ಮನೆ ಅಪರಾಧ ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ; ನನಗೂ ಬೈರತಿ ಬಸವರಾಜ್‌ಗೂ ಸಂಬಂಧವಿಲ್ಲ – ಜಗ್ಗ

ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣ; ನನಗೂ ಬೈರತಿ ಬಸವರಾಜ್‌ಗೂ ಸಂಬಂಧವಿಲ್ಲ – ಜಗ್ಗ

0

ಬೆಂಗಳೂರು : ರೌಡಿಶೀಟರ್ ಬಿಕ್ಲು ಶಿವ ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆಗಿರುವ ಎ1 ಆರೋಪಿ ಜಗ್ಗನನ್ನು ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ. ಈ ವೇಳೆ ನನಗೂ ಶಾಸಕ ಬೈರತಿ ಬಸವರಾಜ್‌ಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾನೆ.

ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ, ಎ1 ಆರೋಪಿ ಜಗದೀಶ್ ಅಲಿಯಾಸ್ ಜಗ್ಗನನ್ನು ಸಿಐಡಿ ಅಧಿಕಾರಿಗಳು ನೆನ್ನೆ (ಮಂಗಳವಾರ) ಬಂಧಿಸಿದ್ದರು. ಸದ್ಯಕ್ಕೆ ಆತನನ್ನು 10 ದಿನಗಳ ಕಾಲ ಕಸ್ಟಡಿಗೆ ಪಡೆದುಕೊಂಡಿದ್ದು, ತನಿಖಾ ತಂಡ ವಿಚಾರಣೆ ಆರಂಭಿಸಿದೆ.

ಸಿಐಡಿ ಎಸ್.ಪಿ ವೆಂಕಟೇಶ್ ನೇತೃತ್ವದಲ್ಲಿ ವಿಚಾರಣೆ ನಡೆಸಲಾಗಿದ್ದು, ಬಿಕ್ಲು ಶಿವನ ಜೊತೆ ಇದ್ದ ವೈಷಮ್ಯದ ಬಗ್ಗೆ, ಕಿತ್ತಗನೂರಿನ ಜಮೀನಿನ ಗಲಾಟೆಯ ಬಗ್ಗೆ, ಹಳೆ ಕೇಸ್‌ಗಳು, ಬೈರತಿ ಬಸವರಾಜ್ ಜೊತೆಗಿನ ಸಂಪರ್ಕ ಸೇರಿ ಹಲವು ವಿಚಾರಗಳನ್ನು ಬಾಯ್ಬಿಡಿಸಲು ಯತ್ನಿಸುತ್ತಿದ್ದಾರೆ ಎನ್ನಲಾಗಿದೆ.

ಈ ವೇಳೆ ಜಗ್ಗ, ನನಗೂ ಬೈರತಿ ಬಸವರಾಜ್‌ಗೂ ಆತ್ಮೀಯತೆ ಇಲ್ಲ. ಕ್ಷೇತ್ರದ ಶಾಸಕರಾದ ಹಿನ್ನೆಲೆ ಹಲವು ಕಾರ್ಯಕ್ರಮಗಳಲ್ಲಿ ಭೇಟಿಯಾಗಿದ್ದೆ. ಇನ್ನು ಕುಂಭಮೇಳಕ್ಕೆ ಹೋಗಿದ್ದಾಗ ಅಲ್ಲಿ ಸಿಕ್ಕಿದ್ದರು. ಭೇಟಿಯಾಗಿ ಫೋಟೊ ತೆಗೆದುಕೊಂಡಿದ್ದೆ. ಕ್ಷೇತ್ರದ ಶಾಸಕರು ಅಂತಾ ಫೋಟೋ ತೆಗೆಸಿಕೊಂಡಿದ್ದು, ಬಿಕ್ಲು ಶಿವ ಕೊಲೆಗೂ ಶಾಸಕರಿಗೂ ಯಾವ ಸಂಬಂಧವಿಲ್ಲ ಎಂದು ಹೇಳಿಕೊಂಡಿದ್ದಾನೆ. ತನಿಖಾಧಿಕಾರಿಗಳು ಕೊಲೆಯಲ್ಲಿ ಜಗ್ಗನ ಪಾತ್ರದ ಬಗ್ಗೆ ಸಾಕ್ಷ್ಯಗಳನ್ನು ಸಂಗ್ರಹಿಸಿ ವಿಚಾರಣೆಯನ್ನು ಮುಂದುವರೆಸಿದ್ದಾರೆ.