ನವದೆಹಲಿ : ಮಿತಿಮೀರಿದ ವಾಯು ಮಾಲಿನ್ಯದಿಂದ ತೀವ್ರ ಅಸಮಾಧಾನಗೊಂಡು ದೆಹಲಿಯ ಇಂಡಿಯಾ ಗೇಟ್ ಬಳಿ ನಡೆಸುತ್ತಿದ್ದ ಪ್ರತಿಭಟನೆ ಇಂದು ಹಿಂಸಾತ್ಮಕ ರೂಪಕ್ಕೆ ತಿರುಗಿದೆ. ಪ್ರತಿಭಟನೆ ವೇಳೆ ಕೆಲವರು ಚಿಲ್ಲಿ, ಪೆಪ್ಪರ್ ಸ್ಪ್ರೆ ಬಳಸಿ ಪೊಲೀಸರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ 15ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ.
ಅಲ್ಲದೇ ಪ್ರತಿಭಟನೆ ವೇಳೆ ಇತ್ತೀಚೆಗೆ ಎನ್ಕೌಂಟರ್ಗೆ ಬಲಿಯಾದ ನಕ್ಸಲ್ ಮುಖಂಡ ಮಾದ್ವಿ ಹಿಡ್ಮಾನ ಪೋಸ್ಟರ್ಗಳು ಕಂಡುಬಂದಿತು. ನಕ್ಸಲ್ ಮುಖಂಡನ ಪೋಸ್ಟರ್ ಹಿಡಿದ ಗುಂಪು ಹಿಡ್ಮಾ ಪರ ಘೋಷಣೆ ಕೂಗಿದ ಬಳಿಕ ಪ್ರತಿಭಟನೆ ಹಿಂಸಾತ್ಮಕ ರೂಪಕ್ಕೆ ತಿರುಗಿದೆ ಅನ್ನೋದು ಗೊತ್ತಾಗಿದೆ.
ರಾಷ್ಟ್ರ ರಾಜಧಾನಿಯ ಸಿ-ಹೆಕ್ಸಾಗನ್ ಬಳಿ ಭಾನುವಾರ ನಡೆದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸರು ವಾಹನ ಸಂಚಾರಕ್ಕೆ ಅಡ್ಡಿ ಮಾಡದಂತೆ ಪ್ರತಿಭಟನಾಕಾರರಿಗೆ ಎಚ್ಚರಿಸಿದ್ದರು. ಇದರಿಂದ ಅಂಬುಲೆನ್ಸ್ ಮತ್ತು ವೈದ್ಯಕೀಯ ಸಿಬ್ಬಂದಿ ಪ್ರಯಾಣಕ್ಕೆ ತೊಂದರೆಯಾಗಲಿದೆ ಎಂದೂ ತಿಳಿಸಿದ್ದರು.
ಇದನ್ನು ಲೆಕ್ಕಿಸಿದ ಪ್ರತಿಭಟನಾಕಾರರನ್ನು ರಸ್ತೆ ತಡೆಗೆ ಮುಂದಾದರು. ಪೊಲೀಸರು ಚದುರಿಸಲು ಯತ್ನಿಸಿದಾಗ ಪೊಲೀಸರತ್ತ ಕೆಲವರು ʻಪೆಪ್ಪರ್ ಮತ್ತು ಚಿಲ್ಲಿ ಸ್ಪೇʼ ಬಳಿಸಿದ್ರು. ಬ್ಯಾರಿಕೇಡ್ಗಳನ್ನ ಮುರಿದು ಹಲ್ಲೆಗೂ ಯತ್ನಿಸಿದ್ರು. ಇದರಿಂದ ಮೂರ್ನಾಲ್ಕು ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಪೆಪ್ಪರ್, ಚಿಲ್ಲಿ ಸ್ಪ್ರೇ ಬಳಸಿ ಹಲ್ಲೆಗೆ ಮುಂದಾಗಿದ್ದನ್ನ ಗಂಭೀರವಾಗಿ ಪರಿಗಣಿಸಿದ ಪೊಲೀಸರು, 15 ಜನರನ್ನ ಬಂಧಿಸಿದ್ದಾರೆ.
ವಾಯು ಮಾಲಿನ್ಯ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನೆ ವೇಳೆ ಗುಂಪೊಂದು ಇತ್ತೀಚೆಗೆ ಎನ್ಕೌಂಟರ್ಗೆ ಬಲಿಯಾದ ನಕ್ಸಲ್ ಮುಖಂಡ ಮಾದ್ವಿ ಹಿಡ್ಮಾನ ಪೋಸ್ಟರ್ ಹಿಡಿದು ಘೋಷಣೆ ಕೂಗಿದ್ದು, ರಸ್ತೆ ತಡೆಗೆ ಮುಂದಾಗಿದ್ದು ಹಿಂಸಾ ರೂಪಕ್ಕೆ ತಿರುಗಲು ಮತ್ತೊಂದು ಕಾರಣ.
ದೆಹಲಿಯಲ್ಲಿ ದಿನದಿಂದ ದಿನಕ್ಕೆ ಗಾಳಿಯ ಗುಣಮಟ್ಟ ತೀರಾ ಅಪಾಯಮಟ್ಟಕ್ಕೆ ತಲಪುತ್ತಿದೆ. ಇದು ತೀರಾ ಗಂಭೀರ ವಿಷಯ. ಇದರಿಂದ ಸಾರ್ವಜನಿಕ ಆರೋಗ್ಯ ಹದಗೆಡಲಿದೆ. ಇದನ್ನ ಪರಿಹರಿಸಲು ಮತ್ತು ಮೂಲ ಕಾರಣವನ್ನು ಪತ್ತೆ ಮಾಡುವಲ್ಲಿ ಅಧಿಕಾರಿಗಳು ವಿಫಲರಾಗಿದ್ದಾರೆ ಎಂದು ಶುದ್ಧ ಗಾಳಿಗಾಗಿ ದೆಹಲಿ ಸಮನ್ವಯ ಸಮಿತಿ ಆರೋಪಿಸಿ ಪ್ರಕಟಣೆ ಹೊರಡಿಸಿದೆ.
ಗಾಳಿಯ ಗುಣಮಟ್ಟ ತೀರಾ ಅಪಾಯಕಾರಿ ಮಟ್ಟಕ್ಕೆ ತಲುಪಿದೆ. ಆದರೆ ಸರ್ಕಾರ ಮಾತ್ರ ಗಾಳಿಯ ಗುಣಮಟ್ಟ ಸೂಚ್ಯಂಕ ಇರುವ ಯಂತ್ರಗಳ ಬಳಿ ನೀರು ಸಿಂಪಡಿಸುವುದು. ಮೋಡ ಬಿತ್ತನೆ ಮಾಡುವ ಮೂಲಕ ತೋರಿಕೆಗೆ ಕೆಲಸ ಮಾಡುತ್ತಿದೆ. ಆದರೆ ದೀರ್ಘಕಾಲ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆರೋಪಿಸಿದ್ದಾರೆ.














