ಉತ್ತರ ಪ್ರದೇಶ: ಬಾಗ್ ಪತ್ ನಲ್ಲಿ ಮಂಗಳವಾರ ಬೆಳಗ್ಗೆ ನಡೆದ ಜೈನ ನಿರ್ವಾಣ ಉತ್ಸವದಲ್ಲಿ ವೇದಿಕೆ ಕುಸಿದು 5 ಮಂದಿ ಸಾವನ್ನಪ್ಪಿದ್ದು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಜೈನ ಸನ್ಯಾಸಿಗಳ ಸಮ್ಮುಖದಲ್ಲಿ ಭಗವಾನ್ ಆದಿನಾಥನಿಗೆ ಲಡ್ಡೂಗಳನ್ನು ಅರ್ಪಿಸುವ ಸಮಾರಂಭದಲ್ಲಿ ಈ ಘಟನೆ ನಡೆದಿದೆ.
ಹಿರಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳು ಘಟನಾ ಸ್ಥಳಕ್ಕೆ ದೌಡಾಯಿಸಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಿ ಪರಿಸ್ಥಿತಿ ನಿಯಂತ್ರಿಸಿದರು. ಗಾಯಾಳುಗಳನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಈ ಸಂದರ್ಭದಲ್ಲಿ ಮಾನಸ್ತಂಭ ಕಾಂಪ್ಲೆಕ್ಸ್ ನಲ್ಲಿ ಪೆಂಡಾಲ್ ಹಾಕಲಾಗಿತ್ತು, ಅದು ಕುಸಿದು ಬಿದ್ದಿತ್ತು. 50ಕ್ಕೂ ಹೆಚ್ಚು ಭಕ್ತರು ಅವಶೇಷಗಳಡಿ ಸಿಲುಕಿದ್ದಾರೆ. ಐವರು ಆಸ್ಪತ್ರೆಯಲ್ಲಿ ಚಿಕಿತ್ಸೆ ವೇಳೆ ಮೃತಪಟ್ಟಿದ್ದಾರೆ. ಇತರ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ಬರೌತ್ ನಗರದಲ್ಲಿ ಅಪಘಾತ ಸಂಭವಿಸಿದೆ, ಅಪಘಾತದ ಬಗ್ಗೆ ಮಾಹಿತಿ ಲಭಿಸಿದ ತಕ್ಷಣ ಬರೌತ್ ಕೊತ್ವಾಲಿ ಇನ್ಸ್ ಪೆಕ್ಟರ್ ತಮ್ಮ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿ ರಕ್ಷಣಾ ಕಾರ್ಯಾಚರಣೆ ನಡೆಸಿದರು. ಸಮಯಕ್ಕೆ ಸರಿಯಾಗಿ ಆಂಬ್ಯುಲೆನ್ಸ್ ಸಿಗದ ಕಾರಣ ಗಾಯಾಳುಗಳನ್ನು ಆಟೋ ರಿಕ್ಷಾದಲ್ಲಿ ಆಸ್ಪತ್ರೆಗೆ ಸಾಗಿಸಲಾಯಿತು. ಸಂಘಟಕರು 65 ಅಡಿ ಎತ್ತರದ ಮರದ ವೇದಿಕೆಯನ್ನು ನಿರ್ಮಿಸಿ ಅದರ ಮೇಲೆ 4-5 ಅಡಿ ಎತ್ತರದ ಆದಿನಾಥನ ಪ್ರತಿಮೆಯನ್ನು ಹಾಕಿದ್ದರು ಎಂದು ಹೇಳಲಾಗುತ್ತಿದೆ.
ಈ ವೇಳೆ ಮೆಟ್ಟಿಲು ಹತ್ತುವಾಗ ಭಾರದ ಕಾರಣ ವೇದಿಕೆ ಕುಸಿದಿದೆ. ಕರೆ ಮಾಡಿದರೂ 3 ಆ್ಯಂಬ್ಯುಲೆನ್ಸ್ಗಳು ಮಾತ್ರ ಸ್ಥಳಕ್ಕೆ ತಲುಪಿದವು. ಗಾಯಾಳುಗಳನ್ನು ಬರೌತ್ ಸಿಎಚ್ಸಿ ಮತ್ತು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತಕ್ಕೆ ಕಾರಣರಾದವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.