ಮನೆ ರಾಜ್ಯ ರಾಜ್ಯದಲ್ಲಿ ದಾಖಲೆಯ ₹1,281 ಕೋಟಿ ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ!

ರಾಜ್ಯದಲ್ಲಿ ದಾಖಲೆಯ ₹1,281 ಕೋಟಿ ತೆರಿಗೆ ಸಂಗ್ರಹ : ಸಚಿವ ಪ್ರಿಯಾಂಕ್ ಖರ್ಗೆ!

0

ಕಲಬುರಗಿ : ರಾಜ್ಯದಲ್ಲಿ ಈ ಬಾರಿ ದಾಖಲೆಯ ತೆರಿಗೆ ಸಂಗ್ರಹವಾಗಿದ್ದು, ₹1,281 ಕೋಟಿ ಸಂಗ್ರಹವಾಗಿದೆ ಎಂದು ರಾಜ್ಯದ ಸಚಿವ ಪ್ರಿಯಾಂಕ್ ಖರ್ಗೆ ಘೋಷಿಸಿದ್ದಾರೆ. ಇದೇ ಮೊದಲ ಬಾರಿ ಇಷ್ಟು ಮೊತ್ತದ ತೆರಿಗೆ ರಾಜ್ಯ ಸರ್ಕಾರದ ಖಾತೆಗೆ ಸೇರುವ ಮೂಲಕ ಆಡಳಿತದ ನಿಟ್ಟಿನಲ್ಲಿ ಪ್ರಮುಖ ಸಾಧನೆ ಎಂದು ಅವರು ಹೇಳಿದರು.

ಸಚಿವ ಪ್ರಿಯಾಂಕ್ ಖರ್ಗೆ ಅವರು ಕಲಬುರಗಿಯ ಚಿತ್ತಾಪುರ ಪಟ್ಟಣದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಗಲ್ಲು ಇಡುತ್ತಿದ್ದ ಸಂದರ್ಭದಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ಅಮೃತ್ ಯೋಜನೆಯಡಿ ಚಿತ್ತಾಪುರ ಹಾಗೂ ವಾಡಿ ಪಟ್ಟಣಗಳಿಗೆ ಶುದ್ಧ ಕುಡಿಯುವ ನೀರು ಒದಗಿಸುವ ಯೋಜನೆ, ಚಿತ್ತಾಪುರದಲ್ಲಿ ನಿರ್ಮಾಣಗೊಂಡಿರುವ ಕ್ರೀಡಾಂಗಣ ಉದ್ಘಾಟನೆ ಸೇರಿದಂತೆ ಒಟ್ಟು ₹86.79 ಕೋಟಿ ವೆಚ್ಚದ ಯೋಜನೆಗಳಿಗೆ ಚಾಲನೆ ನೀಡಲಾಯಿತು.

ರಾಜ್ಯಾದ್ಯಂತ 5,770 ಅರಿವು ಕೇಂದ್ರಗಳನ್ನು ಸ್ಥಾಪಿಸಲಾಗಿದ್ದು, ಇದರಿಂದ ಗ್ರಾಮೀಣ ಭಾಗದ ಯುವಕ-ಯುವತಿಯರಿಗೆ ಜ್ಞಾನಾರ್ಜನೆಗೆ ಅನುಕೂಲವಾಗುತ್ತಿದೆ ಎಂದು ಅವರು ತಿಳಿಸಿದರು. ಈ ಕೇಂದ್ರಗಳು ಡಿಜಿಟಲ್ ಶಿಕ್ಷಣ, ಉದ್ಯೋಗ ತರಬೇತಿ ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಹಾಯ ಮಾಡುತ್ತಿವೆ.

ನರೇಗಾ ಯೋಜನೆಯಡಿಯಲ್ಲಿ ಕೆಲಸಕ್ಕೆ ಹೋಗುವ ತಾಯಂದಿರ ಮಕ್ಕಳಿಗೆ ಆರೈಕೆ ನೀಡುವ ಉದ್ದೇಶದಿಂದ ರಾಜ್ಯಾದ್ಯಂತ 3,867 ಕೂಸಿನ ಮನೆಗಳನ್ನು ಸ್ಥಾಪಿಸಲಾಗಿದೆ. ಇದರಿಂದ ಸುಮಾರು 50,000ಕ್ಕೂ ಹೆಚ್ಚು ಮಕ್ಕಳಿಗೆ ಸುರಕ್ಷಿತ ಆರೈಕೆಯ ವ್ಯವಸ್ಥೆ ಕಲ್ಪಿಸಲಾಗಿದೆ.

ಚಿತ್ತಾಪುರ ಕ್ಷೇತ್ರದ ಗ್ರಾಮೀಣ ಹಳ್ಳಿಗಳ ಅಭಿವೃದ್ಧಿಗಾಗಿ ₹150 ಕೋಟಿ ವೆಚ್ಚದ ಕ್ರಿಯಾಯೋಜನೆ ಸಿದ್ಧವಾಗಿದ್ದು, 87 ಹಳ್ಳಿಗಳಿಗೆ ಅನುದಾನ ಮಂಜೂರಾಗಿದೆ. ಮುಂದಿನ 15 ದಿನಗಳಲ್ಲಿ ಈ ಯೋಜನೆಗೆ ಅಧಿಕೃತ ಚಾಲನೆ ನೀಡಲಾಗುತ್ತದೆ ಎಂದು ಸಚಿವರು ಹೇಳಿದರು.

ಗುಂಡಗುರ್ತಿ ಬಳಿ ₹25 ಕೋಟಿ ವೆಚ್ಚದಲ್ಲಿ ಸೂರ್ಯ ವಿದ್ಯುತ್ ಉತ್ಪಾದನಾ ಘಟಕ ಸ್ಥಾಪನೆಗೆ ಯೋಜನೆ ರೂಪಿಸಲಾಗಿದೆ. ಇದು ಸ್ಥಳೀಯ ವಿದ್ಯುತ್ ಲಭ್ಯತೆಯನ್ನು ಸುಧಾರಿಸುವಲ್ಲಿ ಸಹಕಾರಿಯಾಗಲಿದೆ. ಜೊತೆಗೆ, ಪ್ರಗತಿ ಪಥ ಮತ್ತು ಕಲ್ಯಾಣ ಪಥ ಯೋಜನೆಗಳಡಿ ರಸ್ತೆಗಳ ಅಭಿವೃದ್ಧಿ ನಡೆಯಲಿದೆ.

ವಾಡಿ ಮತ್ತು ಚಿತ್ತಾಪುರ ಪಟ್ಟಣಗಳ ಸಮಗ್ರ ಅಭಿವೃದ್ಧಿಗೆ ನೀಲನಕ್ಷೆ ಸಿದ್ಧಪಡಿಸಲಾಗುತ್ತಿದ್ದು, ನಗರೀಕರಣದ ಅಗತ್ಯಗಳಿಗೆ ತಕ್ಕಂತೆ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ ಒತ್ತು ನೀಡಲಾಗುತ್ತಿದೆ.