ಮನೆ ಸುದ್ದಿ ಜಾಲ ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲು ಮಾರ್ಗದ ಕೆಲಸ ಶೀಘ್ರವೇ ಆರಂಭಿಸಿ – ರಾಜ್ಯ ರೈಲ್ವೆ ಸಮತಿಯಿಂದ ಕೇಂದ್ರಕ್ಕೆ...

ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲು ಮಾರ್ಗದ ಕೆಲಸ ಶೀಘ್ರವೇ ಆರಂಭಿಸಿ – ರಾಜ್ಯ ರೈಲ್ವೆ ಸಮತಿಯಿಂದ ಕೇಂದ್ರಕ್ಕೆ ಒತ್ತಾಯ..!

0

ನವದೆಹಲಿ : ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲು ಮಾರ್ಗದ ಕೆಲಸ ಕೂಡಲೇ ಆರಂಭವಾಗಬೇಕು, ಬಳ್ಳಾರಿಯಿಂದ ಬೆಂಗಳೂರಿಗೆ ದಿನನಿತ್ಯ ಉದಯ ಸೂಪರ್ ಫಾಸ್ಟ್ ರೈಲು ಇಲ್ಲವೇ ವಂದೇ ಭಾರತ್ ರೈಲಿನ ಸೌಲಭ್ಯ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿಯು ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವ ವಿ. ಸೋಮಣ್ಣ ಅವರಿಗೆ ಮನವಿ ಮಾಡಿದೆ. ದೆಹಲಿಯಲ್ಲಿ ಕರ್ನಾಟಕ ರಾಜ್ಯ ರೈಲ್ವೆ ಕ್ರಿಯಾ ಸಮಿತಿ ಅಧ್ಯಕ್ಷ ಕೆಎಂ ಮಹೇಶ್ವರ ಸ್ವಾಮಿ ಹಾಗೂ ಸಿರುಗುಪ್ಪದ ಮಾಜಿ ಶಾಸಕ ಎಂ ಎಸ್ ಸೋಮಲಿಂಗಪ್ಪ ನೇತೃತ್ವದಲ್ಲಿ 25 ಜನರ ನಿಯೋಗ ವಿ.ಸೋಮಣ್ಣ ಅವರನ್ನು ಭೇಟಿಯಾಗಿ ವಿವಿಧ ಮನವಿಗಳನ್ನು ನೀಡಲಾಯಿತು.

ಬಳ್ಳಾರಿ-ಸಿರುಗುಪ್ಪ-ಸಿಂಧನೂರು-ಲಿಂಗಸುಗೂರು ನೂತನ ರೈಲ್ವೆ ಮಾರ್ಗದ ಆರಂಭಕ್ಕಾಗಿ ಹಿಂದಿನ ಯುಪಿಎ ಸರ್ಕಾರದ ರೈಲ್ವೆ ಮಂತ್ರಿ ಮಲ್ಲಿಕಾರ್ಜುನ ಖರ್ಗೆ ಹಾಗೂ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ರೈಲ್ವೆ ಮಂತ್ರಿಗಳಾದ ಸದಾನಂದಗೌಡ ತಮ್ಮ ರೈಲ್ವೆ ಬಜೆಟ್ಟಿನಲ್ಲಿ ಈ ಮಾರ್ಗಕ್ಕೆ ಸರ್ವೆ ಆದೇಶ ಮಾಡಿದ್ದರು. ಸರ್ವೆ ಮುಗಿಸಿ 13 ವರ್ಷಗಳಾಗಿವೆ ಇಂದಿಗೂ ಈ ಮಾರ್ಗದ ಕೆಲಸ ಆರಂಭವಾಗಿರುವುದಿಲ್ಲ. ಕೂಡಲೇ ಬಳ್ಳಾರಿ-ಸಿರುಗುಪ್ಪ-ಸಿಂಧನೂರು ನೂತನ ರೈಲು ಮಾರ್ಗದ ಕೆಲಸ ಆರಂಭವಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದೆ.

ಇದರೊಂದಿಗೆ ಬಳ್ಳಾರಿಯಿಂದ ಬೆಂಗಳೂರಿಗೆ ದಿನನಿತ್ಯ ಹೋಗಿ ಬರಲು ಉದಯ ಸೂಪರ್ ಫಾಸ್ಟ್ ರೈಲು ಇಲ್ಲವೇ ವಂದೇ ಭಾರತ್ ರೈಲಿನ ಸೌಲಭ್ಯ ಒದಗಿಸಬೇಕು ಎಂದು ಮನವಿ ಮಾಡಿದೆ. ಇದರಿಂದ ವಿಶ್ವವಿಖ್ಯಾತ ಹಂಪಿ ಪ್ರದೇಶವನ್ನು ಒಳಗೊಂಡ ಈ ಭಾಗದಲ್ಲಿ ಉದಯ ರೈಲಿನ ಆರಂಭದಿಂದ ದೇಶ ವಿದೇಶಗಳ ಜನತೆಗೆ ಬೆಂಗಳೂರಿಗೆ ಹೋಗಿ ಬರಲು ಅನುಕೂಲವಾಗುತ್ತದೆ. ಕಳೆದ 30 ವರ್ಷಗಳಿಂದ ಬಳ್ಳಾರಿ ಜನತೆ ಉದಯ ರೈಲಿನ ಬೇಡಿಕೆ ಇಡುತ್ತಿದ್ದೇವೆ ಎಂದು ವಿವರಿಸಿದ್ದಾರೆ.

ಬಳ್ಳಾರಿ ಮಾರ್ಗದಲ್ಲಿ ಸಂಚರಿಸುತ್ತಿದ್ದ ಕೊಲ್ಲಾಪುರ-ಮುನಗೂರು ಎಕ್ಸ್ಪ್ರೆಸ್ ರೈಲು ರೈಲ್ವೆ ಬಜೆಟ್‌ನಲ್ಲಿ ಘೋಷಣೆಯಾಗಿತ್ತು. ಕಳೆದ ಒಂದು ವರ್ಷದಿಂದ ಈ ರೈಲು ನಿಲುಗಡೆ ಆಗಿರುತ್ತದೆ ಹಾಗೂ ಶಿವಮೊಗ್ಗ-ಚೆನ್ನೈ ವಾರಕೊಮ್ಮೆ ಸಂಚರಿಸುವ ರೈಲುಗಳು ನಿಲುಗಡೆಯಾಗಿದ್ದು, ಈ ರೈಲುಗಳನ್ನು ಪುನಾರಾರಂಭಿಸಬೇಕು. ಬಳ್ಳಾರಿ ರೈಲ್ವೆ ನಿಲ್ದಾಣದ ಆಧುನಿಕರಣ ಬೇಗನೆ ಪೂರ್ಣಗೊಳ್ಳಬೇಕು. ಜೊತೆಗೆ ರಸಗೊಬ್ಬರಗಳ ಡೌನ್ಲೋಡಿಂಗ್ ಹೆಚ್ಚಿನ ಅನುಕೂಲ ಮಾಡಿಕೊಡಬೇಕು ಎಂದು ಮನವಿ ಮಾಡಿದರು.

ವಿ.ಸೋಮಣ್ಣ ಜೊತೆಗೆ ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ, ಹೆಚ್.ಡಿ ಕುಮಾರಸ್ವಾಮಿ, ಶೋಭಾ ಕರಂದ್ಲಾಜೆ, ಸಂಸದ ಜಗದೀಶ್ ಶೆಟ್ಟರ್ ಅವರಿಗೂ ಈ ಬಗ್ಗೆ ಗಮನ ಸೆಳೆಯುವಂತೆ ಮನವಿ ಮಾಡಿದೆ. ಈ ವೇಳೆ ಹುಬ್ಬಳ್ಳಿ ರೈಲ್ವೆ ವಿಭಾಗದ ಡಿಆರ್‌ಯು ಸಿಸಿ ಸದಸ್ಯ ಕೆ.ಎಮ್ ಕೊಟ್ರೇಶ್, ತಾಲೂಕ ಸಮಿತಿ ಅಧ್ಯಕ್ಷಪಿ ಯೋಗರಾಜ್ ಹಾಗೂ ಮುಖಂಡರುಗಳಾದ ಗೋನಾಳ್ ರಾಜಶೇಖರ ಗೌಡ, ದಮ್ಮುರು ಶೇಖರ್, ಪಲ್ಲೇದ ದೊಡ್ಡಪ್ಪ ಮತ್ತಿತರು ಉಪಸ್ಥಿತರಿದ್ದರು.