಲಾ ಅಬಕಾರಿ ಉಪ ಆಯುಕ್ತ ರಮೇಶ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, “ಛಬ್ಬಿ ಬಳಿ ತೋಟದ ಮನೆಯಲ್ಲಿ ನಕಲಿ ಮದ್ಯ ತಯಾರಿ ಮಾಡುವ ಖಚಿತ ಮಾಹಿತಿ ಮೇಲೆ ದಾಳಿ ಮಾಡಲಾಗಿದೆ. ಇಬ್ಬರನ್ನು ಬಂಧಿಸಿ ಬಂಧಿತರಿಂದ ನಕಲಿ ಮದ್ಯ ಹಾಗೂ ನಕಲಿ ಮದ್ಯ ತಯಾರಿಕೆಗೆ ಬೇಕಾಗುವ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ. ಲೇಬಲ್ಸ್, ಅಬಕಾರಿ ಭದ್ರತಾ ಚೀಟಿಗಳನ್ನು ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ” ಎಂದರು.
“ಸಮಾರು 5 ಲಕ್ಷ ಮೌಲ್ಯದ ನಕಲಿ ಮದ್ಯ ಹಾಗೂ ಅದಕ್ಕೆ ಬಳಸುವ ವಸ್ತುಗಳನ್ನು ವಶಕ್ಕೆ ಪಡೆದು, ಹುಬ್ಬಳ್ಳಿಯ ಸಂದೀಪ್ ಹಾಗೂ ಅಮೃತ್ ಎಂಬುವರನ್ನು ಬಂಧಿಸಲಾಗಿದೆ. ಇನ್ನೋರ್ವ ಆರೋಪಿ ವಿನಾಯಕ ಎಂಬಾತ ತಲೆಮರೆಸಿಕೊಂಡಿದ್ದು, ಆತನ ವಶಕ್ಕೆ ಪಡೆದ ಮೇಲೆ ಈ ನಕಲಿ ಮದ್ಯದ ಜಾಲ ಎಲ್ಲಿಯವರೆಗೆ ಹರಡಿದೆ ಎಂಬುದು ತಿಳಿದು ಬರಲಿದೆ”.
“ತೋಟದ ಮನೆಯವರಿಗೂ ಈ ನಕಲಿ ಮದ್ಯ ತಯಾರಿಕೆಗೆ ಸಂಬಂಧವಿಲ್ಲ. ಆರೋಪಿಗಳು ಗೊಬ್ಬರದ ಅಂಗಡಿ ಮಾಡುತ್ತೇವೆ ಎಂದು ತೋಟದ ಮನೆ ಬಾಡಿಗೆ ಪಡೆದುಕೊಂಡಿದ್ದಾರೆ. ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗುವುದು. ಇದರ ನಂತರ ಜಾಲದ ಬಗ್ಗೆ ತನಿಖೆ ನಡೆಸಲಾಗುವುದು. 24 ಬಾಕ್ಸ್ ನಕಲಿ ಮದ್ಯದ ಬಾಕ್ಸ್ನಲ್ಲಿ ಒಂದೊಂದು ಬಾಟಲ್ ತೆಗೆಯಲಾಗಿದ್ದು, ಧಾರವಾಡದ ಲ್ಯಾಬ್ ನಲ್ಲಿ ಪರೀಕ್ಷೆಗೆ ಒಳಪಡಿಸಲಾಗುವುದು” ಎಂದು ಮಾಹಿತಿ ನೀಡಿದರು.














