ಮುಂಬಯಿ/ ಬೆಂಗಳೂರು: ʼಕಾಂತಾರʼ ಸಿನಿಮಾದ ಬಳಿಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ರಿಷಬ್ ಶೆಟ್ಟಿ ಇತರೆ ಭಾಷೆಯ ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ಲೀಡ್ ರೋಲ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಇತ್ತೀಚೆಗೆ ʼಹನುಮಾನ್ʼ ಖ್ಯಾತಿ ಪ್ರಶಾಂತ್ ವರ್ಮಾ ಅವರ ʼಜೈ ಹನುಮಾನ್ʼ ಚಿತ್ರದಲ್ಲಿ ಕಾಣಿಸಿಕೊಳ್ಳಲಿರುವ ರಿಷಬ್ ಅವರ ಫಸ್ಟ್ ಲುಕ್ ರಿಲೀಸ್ ಆಗಿತ್ತು. ಇದಾದ ಕೆಲ ದಿನಗಳಿಕ ರಿಷಬ್ ಶೆಟ್ಟಿ ಮತ್ತೊಂದು ತೆಲುಗು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿದೆ.
ಈ ವಿಚಾರ ಸುದ್ದಿಯಲ್ಲಿರುವಾಗಲೇ ರಿಷಬ್ ಶೆಟ್ಟಿ ಅವರು ಮತ್ತೊಂದು ಐತಿಹಾಸಿಕ ಸಿನಿಮಾವೊಂದರಲ್ಲಿ ಪ್ರಧಾನ ಪಾತ್ರದಲ್ಲಿ ಬಣ್ಣ ಹಚ್ಚಲಿದ್ದಾರೆ ಎನ್ನುವ ಬಗ್ಗೆ ಅಧಿಕೃತವಾಗಿ ಸುದ್ದಿ ಹೊರಬಿದ್ದಿದೆ.
ಬಾಲಿವುಡ್ ಖ್ಯಾತ ನಿರ್ಮಾಪಕ ಕಂ ನಿರ್ದೇಶಕ ನಿರ್ದೇಶಕ ಸಂದೀಪ್ ಸಿಂಗ್ ಅವರ ಹಿಸ್ಟೋರಿಕಲ್ ಡ್ರಾಮಾ ‘ದಿ ಪ್ರೈಡ್ ಆಫ್ ಭಾರತ್: ಛತ್ರಪತಿ ಶಿವಾಜಿ ಮಹಾರಾಜ್’ ಎನ್ನುವ ಸಿನಿಮಾದಲ್ಲಿ ಶಿವಾಜಿಯ ಪಾತ್ರದಲ್ಲಿ ರಿಷಬ್ ಕಾಣಿಸಿಕೊಳ್ಳಲಿದ್ದಾರೆ.
17ನೇ ಶತಮಾನದ ಭಾರತೀಯ ದೊರೆ ಶಿವಾಜಿ ಭೋಂಸ್ಲೆ ಅವರ ಜೀವನವನ್ನು ಆಧರಿಸಿದ ಸಿನಿಮಾ ಇದಾಗಿರಲಿದ್ದು, ರಿಷಬ್ ಶಿವಾಜಿ ಪಾತ್ರವನ್ನು ಮಾಡಲಿದ್ದಾರೆ. ಯುದ್ಧಕ್ಕೆ ನಿಂತ ಸಾಮ್ರಾಟನಂತೆ ರಿಷಬ್ ಶಿವಾಜಿಯಾಗಿ ಕಾಣಿಸಿಕೊಂಡಿರುವ ಪೋಸ್ಟರ್ ರಿಲೀಸ್ ಆಗುವ ಮೂಲಕ ಸಿನಿಮಾ ಅಧಿಕೃತವಾಗಿ ಅನೌನ್ಸ್ ಆಗಿದೆ.
ಈ ಹಿಂದೆ ಶಿವಾಜಿ ಕುರಿತ ಸಿನಿಮಾ ಬರಲಿದೆ ಎನ್ನುವ ಮಾತು ಕೇಳಿ ಬಂದಿತ್ತು. ಆದರೆ ಆ ಬಳಿಕ ಸಿನಿಮಾದ ಬಗ್ಗೆ ಯಾವ ಅಪ್ಡೇಟ್ ಕೂಡ ಬಂದಿರಲಿಲ್ಲ.
ಸಂದೀಪ್ ಸಿಂಗ್ ನಿರ್ದೇಶನ: ಈ ಸಿನಿಮಾವನ್ನು ನಿರ್ಮಾಪಕ ಕಂ ನಿರ್ದೇಶಕ ಸಂದೀಪ್ ಸಿಂಗ್ ನಿರ್ದೇಶನ ಮಾಡಲಿದ್ದಾರೆ. ಸಂದೀಪ್ ಈ ಹಿಂದೆ ʼಮೇರಿ ಕೋಮ್ʼ ಸಿನಿಮಾವನ್ನು ಸಹ ನಿರ್ಮಾಣ ಮಾಡಿದ್ದರು. “ಅಲಿಘರ್” (2015), “ಜುಂಡ್” (2022) ಸಿನಿಮಾಕ್ಕೆ ಬಂಡವಾಳ ಹಾಕಿದ್ದರು.
ʼಸಫೆದ್ʼ ಎನ್ನುವ ತೃತ್ತೀಯ ಲಿಂಗಿಯ ಕಥೆಯ ಸಿನಿಮಾವನ್ನು ನಿರ್ದೇಶನ ಮಾಡಿದ್ದರು. ಇತ್ತೀಚೆಗೆ ʼಫೌಜಿ-2ʼ ಸರಣಿಯನ್ನು ನಿರ್ದೇಶನ ಮಾಡಿದ್ದರು.
“ರಿಷಬ್ ಶೆಟ್ಟಿ ಈ ಪಾತ್ರಕ್ಕೆ ನನ್ನ ಮೊದಲ ಮತ್ತು ಏಕೈಕ ಆಯ್ಕೆಯಾಗಿದ್ದರು. ಅವರು ನಿಜವಾಗಿಯೂ ಛತ್ರಪತಿ ಶಿವಾಜಿ ಮಹಾರಾಜರ ಶಕ್ತಿ, ಚೈತನ್ಯ ಮತ್ತು ಶೌರ್ಯವನ್ನು ಸಾಕಾರಗೊಳಿಸಿದ್ದಾರೆ. ಈ ಚಿತ್ರವು ನನ್ನ ಹಲವು ವರ್ಷಗಳ ಕನಸಾಗಿದ್ದು, ಈ ಕಥೆಯನ್ನು ಬೆಳ್ಳಿತೆರೆಗೆ ತರುತ್ತಿರುವುದು ನನಗೆ ಹೆಮ್ಮೆಯ ವಿಷಯವಾಗಿದೆ ಎಂದು ಸಂದೀಪ್ ಹೇಳಿದ್ದಾರೆ.
ʼಶಿವಾಜಿʼ ಸಿನಿಮಾ 2027ರ ಜನವರಿ 21 ರಂದು ಬಹುಭಾಷೆಯಲ್ಲಿ ರಿಲೀಸ್ ಆಗಲಿದೆ ಎಂದು ಚಿತ್ರತಂಡ ಹೇಳಿದೆ. ಸದ್ಯ ರಿಷಬ್ ʼಕಾಂತಾರ-1ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ʼಜೈ ಹನುಮಾನ್ʼ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.














