ಬೆಂಗಳೂರು: ರಾಜ್ಯದಲ್ಲಿ ಮುಂಗಾರು ಆರಂಭವಾಗುವ ಮುನ್ನವೇ ಮಳೆಯ ಆರ್ಭಟ ಜೋರಾಗಿದ್ದು, ಬೆಂಗಳೂರು ಸೇರಿದಂತೆ 8 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ದಕ್ಷಿಣ ಕನ್ನಡ, ಉತ್ತರ ಕನ್ನಡ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಜೂನ್ 3 ರವರೆಗೆ ಮಳೆಯಾಗುವ ಸಾಧ್ಯತೆ ಇದ್ದು ಜಿಲ್ಲೆಯಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದೆ. ಹೀಗಾಗಿ ಮಡಿಕೇರಿ ನಗರಸಭಾ ವ್ಯಾಪ್ತಿಯ ಹಲವು ಬಡಾವಣೆಗಳಿಗೆ ಹಾಗೂ ಅಪಾಯಕಾರಿ ಪ್ರದೇಶಗಳ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.
ಮಳೆ ಹಿನ್ನೆಲೆ ಭೂ ಕುಸಿತ ಆತಂಕ ಹೆಚ್ಚಿದ್ದು ಮಂಗಳಾದೇವಿ ನಗರ, ಚಾಮುಂಡೇಶ್ವರಿ ನಗರ, ಇಂದಿರಾ ನಗರದ ಜನರಿಗೆ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ನಗರಸಭೆ ಮೌಖಿಕ ಆದೇಶ ನೀಡಿದೆ ಎಂದು ನಗರಸಭಾಧ್ಯಕ್ಷೆ ಅನಿತಾ ಪೂವಯ್ಯ ಮಾಹಿತಿ ನೀಡಿದ್ದಾರೆ.
ಜಿಲ್ಲೆಯ ನದಿ ತೀರದ ನಿವಾಸಿಗಳಿಗೆ ಹಾಗೂ ಸೋಮವಾರಪೇಟೆ ತಾಲೂಕಿನ ನೆಲ್ಲಿ ಹುದಿಕೇರಿ, ವಿರಾಜಪೇಟೆ ತಾಲೂಕಿನ ಕರಡಿಗೋಡು ಸೇರಿದಂತೆ ಹಲವು ಪ್ರದೇಶಗಳ ನಿವಾಸಿಗಳಿಗೆ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ತಿಳಿಸಿದರು.
ಪ್ರವಾಹ ಪರಿಸ್ಥಿತಿ ಎದುರಿಸಲು ಸಜ್ಜಾಗಿರುವಂತೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕರೆ ನೀಡಿದ್ದಾರೆ.
ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಹರಪನಹಳ್ಳಿ, ಕುಷ್ಟಗಿ, ಹಗರಿಬೊಮ್ಮನಹಳ್ಳಿ, ಯಲಬುರ್ಗಾ, ಹಿರೆಕೆರೂರು, ಹಡಗಲಿ, ತ್ಯಾಗರ್ತಿ, ಶಿಗ್ಗಾಂವಿ, ಕೋಣಂದೂರು, ಶಿವಮೊಗ್ಗ, ಆನವಟ್ಟಿ, ವಿರಾಜಪೇಟೆ, ಪೊನ್ನಂಪೇಟೆ, ಮುರ್ನಾಡು, ಕೊಟ್ಟಿಗೆಹಾರ, ಜಯಪುರ, ಧರ್ಮಸ್ಥಳ, ಬನವಾಸಿ, ಬೇವೂರು, ಮುನಿರಾಬಾದ್, ಕವಡಿಮಟ್ಟಿ, ಹುಂಚದಕಟ್ಟೆ, ಹೊನ್ನಾಳಿ, ಗೋಣಿಕೊಪ್ಪಲು, ರಾಯಲ್ಪಾಡು, ಕಿರವತ್ತಿ, ಯಡ್ರಾಮಿ, ಕಲಘಟಗಿ, ದಾವಣಗೆರೆ, ಅಜ್ಜಂಪುರ, ಹೊಸಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ನಾಯಕನಹಟ್ಟಿ, ಗೋಪಾಲ್ನಗರ, ಬೇಲೂರಿನಲ್ಲಿ ಮಳೆಯಾಗಿದೆ.














