ಮನೆ ಕಾನೂನು ಹನುಮಾನ್ ಚಾಲೀಸಾ ಪಠಣ ಪ್ರಕರಣ: ರಾಣಾ ದಂಪತಿಗೆ ಜಾಮೀನು

ಹನುಮಾನ್ ಚಾಲೀಸಾ ಪಠಣ ಪ್ರಕರಣ: ರಾಣಾ ದಂಪತಿಗೆ ಜಾಮೀನು

0

ಮುಂಬೈ(Mumabi): ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್‌ ಠಾಕ್ರೆ ಅವರ ‘ಮಾತೊಶ್ರೀ’ ನಿವಾಸದ ಎದುರು ಹನುಮಾನ್‌ ಚಾಲೀಸಾ ಪಠಣ ಮಾಡುವುದಾಗಿ ಹೇಳಿಕೆ ನೀಡಿ ಬಂಧನಕ್ಕೆ ಒಳಗಾಗಿದ್ದ ಸಂಸದೆ ನವನೀತ್‌ ರಾಣಾ ಮತ್ತು ಅವರ ಪತಿ, ಶಾಸಕ ರವಿ ರಾಣಾ ಅವರಿಗೆ ಮುಂಬೈ ಕೋರ್ಟ್ ಇಂದು ಜಾಮೀನು ನೀಡಿದೆ.

ಏಪ್ರಿಲ್‌ 23ರಂದು ಮುಂಬೈ ಪೊಲೀಸರು ದಂಪತಿಯನ್ನು ಬಂಧಿಸಿದ್ದರು. ಮೆಟ್ರೊಪಾಲಿಟನ್‌ ಮ್ಯಾಜಿಸ್ಟ್ರೇಟ್‌ ಕೋರ್ಟ್‌ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಬಂಧನವನ್ನು ಪ್ರಶ್ನಿಸಿ ದಂಪತಿ ಮುಂಬೈ ಸೆಷನ್ಸ್‌ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ ಅವರಿಗೆ ಇಂದು ಜಾಮೀನು ಮಂಜೂರಾಗಿದೆ.

ರಾಣಾ ದಂಪತಿ ಹನುಮಾನ್‌ ಚಾಲೀಸಾ ಪಠಿಸುವ ಯೋಜನೆಯನ್ನು ಕೈಬಿಟ್ಟರೂ ದೇಶ ದ್ರೋಹ ಕಾಯ್ದೆಯಡಿ ಹಾಗೂ ಐಪಿಸಿಯ ಹಲವು ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ನವನೀತ್ ರಾಣಾ ಬಾಯಖಲಾ ಮಹಿಳಾ ಜೈಲಿನಲ್ಲಿ ಮತ್ತು ರವಿ ರಾಣಾ ಅವರು ತಲೋಜಾ ಜೈಲಿನಲ್ಲಿದ್ದಾರೆ.

ನಟಿ, ರಾಜಕಾರಣಿ ನವನೀತ್‌ ರಾಣಾ ಅವರು ಠಾಣೆಯಲ್ಲಿ ತಮಗೆ ಜಾತಿ ನಿಂದನೆ ಮಾಡಲಾಗಿದೆ. ಅಧಿಕಾರಿಗಳು ನೀರು ಕುಡಿಯಲು ಹಾಗೂ ಶೌಚಾಲಯ ಬಳಸಲು ಬಿಡುತ್ತಿಲ್ಲ ಎಂದು ಸ್ಪೀಕರ್‌ ಓಂ ಬಿರ್ಲಾ ಅವರಿಗೆ ಪತ್ರ ಬರೆದಿದ್ದರು. ಆರೋಪಗಳಿಗೆ ಪ್ರತಿಕ್ರಿಯೆಯಾಗಿ ಮುಂಬೈ ಪೊಲೀಸರು ವಿಡಿಯೊ ಒಂದನ್ನು ಬಿಡುಗಡೆ ಮಾಡಿದ್ದರು. ಆ ವಿಡಿಯೊದಲ್ಲಿ ರಾಣಾ ದಂಪತಿ ಚಹಾ ಸೇವಿಸುತ್ತಿರುವುದು ದಾಖಲಾಗಿತ್ತು.

ಹಿಂದಿನ ಲೇಖನಅರಗ ಜ್ಞಾನೇಂದ್ರ, ಸಿ.ಎನ್.ಅಶ್ವತ್ಥ್ ನಾರಾಯಣ್ ರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ: ಸಿದ್ದರಾಮಯ್ಯ
ಮುಂದಿನ ಲೇಖನನಾಸಾ–2022 ಹ್ಯೂಮನ್ ಎಕ್ಸ್‌ಪ್ಲೊರೇಶನ್ ರೋವರ್ ಚಾಲೆಂಜ್: ಪ್ರಶಸ್ತಿ ಗೆದ್ದ ಭಾರತೀಯ ವಿದ್ಯಾರ್ಥಿಗಳ ತಂಡ