ಮೈಸೂರು : ಜಮೀನಿನಲ್ಲಿ ತೋಡಿದ್ದ ಆಳವಾದ ಗುಂಡಿಗೆ ಬಿದ್ದ ಕಾಡಾನೆಯೊಂದು ಮೇಲೇಳು ಆಗದೆ ಪರದಾಡಿದ ಘಟನೆ ಬಂಡೀಪುರ ಅರಣ್ಯ ವಾಪ್ತಿಯ ನಂಜನಗೂಡು ತಾಲ್ಲೂಕು ಹಂಚೀಪುರ ಗ್ರಾಮದಲ್ಲಿ ನಡೆದಿದೆ.
ಆಹಾರ ಅರಸಿ ಕಾಡಿನಿಂದ ನಾಡಿನತ್ತ ಬುಧವಾರ ಬಂದ ಗಂಡಾನೆ ಹಂಚೀಪುರ ಗ್ರಾಮದ ಮಹದೇವಪ್ಪ ಎಂಬುವವರ ಜಮೀನಿನಲ್ಲಿ ತೋಡಲಾಗಿದ್ದ ಗುಂಡಿಗೆ ಬಿದ್ದಿದೆ. ಇದನ್ನು ಕಂಡ ಸ್ಥಳೀಯ ರೈತರು ದೂರವಾಣಿ ಮೂಲಕ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಅಷ್ಟರಲ್ಲಾಗಲೇ ಗ್ರಾಮದ ಅಕ್ಕಪಕ್ಕದ ಜನರ ಹಿಂಡೆ ಸೇರಿ ಕಾಡಾನೆ ಪರಿತಪಿಸುತ್ತಿದ್ದ ಸ್ಥಿತಿ ಕಂಡು ಮರುಕ ವ್ಯಕ್ತಪಡಿಸಿದರು.
ವಿಷಯ ತಿಳಿದು ಸ್ಥಳಕ್ಕೆ ಬಂದ ಅರಣ್ಯಾಧಿಕಾರಿಗಳು ಜೆಸಿಬಿ ಮೂಲಕ ಹಳ್ಳಕ್ಕೆ ಬಿದ್ದಿದ್ದ ಕಾಡಾನೆಯನ್ನು ಮೇಲಕ್ಕೆ ಎತ್ತುವಲ್ಲಿ ಯಶಸ್ವಿಯಾದರು.
ಹಳ್ಳದಲ್ಲಿ ಬಿದ್ದು ಗಾಬರಿಗೊಂಡಿದ್ದ ಕಾಡಾನೆ ಮೇಲಕ್ಕೆ ಬರುತ್ತಿದ್ದಂತೆ ಜನರ ಬಳಿ ನುಗ್ಗಲು ಯತ್ನಿಸಿತು. ಆಗ ಗ್ರಾಮಸ್ಥರು ಶಿಳ್ಳೆ ಚಪ್ಪಾಳೆ ಹೊಡೆದು ಏರಿದ ಧನಿಯಲ್ಲಿ ಕೂಗಿದರು. ಅರಣ್ಯ ಇಲಾಖೆಯವರ ಸಹಾಯದಿಂದ ಆನೆ ಕಾಡಿನತ್ತ ತೆರಳುವಂತೆ ಮಾಡಿದರು.














