ಬೆಂಗಳೂರು: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ನಡೆದ ಆರ್ಸಿಬಿ ವಿಜಯೋತ್ಸವದ ವೇಳೆ ಸಂಭವಿಸಿದ ಕಾಲ್ತುಳಿತದ ಹಿನ್ನಲೆಯಲ್ಲಿ, ಮೃತರಾದ 11 ಅಭಿಮಾನಿಗಳ ಕುಟುಂಬಗಳಿಗೆ ಪರಿಹಾರದ ಘೋಷಣೆ ಮುಂದುವರೆದಿದೆ. ಈಗಾಗಲೇ ಕರ್ನಾಟಕ ಸರ್ಕಾರದಿಂದ ತಲಾ ₹10 ಲಕ್ಷ ಪರಿಹಾರ ನೀಡಲು ತೀರ್ಮಾನಿಸಲಾಗಿದೆ. ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಫ್ರಾಂಚೈಸಿಯ ಆಡಳಿತ ಮಂಡಳಿಯು ಕೂಡ ತಲಾ ₹10 ಲಕ್ಷ ಪರಿಹಾರ ಘೋಷಿಸಿದೆ. ಜೊತೆಗೆ ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ (ಕೆಎಸ್ಸಿಎ) ನು ತಲಾ ₹5 ಲಕ್ಷ ಪರಿಹಾರ ನೀಡಲು ಮುಂದಾಗಿದೆ.
ಈ ಮೂಲಕ, ಪ್ರತಿಯೊಬ್ಬ ಮೃತರ ಕುಟುಂಬಕ್ಕೆ ₹25 ಲಕ್ಷ ಮೊತ್ತದ ಪರಿಹಾರ ಸಿಗಲಿದ್ದು, ಇದರಲ್ಲಿ: ಕರ್ನಾಟಕ ಸರ್ಕಾರದಿಂದ: ₹10 ಲಕ್ಷ, ಆರ್ಸಿಬಿ ಆಡಳಿತ ಮಂಡಳಿಯಿಂದ: ₹10 ಲಕ್ಷ, ಕೆಎಸ್ಸಿಎ ನಿಂದ: ₹5 ಲಕ್ಷ, ಜೊತೆಗೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸಾ ವೆಚ್ಚವನ್ನೂ ಭರಿಸುವುದಾಗಿ ಹೇಳಿದೆ.
ಈ ಸಂಬಂಧ ಆರ್ಸಿಬಿ ತನ್ನ ಅಧಿಕೃತ ಎಕ್ಸ್ (ಹಳೆಯ ಟ್ವಿಟ್ಟರ್) ಖಾತೆ ಮೂಲಕ ಭಾವುಕ ಸಂದೇಶ ಹಂಚಿಕೊಂಡಿದೆ. ಬೆಂಗಳೂರಿನಲ್ಲಿ ನಿನ್ನೆ ನಡೆದ ಘಟನೆ ನಿಜಕ್ಕೂ ದುರದೃಷ್ಟಕರ. ಇದು ಆರ್ಸಿಬಿ ಕುಟುಂಬಕ್ಕೆ ಅತೀವವಾದ ನೋವುಂಟು ಮಾಡಿದೆ. ಆರ್ಸಿಬಿ ಮೃತರ 11 ಕುಟುಂಬಗಳಿಗೆ ತಲಾ 10 ಲಕ್ಷ ರೂ.ಗಳ ಪರಿಹಾರ ಘೋಷಿಸಿದೆ. ಇದಲ್ಲದೇ ಈ ದುರಂತ ಘಟನೆಯಲ್ಲಿ ಗಾಯಗೊಂಡ ಅಭಿಮಾನಿಗಳಿಗೆ ಸಹಕರಿಸಲು ಆರ್ಸಿಬಿ ಕೇರ್ಸ್ ಎಂಬ ನಿಧಿಯನ್ನೂ ಸಹ ರಚಿಸಲಾಗುತ್ತಿದೆ. ನಾವು ಮಾಡುವ ಎಲ್ಲ ಒಳ್ಳೆಯದರಲ್ಲಿ, ನಮ್ಮ ಹೃದಯದಲ್ಲಿ ಯಾವಾಗಲೂ ಅಭಿಮಾನಿಗಳಿರುತ್ತಾರೆ. ದುಃಖದಲ್ಲಿಯೂ ನಾವು ಅವರೊಟ್ಟಿಗಿರುತ್ತೇವೆ ಎಂದು ಭಾವುಕ ಸಂದೇಶವನ್ನು ಹಂಚಿಕೊಂಡಿದೆ.














