ಮನೆ ರಾಜ್ಯ ನಾಯಕತ್ವದ ಬದಲಾವಣೆ ಚರ್ಚೆ ಹೊತ್ತಲ್ಲೇ ನವೀಕರಣ ದಾಳ ಪ್ರಯೋಗ – ಸಿಎಂ

ನಾಯಕತ್ವದ ಬದಲಾವಣೆ ಚರ್ಚೆ ಹೊತ್ತಲ್ಲೇ ನವೀಕರಣ ದಾಳ ಪ್ರಯೋಗ – ಸಿಎಂ

0

ಬೆಂಗಳೂರು : ಅಧಿಕಾರ ಹಂಚಿಕೆ ಚರ್ಚೆ ನಡೆಯುತ್ತಿರುವಾಗಲೇ ಸಿಎಂ ಸಿದ್ದರಾಮಯ್ಯ ತನ್ನ ಅಧಿಕೃತ ಕಾವೇರಿ ನಿವಾಸದ ನವೀಕರಣಕ್ಕೆ ಮುಂದಾಗಿದ್ದಾರೆ. ಸಿದ್ದರಾಮಯ್ಯನವರು ಸಿಎಂ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ನವೀಕರಣ ಮಾಡಿಸಿದ್ದರು. ಆದರೆ ಈಗ ಮತ್ತೆ ನವೀಕರಣಕ್ಕೆ ಹೈ ಹಾಕುವ ಮೂಲಕ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ.

ಕಾವೇರಿ ನಿವಾಸದ ಗ್ರೌಂಡ್‌ ಫ್ಲೋರ್‌ ನವೀಕರಣದ ಕೆಲಸ ಭರದಿಂದ ಸಾಗುತ್ತಿದೆ. ಸಾಧಾರಣವಾಗಿ ಅಧಿಕಾರದಲ್ಲಿ ಮುಂದುವರೆಯುತ್ತಿದ್ದಾಗ ನವೀಕರಣ ಮಾಡುವುದು ಸಾಮಾನ್ಯ. ಆದರೆ ಈಗ ಪವರ್ ಫೈಟ್ ಹೊತ್ತಿನಲ್ಲೇ ನವೀಕರಣ ಯಾಕೆ ಎಂಬ ಪ್ರಶ್ನೆ ಎದ್ದಿದೆ. ನನ್ನ ಮತ್ತು ಸಿದ್ದರಾಮಯ್ಯ ಮಧ್ಯೆ ಒಪ್ಪಂದ ನಡೆದಿದೆ. ನಾವಿಬ್ಬರೂ ಮಾತನಾಡಿಕೊಂಡಿದ್ದೇವೆ, ಅದರಂತೆ ನಡೆದುಕೊಳ್ಳುತ್ತೇವೆ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಈ ಹಿಂದೆ ಹೇಳಿಕೆ ನೀಡಿದ್ದರು. ಈ ಹೇಳಿಕೆಯ ನಂತರ ಅಧಿಕಾರ ಹಂಚಿಕೆ ಬಗ್ಗೆ ನಡೆಯುತ್ತಿದ್ದ ಚರ್ಚೆಗೆ ಮತ್ತಷ್ಟು ಬಲ ಬಂದಿತ್ತು.

ಮೊದಲು ದೀರ್ಘಾವಧಿ ಸಿಎಂ ದಾಖಲೆ, ನಂತರ ಮಾರ್ಚ್‌ 6ಕ್ಕೆ ದಾಖಲೆಯ 17ನೇ ಬಜೆಟ್ ಮಂಡಿಸಿದ ನಂತರ ಅಧಿಕಾರ ಹಸ್ತಾಂತರವಾಗಲಿದೆ ಎಂಬ ಮಾತುಗಳು ಹರಿದಾಡಲು ಆರಂಭವಾಯಿತು. ಈ ಎಲ್ಲದರ ಮಧ್ಯೆ ಸಿಎಂ ನವೀಕರಣಕ್ಕೆ ಮುಂದಾಗುವ ಮೂಲಕ ಈಗ ಹೊಸ ದಾಳ ಉರುಳಿಸಿದ್ದಾರೆ. ಸಿದ್ದರಾಮಯ್ಯನವರ ಈ ನಿರ್ಧಾರದಿಂದ ಡಿಸಿಎಂ ಡಿಕೆಶಿ ಟೀಂಗೆ ಗೊಂದಲವಾಗಿದ್ದರೆ ಅಧಿಕಾರಿಗಳೂ ಗಲಿಬಿಲಿಗೊಂಡಿದ್ದಾರೆ. ನವೀಕರಣ ರಾಜಕಾರಣದ ಮೂಲಕ ಸಿದ್ದರಾಮಯ್ಯನವರು ಸದ್ಯಕ್ಕೆ ನಾನು ಯಾವುದಕ್ಕೂ ಜಗ್ಗುವುದಿಲ್ಲ ಎಂಬ ಸಂದೇಶ ಕಳುಹಿಸಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.