ತಿ. ನರಸೀಪುರ/ಹನೂರು: ಎರಡು ಪ್ರತ್ಯೇಕ ಪ್ರಕರಣದಲ್ಲಿ ಗಮನ ಬೇರೆಡೆ ಸೆಳೆದು ದ್ವಿಚಕ್ರ ವಾಹನ ಸವಾರರು 1.50 ಲಕ್ಷ ರೂ. ದೋಚಿದರೆ, ಇನ್ನೊಂದು ಪ್ರಕರಣದಲ್ಲಿ ಶೆಡ್ ಬೀಗ ಒಡೆದು ಗೂಡ್ಸ್ ವಾಹನ ಹಾಗೂ ಲ್ಯಾಪ್ ಟಾಪ್ ಕಳವು ಮಾಡಲಾಗಿದೆ.
1.50 ಲಕ್ಷ ರೂ.ಕಳ್ಳತನ:
ಗಮನ ಬೇರೆಡೆ ಸೆಳೆದು ದ್ವಿಚಕ್ರ ವಾಹನ ಸವಾರನಿಂದ 1.50 ಲಕ್ಷ ರೂ. ದೋಚಿದ ಘಟನೆ ತಿ.ನರಸೀಪುರ ಪಟ್ಟಣದ ಕಪಿಲಾ ಹೊಸ ಸೇತುವೆ ಬಳಿ ನಡೆದಿದೆ.
ಮೈಸೂರಿನ ನಜರ್ ಬಾದ್ ನಿವಾಸಿ ಅಬ್ದುಲ್ ಖಾದರ್ (60) ಹಣ ಕಳೆದುಕೊಂಡವರು. ಇವರು ತಿ.ನರಸೀಪುರದ ಎನ್ ಕೆಎಫ್ ಪಬ್ಲಿಕ್ ಶಾಲೆಯ ಅಲ್ಯೂಮಿನಿಯಂ ವಿಂಡೋ ವರ್ಕ್ ಮಾಡುತ್ತಿದ್ದರು. ಶಾಲೆಯ ಸಂಸ್ಥಾಪಕರು ನೀಡಿದ ಚೆಕ್ ಅನ್ನು ಕೆನರಾ ಬ್ಯಾಂಕ್ ನಲ್ಲಿ ಡ್ರಾ ಮಾಡಿಕೊಂಡು ತಮ್ಮ ದ್ವಿಚಕ್ರ ವಾಹನದಲ್ಲಿ (ಕೆಎ 55-ಆರ್ 9382) 1.50 ಲಕ್ಷ ರೂ. ಇರಿಸಿಕೊಂಡು ತೆರಳುತ್ತಿದ್ದರು. ಆ ಸಂದರ್ಭದಲ್ಲಿ ಮಳೆ ಬರುತ್ತಿದ್ದ ಕಾರಣ ದ್ವಿಚಕ್ರ ವಾಹನ ನಿಲ್ಲಿಸಿ ಜರ್ಕಿನ್ ತೆಗೆದುಕೊಳ್ಳುತ್ತಿದ್ದಾಗ, ಅಲ್ಲಿಗೆ ಬಂದ ಇಬ್ಬರು ಖದೀಮರು 50 ರೂ. ನೋಟು ಬಿದ್ದಿದೆ ಎಂದು ತೋರಿಸಿದ್ದಾರೆ. ಅದು ತನ್ನದೇ ಹಣ ಇರಬಹುದೆಂದು ಅಬ್ದುಲ್ ಖಾದರ್ ಅದನ್ನು ತೆಗೆದುಕೊಳ್ಳುವಷ್ಟರಲ್ಲಿ ಖದೀಮರು ದ್ವಿಚಕ್ರ ವಾಹನದಲ್ಲಿದ್ದ 1.50 ಲಕ್ಷರೂ. ಎಗರಿಸಿ ಪರಾರಿಯಾಗಿದ್ದರೆ. ಈ ಸಂಬಂಧ ತಿ.ನರಸೀಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಗೂಡ್ಸ್ ವಾಹನ, ಲ್ಯಾಪ್ ಟಾಪ್ ಕಳವು:
ಶೆಡ್ ವೊಂದರ ಬೀಗ ಮುರಿದು ಗೂಡ್ಸ್ ವಾಹನ ಹಾಗೂ ಲ್ಯಾಪ್ ಟಾಪ್ ಕಳವು ಮಾಡಿರುವ ಘಟನೆ ಹನೂರು ಪಟ್ಟಣದ ಚೆಸ್ಕಾಂ ಕಛೇರಿ ಎದುರು ನಡೆದಿದೆ.
ಕೊಳ್ಳೇಗಾಲದ ಗುಪ್ತ ಲೇಔಟ್ ನಿವಾಸಿ ಪಿ. ಮಾದೇಶ್ (55), ಹನೂರಿನಲ್ಲಿ 120-50 ಅಡಿ ವಿಸ್ತೀರ್ಣದಲ್ಲಿ ಅಂಗಡಿ ನಿರ್ಮಿಸಿಕೊಂಡು ಕಟ್ಟಡ ಕಾಮಗಾರಿ ವಸ್ತುಗಳ ವ್ಯಾಪಾರ ನಡೆಸುತ್ತಿದ್ದಾರೆ.
ತಮ್ಮ ಈ ಅಂಗಡಿಗೆ ಕಬ್ಬಿಣದ ಗೇಟ್ ಅಳವಡಿಸಿದ್ದು, ಜೂ 10ರಂದು ರಾತ್ರಿ ಅಂಗಡಿ ಬಂದ್ ಮಾಡಿ ಮನೆಗೆ ಹೋಗಿದ್ದು, ಮರುದಿನ ಬಂದಾಗ ಬಾಗಿಲಿನ ಬೀಗ ಇರಲಿಲ್ಲ. ಖದೀಮರು ಅಂಗಡಿಯ ಆವರಣದಲ್ಲಿ ನಿಲ್ಲಿಸಿದ್ದ ಅಶೋಕ ಲೈಲ್ಯಾಂಡ್ ದೋಸ್ತ್ ಗೂಡ್ಸ್ ವಾಹನ. ಅಂಗಡಿಗೆ ಅಳವಡಿಸಿದ್ದ ಸಿಸಿ ಕ್ಯಾಮರಾ, ಡಿವಿಆರ್, ಲ್ಯಾಪ್ ಟಾಪ್ ಸೇರಿದಂತೆ ಸುಮಾರು 4.50 ಲಕ್ಷಕ್ಕೂ ಹೆಚ್ಚು ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ. ಹನೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
![](https://savaltv.com/wp-content/uploads/2022/07/813405-robbery-09.jpg)