ಮನೆ ಕಾನೂನು ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂ ಕೋರ್ಟ್‌’ಗೆ ಕೇಂದ್ರದ ಪ್ರತಿಕ್ರಿಯೆ

ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿಲ್ಲ: ಸುಪ್ರೀಂ ಕೋರ್ಟ್‌’ಗೆ ಕೇಂದ್ರದ ಪ್ರತಿಕ್ರಿಯೆ

0

ನವ ದೆಹಲಿ: ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ ಎಂದು ಕೇಂದ್ರವು ಸುಪ್ರೀಂ ಕೋರ್ಟ್‌’ಗೆ ತಿಳಿಸಿದೆ.

ಸಂವಿಧಾನದ 14, 21 ಮತ್ತು 25ನೇ ವಿಧಿಗಳನ್ನು ಉಲ್ಲಂಘಿಸುವ, ವಂಚನೆಯ ಮೂಲಕ ಧಾರ್ಮಿಕ ಮತಾಂತರ, ಬೆದರಿಕೆ, ಉಡುಗೊರೆಗಳು ಮತ್ತು ವಿತ್ತೀಯ ಪ್ರಯೋಜನಗಳ ಮೂಲಕ ಮೋಸಗೊಳಿಸಿ ಧಾರ್ಮಿಕ ಮತಾಂತರಗಳ ವಿರುದ್ಧ ವಕೀಲ ಅಶ್ವಿನಿ ಉಪಾಧ್ಯಾಯ ಸಲ್ಲಿಸಿದ ಅರ್ಜಿಗೆ ಕೇಂದ್ರ ಸರ್ಕಾರ ತನ್ನ ಪ್ರತಿಕ್ರಿಯೆ ಸಲ್ಲಿಸಿದೆ.

ಇಂಥ ಮತಾಂತರಗಳನ್ನು ತಡೆಯದಿದ್ದರೆ ಹಿಂದೂಗಳು ಶೀಘ್ರದಲ್ಲೇ ಭಾರತದಲ್ಲಿ ಅಲ್ಪಸಂಖ್ಯಾತರಾಗುತ್ತಾರೆ ಎಂದು ಅರ್ಜಿಯಲ್ಲಿ ಕಳವಳ ವ್ಯಕ್ತಪಡಿಸಲಾಗಿದೆ.

ಇದಕ್ಕೆ ಪ್ರತಿಯಾಗಿ ಅಫಿಡವಿಟ್‌ ಸಲ್ಲಿಸಿದ ಕೇಂದ್ರ ಗೃಹ ಸಚಿವಾಲಯ, ಧರ್ಮದ ಸ್ವಾತಂತ್ರ್ಯದ ಹಕ್ಕು ಇತರ ಜನರನ್ನು ನಿರ್ದಿಷ್ಟ ಧರ್ಮಕ್ಕೆ ಪರಿವರ್ತಿಸುವ ಮೂಲಭೂತ ಹಕ್ಕನ್ನು ಒಳಗೊಂಡಿಲ್ಲ. ಹೇಳಲಾದ ಹಕ್ಕು ಖಂಡಿತವಾಗಿಯೂ ವ್ಯಕ್ತಿಯೊಬ್ಬನನ್ನು ವಂಚನೆ, ಬಲಾತ್ಕಾರ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ಮತಾಂತರಿಸುವ ಹಕ್ಕನ್ನು ಒಳಗೊಳ್ಳುವುದಿಲ್ಲ ಎಂದು ತಿಳಿಸಿದೆ.ಮೋಸ, ವಂಚನೆ, ಬಲಾತ್ಕಾರ, ಆಮಿಷ ಅಥವಾ ಇತರ ವಿಧಾನಗಳ ಮೂಲಕ ದೇಶದಲ್ಲಿನ ಅಮಾಯಕ ನಾಗರಿಕರನ್ನು ಸಂಘಟಿತವಾಗಿ, ವ್ಯವಸ್ಥಿತವಾಗಿ ಮತ್ತು ಅತ್ಯಾಧುನಿಕ ರೀತಿಯಲ್ಲಿ ಮತಾಂತರ ಮಾಡುವ ಅನೇಕ ನಿದರ್ಶನಗಳನ್ನು ಅರ್ಜಿದಾರರು ಎತ್ತಿ ತೋರಿಸಿದ್ದಾರೆ ಎಂದು ಕೇಂದ್ರ ಸರ್ಕಾರ ಹೇಳಿದೆ.

ಸಂವಿಧಾನದ 25 ನೇ ಪರಿಚ್ಛೇದದ ಅಡಿಯಲ್ಲಿ ಬರುವ ‘ಪ್ರಚಾರ’ ಪದದ ಅರ್ಥ ಮತ್ತು ಉದ್ದೇಶವನ್ನು ಸಂವಿಧಾನ ಸಭೆಯಲ್ಲಿ ಬಹಳ ವಿವರವಾಗಿ ಚರ್ಚಿಸಲಾಗಿದೆ ಮತ್ತು ಮತ್ತು ಆರ್ಟಿಕಲ್ 25 ರ ಅಡಿಯಲ್ಲಿ ಮೂಲಭೂತ ಹಕ್ಕು ಮತಾಂತರದ ಹಕ್ಕನ್ನು ಒಳಗೊಂಡಿರುವುದಿಲ್ಲ ಎಂಬ ಸ್ಪಷ್ಟೀಕರಣದ ನಂತರವೇ ಸಂವಿಧಾನ ಸಭೆಯು ಈ ಪದದ ಸೇರ್ಪಡೆಯನ್ನು ಅಂಗೀಕರಿಸಿದೆ ಎಂದು ಅದು ಹೇಳಿದೆ.

‘ಪ್ರಚಾರ’ ಎಂಬ ಪದವು ವ್ಯಕ್ತಿಯನ್ನು ಮತಾಂತರಗೊಳಿಸುವ ಹಕ್ಕನ್ನು ಕಲ್ಪಿಸುವುದಿಲ್ಲ. ಬದಲಿಗೆ ಅದರ ತತ್ವಗಳನ್ನು ಬಹಿರಂಗಪಡಿಸುವ ಮೂಲಕ ಧರ್ಮವನ್ನು ಹರಡುವ ಸಕಾರಾತ್ಮಕ ಹಕ್ಕಿನ ಸ್ವರೂಪದಲ್ಲಿದೆ ಎಂದು ಸುಪ್ರೀಂ ಕೋರ್ಟ್ ಹೇಳಿದ್ದನ್ನು ಕೇಂದ್ರ ಸರ್ಕಾರ ಈ ಸಂದರ್ಭದಲ್ಲಿ ಉಲ್ಲೇಖಿಸಿದೆ.

ಸಾರ್ವಜನಿಕ ಸುವ್ಯವಸ್ಥೆಗೆ ಅಡ್ಡಿಯಾಗುವುದು ಮಾತ್ರವಲ್ಲದೆ, ಮೋಸದ ಅಥವಾ ಪ್ರೇರಿತ ಮತಾಂತರವು ವ್ಯಕ್ತಿಯ ಆತ್ಮಸಾಕ್ಷಿಯ ಸ್ವಾತಂತ್ರ್ಯದ ಹಕ್ಕನ್ನು ಪ್ರತಿಬಂಧಿಸುತ್ತದೆ ಎಂದು ಸುಪ್ರೀಂ ಕೋರ್ಟ್ ಹೇಳಿದೆ.

ಹಾಗಾಗಿಯೇ ಕೇಂದ್ರ ಸರ್ಕಾರವು ಅದನ್ನು ನಿಯಂತ್ರಿಸುವ ಮತ್ತು ತಡೆಗಟ್ಟುವ ಎಲ್ಲ ಅಧಿಕಾರಗಳನ್ನು ಒಳಗೊಂಡಿದೆ ಎಂದು ಕೇಂದ್ರ ಸರ್ಕಾರ ಪ್ರತಿಪಾದಿಸಿದೆ.

ಪ್ರಸ್ತುತ ವಿಷಯದ ಕುರಿತು ಒಡಿಶಾ, ಮಧ್ಯಪ್ರದೇಶ, ಗುಜರಾತ್, ಛತ್ತೀಸ್‌ಗಢ, ಜಾರ್ಖಂಡ್, ಉತ್ತರಾಖಂಡ, ಉತ್ತರ ಪ್ರದೇಶ, ಕರ್ನಾಟಕ ಮತ್ತು ಹರಿಯಾಣ ಈ ಒಂಬತ್ತು ರಾಜ್ಯ ಸರ್ಕಾರಗಳು ಈಗಾಗಲೇ ಶಾಸನಗಳನ್ನು ಹೊಂದಿವೆ ಎಂದು ಕೇಂದ್ರ ಹೇಳಿದೆ.

ಹಿಂದಿನ ಲೇಖನಸಂವರಣ – ತಪತಿ
ಮುಂದಿನ ಲೇಖನವಂದೇ ಮಾತರಂ ಬಗ್ಗೆ ಬ್ರಿಟಿಷರಿಗೆ ಇದ್ದಷ್ಟೇ ಕೋಪ ಸಿದ್ದರಾಮಯ್ಯ ಅವರಿಗಿದೆ: ನಳಿನ್ ಕುಮಾರ್ ಕಟೀಲ್ ಆರೋಪ