ಸಿಂಧನೂರು: ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ನೂತನ ಎಂಎಲ್ ಸಿ ಬಸನಗೌಡ ಬಾದರ್ಲಿ ಅವರ ಸ್ವಾಗತಕ್ಕೆ ಹಾಕಿದ ಕಮಾನು ಕುಸಿದ ಪರಿಣಾಮ ಮೂವರು ಗಾಯಗೊಂಡ ಸೋಮವಾರ (ಜುಲೈ 22) ಮಧ್ಯಾಹ್ನ ನಡೆದಿದೆ.
ಪ್ರಮುಖ ವೃತ್ತದಲ್ಲಿ ಹಾಕಿದ ಕಮಾನು ದಿಢೀರ್ ಕುಸಿದು ವಾಹನ ಸವಾರರ ಮೇಲೆ ಬಿದ್ದಿದೆ. ತಾಲೂಕಿನ ವೀರಾಪುರ ಕ್ಯಾಂಪಿನ ಯಮನಪ್ಪ (48), ಅಂಬಮ್ಮ (45), ಬೂದಿಹಾಳ ಕ್ಯಾಂಪಿನ ಚಿಟ್ಟಿಬಾಬು (55) ಎಂಬವರಿಗೆ ಗಾಯಗಳಾಗಿವೆ.
ಮೂವರನ್ನು ಇಲ್ಲಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಮಾನು ಕುಸಿದು ರಸ್ತೆ ಬಂದ್ ಆಗಿದ್ದರಿಂದ ಸಂಚಾರ ವ್ಯತ್ಯಯ ಉಂಟಾಯಿತು. ನಗರ ಪೊಲೀಸ್ ಠಾಣೆ ಪಿಐ ಸುಧೀರಕುಮಾರ್ ಬೆಂಕಿ, ಸರ್ಕಲ್ ಇನ್ ಸ್ಪೆಕ್ಟರ್ ವೀರಾರೆಡ್ಡಿ ಸೇರಿದಂತೆ ಪೊಲೀಸ್ ತಂಡ ಹಾಗೂ ಬಸನಗೌಡ ಬಾದರ್ಲಿ ಬೆಂಬಲಿಗರು, ಕಮಾನು ತೆರವುಗೊಳಿಸಿ, ಸಂಚಾರಕ್ಕೆ ಅವಕಾಶ ಮಾಡಿಸಿದರು.
ಆರ್ ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮನಗೌಡ ಬಾದರ್ಲಿ ಸರಕಾರಿ ಆಸ್ಪತ್ರೆಗೆ ಧಾವಿಸಿ, ಗಾಯಾಳುಗಳ ಆರೋಗ್ಯ ವಿಚಾರಿಸಿದರು.