ಮನೆ ರಾಜ್ಯ ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ – ರಾಜ್ಯದಲ್ಲಿ ಶುರುವಾಗುತ್ತಾ ಹೆಲ್ತ್ ಎಮೆರ್ಜೆನ್ಸಿ…!

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿಗಳ ಕೊರತೆ – ರಾಜ್ಯದಲ್ಲಿ ಶುರುವಾಗುತ್ತಾ ಹೆಲ್ತ್ ಎಮೆರ್ಜೆನ್ಸಿ…!

0

ಸರ್ಕಾರಿ ಆಸ್ಪತ್ರೆಗಳು ಅಂದ್ರೆ ಬಡವರ ಸಂಜೀವಿನಿ, ಧನ್ವಂತರಿ ಅಂತಲೇ ಕರೆಯುತ್ತಾರೆ. ಆದ್ರೆ ಈ ಮಾತನ್ನೇ ನಂಬಿಕೊಂಡು ಕಡುಬಡವರು ಸರ್ಕಾರಿ ಆಸ್ಪತ್ರೆಗೆ ಹೋದರೆ, ಬರೀ ಸಮಸ್ಯೆಗಳ ಅದ್ವಾನಗಳನ್ನೇ ಕಾಣುತ್ತಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಔಷಧಿ ಕೊರತೆ ಬಗ್ಗೆ ಹಲವಾರು ಬಾರಿ ಆರೋಗ್ಯ ಸಚಿವರ ಗಮನಕ್ಕೆ ತಂದರು ಕೂಡ ಅವರು ಗಂಭೀರವಾಗಿ ಪರಿಗಣಿಸಿದದಂತೆ ಕಾಣುತ್ತಿಲ್ಲ. ಈಗ ಸರ್ಕಾರಿ ವೈದ್ಯಾಧಿಕಾರಿಗಳ ಸಂಘವೇ, ಔಷಧಿ ಕೊರತೆ ಬಗ್ಗೆ ಬಹಿರಂಗ ಪ್ರಕಟನೆ ಮಾಡಿದೆ. ಕಾಲ ಕಾಲಕ್ಕೆ ಸಮರ್ಪಕವಾಗಿ ಔಷಧಿಗಳ ಸರಬರಾಜು ಇಲ್ಲದೇ.. ರೋಗಿಗಳಿಗೆ ಔಷಧೋಪಚಾರ ಮಾಡೋದು ಕಷ್ಟವಾಗ್ತಿದೆ ಅಂತ ವೈದ್ಯಾಧಿಕಾರಿಗಳ ಸಂಘ ಬಹಿರಂಗವಾಗಿಯೇ ಬೇಸರ ಆಚೆ ಹಾಕಿದೆ.

ಸರ್ಕಾರಿ ಆಸ್ಪತ್ರೆಗಳಲ್ಲಿ ಪ್ರಮುಖವಾಗಿ ಐವಿ ದ್ರಾವಣ, ಆಂಟಿ ಬಯೋಟಿಕ್ ಮತ್ತು ಇತರೆ ತುರ್ತು ಚಿಕಿತ್ಸಾ ಔಷಧಿಗಳ ಸರಬರಾಜು ಆಗುತ್ತಿಲ್ಲ. ಔಷಧಿಗಳ ಸರಬರಾಜಿಗೆ ಹಲವು ಬಾರಿ ಸಭೆ ಮಾಡಲಾಗಿದೆ, ಮನವಿ ಮಾಡಲಾಗಿದೆ. ಆದರೂ ಕೂಡ ಔಷಧಿ ಸಿಗ್ತಿಲ್ಲ ಅಂತ ಅಸಮಾಧಾನ ಹೊರ ಹಾಕಿದೆ ವೈದ್ಯಾಧಿಕಾರಿಗಳ ಸಂಘ, ಇದರಿಂದಾಗಿ ರೋಗಿಗಳಿಗೆ ಸಮರ್ಪಕ ಔಷಧಿ ನೀಡಲು ಆಗ್ತಿಲ್ಲ. ಇಷ್ಟು ಮಾತ್ರವಲ್ಲ ಸರ್ಕಾರದಿಂದ ಲಭ್ಯವಿರೋ ಅನುದಾನದಡಿ ಔಷಧಿ ಖರೀದಿಸುವಂತೆ ಸೂಚಿಸುತ್ತಾರೆ. ಆದ್ರೆ ಅನೇಕ ಆರೋಗ್ಯ ಸಂಸ್ಥೆಗಳಿಗೂ ಇನೂ ಯಾವುದೇ ಅನುದಾನ ದೊರೆತಿಲ್ಲ ಅಂತ ಆರೋಗ್ಯ ಇಲಾಖೆಯ ಉದಾಸೀನ ಹಾಗೂ ಇಚ್ಛಾಶಕ್ತಿ ಕೊರತೆಯನ್ನ ಬಿಚ್ಚಿಟ್ಟಿದ್ದಾರೆ.

ಸರ್ಕಾರಿ ಆಸ್ಪತ್ರೆಗಳಲ್ಲಿರುವ ಸದ್ಯದ ಅವ್ಯವಸ್ಥೆಗಳು ಬಡವರಲ್ಲಿ ಭರವಸೆಯನ್ನ ಕಸಿದಿವೆ. ಸಾಲ ಮಾಡಿಕೊಂಡಾದ್ರೂ ಜೀವ ಉಳಿಸಿಕೊಳ್ಳಲು ಖಾಸಗಿ ಆಸ್ಪತ್ರೆಯ ಕಡೆಗೆ ಹೋಗುತ್ತಿದ್ದಾರೆ. ಈಗ ಮತ್ತೊಂದು ಸಮಸ್ಯೆ ಸೃಷ್ಟಿಯಾಗಿದೆ. ಆರೋಗ್ಯ ಸಚಿವರು ಇದನ್ನ ಗಂಭೀರವಾಗಿ ಪರಿಗಣಿಸಬೇಕಿದೆ. ಸಮಸ್ಯಯನ್ನು ಬಗೆಹರಿಸಬೇಕಿದೆ.