ಬೆಂಗಳೂರು : ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ನಿರ್ಬಂಧ ಮಾಡಿರೋ ಸರ್ಕಾರದ ನಡೆಯನ್ನ ಜೆಡಿಎಸ್ ಖಂಡಿಸಿದೆ. ಎಕ್ಸ್ನಲ್ಲಿ ಪ್ರತಿಕ್ರಿಯೆ ನೀಡಿರೋ ಜೆಡಿಎಸ್, ಇದು ಸರ್ಕಾರದ ಹೇಡಿತನಕ್ಕೆ ಸಾಕ್ಷಿ ಅಂತ ವಾಗ್ದಾಳಿ ನಡೆಸಿದೆ.
ಪ್ರಶ್ನೆ ಕೇಳುವ ಪತ್ರಕರ್ತರನ್ನು ಕಂಡರೆ ಭ್ರಷ್ಟ ಕಾಂಗ್ರೆಸ್ ಸರ್ಕಾರಕ್ಕೆ ಇಷ್ಟೊಂದು ನಡುಕವೇ? ವಿಧಾನಸೌಧದಲ್ಲಿ ಮಾಧ್ಯಮಗಳ ಪ್ರವೇಶಕ್ಕೆ ನಿರ್ಬಂಧ ಹೇರುತ್ತಿರುವುದು ಸಿದ್ದರಾಮಯ್ಯ ಸರ್ಕಾರದ ಹೇಡಿತನಕ್ಕೆ ಸಾಕ್ಷಿ. ಸಚಿವರು, ಶಾಸಕರ ಭ್ರಷ್ಟಾಚಾರವನ್ನು ಪ್ರಶ್ನಿಸಿದರೆ ಭಯವೇಕೆ? ಮಾಧ್ಯಮಗಳ ಧ್ವನಿ ಅಡಗಿಸುವುದು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ವಿರುದ್ಧವಾದ ನಡೆಯಲ್ಲವೇ ಎಂದು ಕಿಡಿಕಾರಿದೆ.
ಸಿದ್ದರಾಮಯ್ಯ ಅವರೇ? ಸಂವಿಧಾನ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಮಾತನಾಡುವ ಸಮಾಜವಾದಿ ಮುಖವಾಡ ತೊಟ್ಟ ಮಜವಾದಿಗೆ ಇಂದು ನಡುಕ ಶುರುವಾಗಿದೆ. ಸರ್ಕಾರದ ಹಗರಣಗಳು, ಕಮಿಷನ್, ಟ್ರಾನ್ಸ್ಫರ್ ದಂಧೆ, ಅಕ್ರಮಗಳು ಬಯಲಾಗುತ್ತವೆ ಎಂಬ ಆತಂಕದಿಂದ ಮಾಧ್ಯಮಗಳ ಸ್ವಾತಂತ್ರ್ಯ ಕಸಿಯಲು ಮುಂದಾಗಿದೆ.
ಇದು ಪ್ರಜಾಪ್ರಭುತ್ವದ ಆಶಯದ ಮೇಲೆ ಪ್ರಹಾರವಾಗಿದೆ. ಮಾಧ್ಯಮಗಳು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಮುಖ್ಯಮಂತ್ರಿಗಳೇ, ಸತ್ಯವನ್ನು ಮುಚ್ಚಿಡಲು ಗೋಡೆಗಳನ್ನು ಕಟ್ಟುವುದು ಬಿಟ್ಟು, ಪಾರದರ್ಶಕ ಆಡಳಿತ ನೀಡಿ ಅಂತ ಆಗ್ರಹಿಸಿದೆ.















