ರಾಜ್ಯದೆಲ್ಲೆಡೆ 70ನೇ ಕನ್ನಡ ರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಕಾಂತಾರ ಹೀರೋ ರಿಷಬ್ ಶೆಟ್ಟಿ, ಕೆಜಿಎಫ್ ಸ್ಟರ್ ಯಶ್ ಸೇರಿದಂತೆ ಚಿತ್ರರಂಗದ ನಟ, ನಟಿಯರು ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ.
ರಾಷ್ಟ್ರಕವಿ ಕುವೆಂಪು ಅವರ ಕವನದ ಸಾಲುಗಳನ್ನು ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ನಟ, ನಿರ್ದೇಶಕ ರಿಷಬ್ ಶೆಟ್ಟಿ ಅವರು ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ‘ಎಲ್ಲಾದರು ಇರು ಎಂತಾದರು ಇರು, ಎಂದೆಂದಿಗೂ ನೀ ಕನ್ನಡವಾಗಿರು.. ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು’ ಎಂದು ಪೋಸ್ಟ್ ಹಂಚಿಕೊಂಡಿದ್ದಾರೆ.
‘ಎದೆ ತಟ್ಟಿ ಹೇಳು ನಾ ಭಾರತೀಯನೆಂದು, ಗರ್ವದಿಂದ ಬಾಳು ನಾ ಕನ್ನಡಿಗನೆಂದು, ಸಾವಿರ ಭಾಷೆ ನಾಲಿಗೆಯಲ್ಲಿರಲಿ, ಕನ್ನಡ ಭಾಷೆ ಹೃದಯದಲ್ಲಿರಲಿ, ಸಿರಿಗನ್ನಡಂ ಗೆಲ್ಗೆ ಸಿರಿಗನ್ನಡಂ ಬಾಳ್ಗೆ’ ಅಂತ ಎಕ್ಸ್ ಖಾತೆಯಲ್ಲಿ ನಟ ಯಶ್ ಪೋಸ್ಟ್ ಮಾಡಿ ಶುಭಾಶಯ ತಿಳಿಸಿದ್ದಾರೆ.
ಕರ್ನಾಟಕ ನಕ್ಷೆಯಲ್ಲಿ ಭುವನೇಶ್ವರಿ ದೇವಿ ಇರುವ ಫೋಟೊ ಹಂಚಿಕೊಂಡಿರುವ ನಟ ಡಾಲಿ ಧನಂಜಯ್, ‘ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಶುಭಾಶಯ’ ಕೋರಿದ್ದಾರೆ.














