ಮುಂಬೈ : ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ತಮ್ಮ ವಿರುದ್ಧ ಸಲ್ಲಿಸಿದ್ದ ದೂರಿಗೆ ಉತ್ತರಿಸುವಲ್ಲಿ ನಿರ್ಲಕ್ಷ್ಯ ವಹಿಸಿದ ಕಾರಣ ಕ್ರಿಕೆಟಿಗ ಪೃಥ್ವಿ ಶಾಗೆ ಮುಂಬೈ ಕೋರ್ಟ್ 100 ರೂ. ದಂಡ ವಿಧಿಸಿದೆ. ದೂರಿಗೆ ಉತ್ತರಿಸುವಂತೆ ಕೋರ್ಟ್ ಹೇಳಿದ್ದರೂ ಉತ್ತರಿಸದ ಹಿನ್ನೆಲೆ 100 ರೂ. ದಂಡ ವಿಧಿಸಿದ್ದು, ಅರ್ಜಿ ವಿಚಾರಣೆಯನ್ನು ಡಿಸೆಂಬರ್ 16ಕ್ಕೆ ಮುಂದೂಡಿದೆ.
2024ರ ಏಪ್ರಿಲ್ನಲ್ಲಿ ದಿನೋಶಿ ಸೆಷನ್ಸ್ ಕೋರ್ಟ್ನಲ್ಲಿ ಹಿಂದಿನ ಮ್ಯಾಜಿಸ್ಟ್ರೇಟ್ ನೀಡಿದ್ದ ಆದೇಶವನ್ನು ಪರಿಷ್ಕರಿಸುವಂತೆ ಇನ್ಫ್ಲುಯೆನ್ಸರ್ ಸಪ್ನಾ ಗಿಲ್ ಅರ್ಜಿ ಸಲ್ಲಿಸಿದ್ದರು. ಆ ನಂತರ ಶಾ ವಿರುದ್ಧ ಎಫ್ಐಆರ್ ದಾಖಲಿಸಲು ನಿರಾಕರಿಸಿ ಪ್ರಾಥಮಿಕ ತನಿಖೆಗೆ ಆದೇಶಿಸಿತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ನೀಡಲು ಪೃಥ್ವಿ ಶಾಕೆ ಸೂಚಿಸಿತ್ತು. ಆದ್ರೆ ಪೃಥ್ವಿ ಶಾ ಉತ್ತರ ನೀಡಲು ನಿರ್ಲಕ್ಷ್ಯ ವಹಿಸಿದ್ದಾರೆ. ಹೀಗಾಗಿ 100 ರೂ. ದಂಡ ವಿಧಿಸಿರುವ ಕೋರ್ಟ್, ಉತ್ತರ ನೀಡಲು ಮತ್ತೊಂದು ಅವಕಾಶ ನೀಡಿ, ಡಿ.16ಕ್ಕೆ ವಿಚಾರಣೆ ಮುಂದೂಡಿದೆ. ಪೃಥ್ವಿ ಶಾ ನ್ಯಾಯಾಂಗದ ಪ್ರಕ್ರಿಯೆಯ ಬಗ್ಗೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಹಲವು ಬಾರಿ ಸಮನ್ಸ್ ನೀಡಿದ್ದರೂ ಪ್ರಕರಣವನ್ನು ಉತ್ತರ ಕೊಟ್ಟಿಲ್ಲ. ಹೀಗಾಗಿ ಅವರ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಮ ವಹಿಸಬೇಕು ಅನ್ನೋದು ಸಪ್ನಾ ಪರ ವಕೀಲ ಅಲಿ ಕಾಶಿಫ್ ಖಾನ್ ಅವರ ವಾದವಾಗಿದೆ.
2023ರ ಫೆಬ್ರವರಿ 15ರಂದು ಪೃಥ್ವಿ ಶಾ ಮುಂಬೈನ ಸಾಂತ್ರಾಕ್ರೂಜ್ನಲ್ಲಿರುವ ಪಂಚತಾರಾ ಹೋಟೆಲ್ಗೆ ಊಟಕ್ಕೆ ಹೋಗಿದ್ದರು. ಈ ವೇಳೆ ಸಪ್ನಾ ಗಿಲ್ ಮತ್ತು ಅವರ ತಂಡ ಪೃಥ್ವಿ ಶಾ ಅವರೊಂದಿಗೆ ಸೆಲ್ಫಿಗೆ ಒತ್ತಾಯಿಸಿದ್ದರು. ಬಳಿಕ ಹೋಟೆಲ್ನವರು ಆ ಗುಂಪನ್ನು ಹೊರಗೆ ಕಳಿಸಿದ್ದರು. ಇದರಿಂದ ಕೆರಳಿದ ಆ ಗುಂಪು, ಅವರು ಊಟ ಮುಗಿಸಿ ಹೊರಗೆ ಬರುತ್ತಿದ್ದಂತೆ ಬೇಸ್ಬಾಲ್ ಬ್ಯಾಟ್ಗಳಿಂದ ಬಿಎಂಡಬ್ಲ್ಯೂ ಕಾರಿನ ಮೇಲೆ ಅಟ್ಯಾಕ್ ಮಾಡಿದ್ದರು.
ಕಾರಿನ ಹಿಂಭಾಗ, ಮುಂಭಾಗದ ಗಾಜುಗಳನ್ನು ಚಚ್ಚಿ ಪುಡಿಪುಡಿ ಮಾಡಿದ್ದರು. ಅಷ್ಟೇ ಅಲ್ಲ, ಪೃಥ್ವಿ ಸ್ನೇಹಿತನಿಂದ 50 ಸಾವಿರ ರೂಪಾಯಿಗೆ ಬೇಡಿಕೆ ಇಟ್ಟಿದ್ದರು. ಅಷ್ಟರಲ್ಲಿ ಪೃಥ್ವಿ ಶಾ ಅವರನ್ನು ಬೇರೆ ಕಾರಿನಲ್ಲಿ ಕಳುಹಿಸಲಾಗಿತ್ತು. ಈ ಸಂಬಂಧ ಓಶಿವಾರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಬಳಿಕ ಸಪ್ನಾಗಿಲ್ರನ್ನ ಬಂಧಿಸಲಾಗಿತ್ತು. ಆ ಬಳಿಕ ಪೃಥ್ವಿ ಶಾ ವಿರುದ್ಧವೇ ಸಪ್ನಾ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು.















