ಬೆಂಗಳೂರು : ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರಿಗೆ 50 ಲಕ್ಷ ರೂ. ಪರಿಹಾರ ನೀಡುವುದಾಗಿ ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಮಲ್ಲೇಶ್ವರಂನ ಅರಣ್ಯ ಭವನದಲ್ಲಿ ಹುತಾತ್ಮರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 62 ಜನ ಹುತಾತ್ಮರಾಗಿದ್ದಾರೆ. ವೀರಪ್ಪನ್ ವಿರುದ್ಧ ಕಾರ್ಯಾಚರಣೆ, ಕಳ್ಳಬೇಟೆಗಾರರ ಹತ್ತಿಕ್ಕುವ ವೇಳೆ, ಕಾಡ್ಗಿಚ್ಚು ನಂದಿಸುವ ವೇಳೆ, ಮಾನವ – ಪ್ರಾಣಿಗಳ ಸಂಘರ್ಷದ ವೇಳೆ ಬಲಿಯಾದವರು. ಹುತಾತ್ಮರಾದವರಿಗೆ 50 ಲಕ್ಷ ಪರಿಹಾರ ನೀಡಲಿದ್ದೇವೆ ಎಂದು ಭರವಸೆ ನೀಡಿದರು.
ಈಗ ಹವಾಮಾನ ಬದಲಾವಣೆ ದೊಡ್ಡ ಮಟ್ಟದ ಸಮಸ್ಯೆಯಾಗುತ್ತಿದೆ. ಏಕಾಏಕಿ ಮೇಘಸ್ಫೋಟ, ಅತಿಯಾದ ಮಳೆ ಬರುತ್ತಿದೆ. ಮನುಕುಲವೇ ನಾಶವಾಗುವ ಪರಿಸ್ಥಿತಿ ಉಂಟಾಗುತ್ತಿದೆ. ಕರ್ನಾಟಕವೂ ಕೂಡ ಡೇಂಜರ್ ಝೋನ್ನಲ್ಲಿದೆ. ಭೂ ಕುಸಿತ ಸಂಭವಿಸುತ್ತಿದೆ. ಅರಣ್ಯ ಸಂಪತ್ತನ್ನು ಉಳಿಸೋದು ಮಾತ್ರ ಇದಕ್ಕೆ ಪರಿಹಾರವಾಗಿದ್ದು, ರಾಜ್ಯದಲ್ಲಿ ಸಂಪತ್ತು ಭರಿತವಾದ ಅರಣ್ಯವಿದೆ.
ಪಶ್ಚಿಮ ಘಟ್ಟದಲ್ಲಿ ವಿವಿಧ ಪ್ರಭೇದ ಜೀವ ವೈವಿಧ್ಯ ತಾಣಗಳು ಇದೆ. ಮಳೆ ಮಾರುತವನ್ನು ಬದಲಾವಣೆ ಮಾಡಿ, ಮಳೆಯನ್ನು ತರಿಸುವ ಶಕ್ತಿ ಪಶ್ಚಿಮ ಘಟ್ಟಗಳಿಗೆ ಇದೆ. 2 ಲಕ್ಷ ಎಕ್ರೆ ಭೂಮಿಯ ಒತ್ತುವರಿಯಾಗಿದೆ. ಮೂವತ್ತು- ನಲವತ್ತು ಸಾವಿರ ಎಕ್ರೆ ಭೂಮಿಯನ್ನು ಮರುವಶಪಡಿಸಿಕೊಂಡು ಸಂರಕ್ಷಿತ ತಾಣ ಅಂತಾ ಘೋಷಿಸಿದ್ದೇವೆ ಎಂದರು.
ಐದು ಹುಲಿಗಳು ಮೃತಪಟ್ಟಿದ್ದು ಬಹಳ ನೋವಾಗಿತ್ತು. ಸಿಎಂ ಕೂಡ ಕಟ್ಟುನಿಟ್ಟಿನ ಸೂಚನೆ ಕೊಟ್ಟಿದ್ದರು. ಮಾನವ ಹಾಗೂ ವನ್ಯಜೀವಿಗಳ ಸಂಘರ್ಷ ಹೆಚ್ಚಾಗಿದೆ. ಆನೆಗಳ ಸಂಖ್ಯೆಯಲ್ಲಿ ಕರ್ನಾಟಕ ನಂಬರ್ 1 ಸ್ಥಾನದಲ್ಲಿದೆ. ಹುಲಿಗಳ ಸಂಖ್ಯೆಯಲ್ಲಿ ಕರ್ನಾಟಕ ದೇಶದಲ್ಲಿ 2ನೇ ಸ್ಥಾನ ಪಡೆದುಕೊಂಡಿದೆ. ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ, ಆದರೆ ಅರಣ್ಯ ಭೂಮಿ ಕಡಿಮೆ ಇದೆ. ಹೀಗಾಗಿ ಇದರೆ ಬಗ್ಗೆಯೂ ವ್ಯವಸ್ಥೆಗೆ ಅಧ್ಯಯನ ಮಾಡುತ್ತಿದ್ದೇವೆ ಎಂದು ತಿಳಿಸಿದರು.















