ಮನೆ ಅಪರಾಧ ರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ದಾಖಲೆ ಸಲ್ಲಿಸಿದ ಸಾರಾ.ಮಹೇಶ್

ರೋಹಿಣಿ ಸಿಂಧೂರಿ ವಿರುದ್ಧ 1200 ಪುಟಗಳ ದಾಖಲೆ ಸಲ್ಲಿಸಿದ ಸಾರಾ.ಮಹೇಶ್

0

ಮೈಸೂರು(Mysuru): ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ  ಶಾಸಕ ಸಾ.ರಾ.ಮಹೇಶ್  ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ 1200 ಪುಟಗಳ ದಾಖಲೆಗಳನ್ನು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ವಸತಿ ಇಲಾಖೆ ಕಾರ್ಯದರ್ಶಿ ಡಾ.ಜೆ.ರವಿಶಂಕರ್‌ ಅವರಿಗೆ ಸಲ್ಲಿಸಿದ್ದಾರೆ.

ಆರೋಪಗಳ ಕುರಿತು ಪ್ರಾಥಮಿಕ ತನಿಖೆಯನ್ನು ನಡೆಸಲಿದ್ದು, ಮಾಹಿತಿ, ಹೇಳಿಕೆ, ದಾಖಲೆಗಳನ್ನು ನೀಡಬೇಕೆಂದು ಆ.10ರಂದು ಕಾರ್ಯದರ್ಶಿ ನೋಟಿಸ್‌ ನೀಡಿದ್ದರು.

ಮೈಸೂರು-ಚಾಮರಾಜನಗರ ಎರಡೂ ಜಿಲ್ಲೆಗಳ ಜಿಲ್ಲಾಧಿಕಾರಿ, ಆರೋಗ್ಯಾಧಿಕಾರಿಗಳಿಂದ ಕಾರ್ಯದರ್ಶಿ ಮಾಹಿತಿ ಸಂಗ್ರಹಿಸಿದರು.

ನಂತರ ಸುದ್ದಿಗಾರರೊಂದಿಗೆ ಸಾ.ರಾ.ಮಹೇಶ್‌ ಮಾತನಾಡಿ, ರೋಹಿಣಿ ಸಿಂಧೂರಿ ಜಿಲ್ಲಾಧಿಕಾರಿಯಾಗಿ ದ್ದಾಗ ಕರ್ತವ್ಯ ಲೋಪ ಎಸಗಿದ್ದಾರೆ. ಭ್ರಷ್ಟಾಚಾರ ನಡೆಸಿದ್ದಾರೆ. ಚಾಮರಾಜನಗರದ ಆಮ್ಲಜನಕದ ದುರಂತಕ್ಕೂ ಕಾರಣವಾಗಿದ್ದಾರೆ ಎಂದರು.

ನಿಯಮ ಉಲ್ಲಂಘಿಸಿ ಜಿಲ್ಲಾಧಿಕಾರಿ ನಿವಾಸವನ್ನು ₹16.35 ಲಕ್ಷ ವೆಚ್ಚದಲ್ಲಿ ನವೀಕರಣ ಮಾಡಿಸಿದ್ದಾರೆ. ನಿರ್ಮಿತಿ ಕೇಂದ್ರದ ಹಣವನ್ನು ದುರುಪಯೋಗ ಮಾಡಿದ್ದಾರೆ. ನಿವಾಸವು ಪಾರಂಪರಿಕ ಕಟ್ಟಡವಾಗಿದ್ದರೂ ಆವರಣದಲ್ಲಿ ₹ 50 ಲಕ್ಷ ವೆಚ್ಚದಲ್ಲಿ ಈಜುಕೊಳ, ಜಿಮ್‌ ನಿರ್ಮಿಸಿದ್ದಾರೆ. ಸ್ಥಳೀಯ ಸಂಸ್ಥೆಗಳನ್ನು ನಿರ್ಲಕ್ಷಿಸಿ ಪರಿಸರ ಸ್ನೇಹಿ ಬ್ಯಾಗ್‌ ವಿತರಣೆಗಾಗಿ ₹ 9 ಬದಲು ₹ 52ಗೆ ಖರೀದಿಸಲು ಅನುಮೋದನೆ ನೀಡಿದ್ದರು ಎಂದು ದೂರಿದರು.

ಮೈಸೂರಿನಿಂದ ಚಾಮರಾಜ ನಗರಕ್ಕೆ ಪೂರೈಕೆಯಾಗಬೇಕಿದ್ದ ಆಮ್ಲಜನಕ ಸಿಲಿಂಡರ್‌ಗಳನ್ನು ಅವರು ತಡೆಹಿಡಿದಿದ್ದರಿಂದಲೇ ದುರಂತ ಸಂಭವಿಸಿತು  ಎಂದರು.

2021ರ ಮೇ ತಿಂಗಳಲ್ಲಿ 1,342 ಮಂದಿ ಕೋವಿಡ್‌ನಿಂದ ಮೃತಪಟ್ಟಿದ್ದರೂ, ದಕ್ಷ ಅಧಿಕಾರಿ ಎಂದು ನಿರೂಪಿಸಿಕೊಳ್ಳಲು 269 ಜನ ಸತ್ತಿದ್ದಾರೆಂಬ ಸುಳ್ಳು ಲೆಕ್ಕವನ್ನು ರೋಹಿಣಿ ನೀಡಿದ್ದರು. ಎಲ್ಲ ಸ್ಮಶಾನಗಳನ್ನು ಪರಿಶೀಲಿಸಿದಾಗ ಸಾವಿರಕ್ಕೂ ಹೆಚ್ಚು ಮಂದಿ ಸತ್ತಿದ್ದರು. ಸಾವಿರ ಕುಟುಂಬಗಳಿಗೆ ಕೋವಿಡ್‌ ಪರಿಹಾರ ಸಿಗದಂತೆ ಮಾಡಿದ್ದರು ಎಂದು ಆರೋಪಿಸಿದರು.