ಮನೆ ರಾಜ್ಯ ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

ಋತುಚಕ್ರ ರಜೆ ನೀತಿಗೆ ಶೀಘ್ರವೇ ನಿಯಮ ರೂಪಿಸಿ ಜಾರಿ – ಸಂತೋಷ್‌ ಲಾಡ್

0

ಬೆಂಗಳೂರು : ಋತುಚಕ್ರ ರಜೆಯನ್ನು ಸಂಬಂಧಿಸಿದ ಕಂಪನಿಗಳು ಮಹಿಳಾ ಉದ್ಯೋಗಿಗಳಿಗೆ ನೀಡಬೇಕು. ಈ ಸಂಬಂಧ ನಿಯಮ ರೂಪಿಸಲಾಗುವುದು. ಸರ್ಕಾರ ಕಾನೂನು ಮಾಡಿದ್ರೆ ಕಂಪನಿಗಳು ಪಾಲನೆ ಮಾಡಲೇಬೇಕು ಎಂದು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಹೇಳಿದರು.

ಋತುಚಕ್ರ ರಜೆ ನೀತಿ ಜಾರಿಗೆ ಇತ್ತೀಚೆಗೆ ನಡೆದ ಸಚಿವ ಸಂಪುಟ ಅನುಮೋದನೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ ಅವರು, ಸರ್ಕಾರದ ಕಾನೂನನ್ನು ಎಲ್ಲರೂ ಅನುಷ್ಠಾನ ಮಾಡಬೇಕು, ಪಾಲಿಸಲೇಬೇಕು.

ಇದನ್ನು ಕೇವಲ ಒಂದು ಕಾನೂನು ಎಂಬ ದೃಷ್ಟಿಯಲ್ಲಿ ನೋಡದೇ ಮಾನವೀಯ ದೃಷ್ಟಿಯಿಂದಲೂ ಕಂಪನಿಗಳು ನೋಡಬೇಕು. ಈ ರಜೆ ನೀತಿ ಜಾರಿ ಸಂಬಂಧ ಸ್ವಲ್ವ ದಿನದಲ್ಲಿ ಇನ್ನಷ್ಟು ಚರ್ಚೆ ಮಾಡಲಾಗುವುದು. ಸಮಾಲೋಚನೆ ನಡೆಸಲಾಗುವುದು ಎಂದು ಹೇಳಿದರು.

ಋತುಚಕ್ರ ರಜೆ ಕೊಡಬೇಕು ಎಂಬ ಕಾರಣಕ್ಕೆ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ಕೆಲಸಕ್ಕೆ ಹೆಚ್ಚು ನೇಮಿಸಿಕೊಳ್ಳಲು ಹಿಂದೇಟು ಹಾಕಬಹುದಲ್ವ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಒಮ್ಮೆ ಜಾರಿ ಜಾರಿ ಮಾಡಿ ಅದರ ಸಾಧಕ ಬಾಧಕ ನೋಡೊಣ. ಹಾಗೆ ನೋಡಿದರೆ ಈ ರಜೆ ನೀತಿಯನ್ನು ಹಲವು ಕಂಪನಿಗಳು ಪಾಲಿಸುತ್ತೀವೆ ಎಂದು ಹೇಳಿದರು.

ರಜೆ ನೀತಿ ಜಾರಿ ಸಂಬಂಧ ವಿಧಾನಸಭೆಯಲ್ಲಿ ವಿಧೇಯಕ ಮಂಡಿಸಲಾಗುವುದು. ಇಲ್ಲವೇ ಸುಗ್ರೀವಾಜ್ಞೆ ಮಾಡಲಾಗುವುದು. ಕಂಪನಿಗಳಿಗೆ ಮಹಿಳಾ ಉದ್ಯೋಗಿಗೆ ಋತುಚಕ್ರ ರಜೆ ಕೊಡಬೇಕು ಎಂಬ ಸಾಮಾನ್ಯಜ್ಞಾನ, ಸೂಕ್ಷ್ಮತೆ ಇರಬೇಕು. ಹೆಣ್ಣು ಮಕ್ಕಳ ಸಮಸ್ಯೆಯನ್ನು ಕಂಪನಿ ಅರ್ಥ ಮಾಡಿಕೊಳ್ಳಬೇಕು.

ಹೆಚ್ಚು ರಜೆ ಕೊಟ್ಟರೆ ಸಮಸ್ಯೆಯಾಗುತ್ತದೆ ಎಂಬ ದೂರುಗಳು ಬರತೊಡಗಿದರೆ ಅದನ್ನು ಪರಿಗಣಿಸಿ ಏನು ಮಾಡಬೇಕು ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ವಿವರಿಸಿದರು. ಸಮಾಜದಲ್ಲಿ ಹಾಗೂ ಕುಟುಂಬದಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರು ಮನೆಗಳಲ್ಲಿ ದುಡಿಯುತ್ತಾರೆ, ಹೊರಗಡೆ ಕೆಲಸಕ್ಕೂ ಹೋಗುತ್ತಾರೆ.

ಅವರ ಮೇಲೆ ಮಾನಸಿಕ ಒತ್ತಡ ಇರುತ್ತದೆ. ಮಧ್ಯಮ ವರ್ಗದ ದುಡಿಯುವ ಮಹಿಳೆಯರ ಸಮಸ್ಯೆ ಸಾಕಷ್ಟು ಇರುತ್ತವೆ. ಸಾಹುಕಾರರ ಮನೆಯಲ್ಲಿನ ಮಹಿಳೆಯರು ಕೆಲಸಕ್ಕೆ ಆಳುಗಳನ್ನು ಇಟ್ಟುಕೊಳ್ಳುತ್ತಾರೆ. ಒಂದು ದಿನ ರಜೆ ಸಿಕ್ಕರೆ ಅವರು ಮಾರನೇ ದಿನ ಇನ್ನಷ್ಟು ದಕ್ಷವಾಗಿ ಕೆಲಸ ಮಾಡಬಲ್ಲರು ಎಂದರು.

ಋತುಚಕ್ರ ರಜೆ ನೀತಿ ಕುರಿತು ಅಧ್ಯಯನ ನಡೆಸಿದ್ದ ಸಮಿತಿಯ ಅಧ್ಯಕ್ಷೆ ಕ್ರೈಸ್ಟ್‌ ವಿಶ್ವವಿದ್ಯಾಲಯದ ಅಸೋಸಿಯೇಟ್‌ ಡೀನ್‌ ಮಾತನಾಡಿ, ಋತುಚಕ್ರ ರಜೆ ನೀತಿಗೆ ಶಿಫಾರಸು ಮಾಡಲು ಸಾಕಷ್ಟು ಅಧ್ಯಯನ ನಡೆಸಿದ್ದೆವು. ಎಲ್ಲಾ ಮಾನದಂಡಗಳನ್ನು ಅಧ್ಯಯನ ಮಾಡಿಯೇ ಶಿಫಾರಸು ಮಾಡಿದ್ದೆವು ಎಂದು ಹೇಳಿದರು.