ಮೈಸೂರು: ಕೆಆರ್ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ಹೆಸರಿಡುವುದರಿಂದ ಯಾವುದೇ ಕಾರಣಕ್ಕೂ ನಾವು ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಸಿದ್ದರಾಮಯ್ಯ ಅವರ ಹೆಸರು ಕೇಳಿದರೆ ಕೆಲವರು ಮೈಮೇಲೆ ಮಲ ಸುರಿದುಕೊಂಡವರಂತೆ ಆಡುತ್ತಿದ್ದಾರೆ ಎಂದು ಬಿಜೆಪಿಯವರ ವಿರುದ್ಧ ಕಿಡಿಕಾರಿದರು. ವಾಸ್ತವ ತಿಳಿದುಕೊಳ್ಳಲು ಕಾಂಗ್ರೆಸ್ ನಿಯೋಗವು ಮಹಾನಗರ ಪಾಲಿಕೆ ಆಯುಕ್ತರನ್ನು ಮಂಗಳವಾರ ಭೇಟಿ ಮಾಡಿತ್ತು. ಆ ರಸ್ತೆಗೆ ಪ್ರಿನ್ಸೆಸ್ ರಸ್ತೆ ಎಂಬ ಹೆಸರಿಟ್ಟಿರುವ ಬಗ್ಗೆ ದಾಖಲೆಗಳೇ ಇಲ್ಲ ಎಂದು ಆಯುಕ್ತರು ತಿಳಿಸಿದ್ದಾರೆ ಎಂದು ಹೇಳಿದರು.
ಕೆಲವರಿಂದ ನಾವು ರಾಜ ವಂಶಸ್ಥರ ವಿರುದ್ಧ ಇದ್ದೇವೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ಅಸಲಿ ಮೈಸೂರು ರಾಜವಂಶಸ್ಥರಿಗೆ ನಾವು ಟಿಕೆಟ್ ಕೊಟ್ಟು ಗೆಲ್ಲಿಸಿದ್ದೆವು. ಈಗಿರುವವರು ದತ್ತು ಪಡೆದುಕೊಂಡಿರುವವರು, ಡೂಪ್ಲಿಕೇಟ್ ರಾಜವಂಶಸ್ಥ ಎಂದು ದೂರಿದರು.














