ಮನೆ ಸ್ಥಳೀಯ ಭಯೋತ್ಪಾದನೆ ವಿರುದ್ಧ ಗಟ್ಟಿ ನಿರ್ಧಾರ: ಪ್ರಧಾನಿ ಕಾರ್ಯಕ್ಕೆ ಸಂಸದ ಯದುವೀರ್ ಶ್ಲಾಘನೆ

ಭಯೋತ್ಪಾದನೆ ವಿರುದ್ಧ ಗಟ್ಟಿ ನಿರ್ಧಾರ: ಪ್ರಧಾನಿ ಕಾರ್ಯಕ್ಕೆ ಸಂಸದ ಯದುವೀರ್ ಶ್ಲಾಘನೆ

0

ಮೈಸೂರು: ಜಮ್ಮು ಕಾಶ್ಮೀರದ ಪೆಹಲ್ಗಾಮ್‌ನಲ್ಲಿ ಅಮಾಯಕರನ್ನು ಗುಂಡಿಟ್ಟು ಹತ್ಯೆ ಮಾಡಿದ ಪಾಕಿಸ್ತಾನದ ಉಗ್ರರಿಗೆ ಭಾರತೀಯ ಸೇನಾ ಪಡೆಗಳು ತಕ್ಕ ಉತ್ತರ ನೀಡಿದೆ. “ಆಪರೇಷನ್ ಸಿಂಧೂರ” ಮೂಲಕ ನಡೆಸಿರುವ ಸೇನಾ ಕಾರ್ಯಾಚರಣೆ ಅತ್ಯಂತ ನಿಖರ, ನಿರ್ದಿಷ್ಟ ಗಟ್ಟಿ ನಿರ್ಧಾರದ ಪ್ರತಿಫಲವಾಗಿದೆ ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದರು.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ಭಯೋತ್ಪಾದನೆಯನ್ನು ನಿರ್ನಾಮ ಮಾಡಲು ಸಂಕಲ್ಪ ತೊಟ್ಟಿದೆ. ಅದು “ಆಪರೇಷನ್ ಸಿಂಧೂರ” ಮೂಲಕ ಕಾರ್ಯಾರಂಭವಾಗಿದೆ. ಪೆಹಲ್ಗಾಮ್ ದಾಳಿಯನ್ನು ನೋಡಿದ ಪ್ರತಿಯೊಬ್ಬರಿಗೂ ರಕ್ತ ಕುದಿಯುತ್ತಿತ್ತು. ಇಂಥ ಹೀನ ಕೃತ್ಯವನ್ನು ಸಹಿಸಲು ಸಾಧ್ಯವಿಲ್ಲ. ಅಮಾಯಕರನ್ನು ಕೊಂದು, ಹಲವಾರು ಮಹಿಳೆಯರ “ಸಿಂಧೂರ” ಕಸಿದ ಉಗ್ರರಿಗೆ ತಕ್ಕ ಉತ್ತರ ಕೊಡಬೇಕೆಂಬುದು ಭಾರತೀಯರ ನಿರೀಕ್ಷೆಯಾಗಿತ್ತು. ಅದರಂತೆ ಮೋದಿ ಸರ್ಕಾರ “ಆಪರೇಷನ್ ಸಿಂಧೂರ” ಹೆಸರಿನಲ್ಲೇ ದಾಳಿ ನಡೆಸಿ ನ್ಯಾಯ ಒದಗಿಸುತ್ತಿದೆ ಎಂದು ಹೇಳಿದರು.

ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದಲ್ಲಿದ್ದ ಉಗ್ರ ನೆಲೆಗಳು ಈಗ ಭಾರತೀಯ ವಾಯುಪಡೆಯ ದಾಳಿಯಲ್ಲಿ ನಾಶಗೊಂಡಿವೆ. ಮುಂಬರುವರ ದಿನಗಳಲ್ಲಿ ಇನ್ನಷ್ಟು ಪಾಠ ಕಲಿಸಲು ನಮ್ಮ ಸೇನಾ ಪಡೆಗಳು ಸನ್ನದ್ಧವಾಗಿದೆ. ಇಡೀ ವಿಶ್ವದಲ್ಲಿ ಉಗ್ರವಾದವನ್ನು ತೊಡೆದು ಹಾಕಲು ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದಲ್ಲಿ ಭಾರತ ಸಜ್ಜಾಗಿದೆ. ಮುಂಬರುವ ದಿನಗಳಲ್ಲಿ ಇನ್ನೂ ದೊಡ್ಡ ಮಟ್ಟದಲ್ಲಿ ಆಕ್ರಮಣ ನಡೆಯುವ ಸಾಧ್ಯತೆಯೂ ಇದೆ ಎಂದು ವಿವರಿಸಿದರು.

ನಾಗರಿಕರು ಕೂಡ ಈ ಸಂದರ್ಭದಲ್ಲಿ ಅತ್ಯಂತ ಹೆಚ್ಚು ಜಾಗರೂಕತೆಯಿಂದ ಇರಬೇಕು. ಮಾಕ್ ಡ್ರಿಲ್‌ಗಳು ನಡೆಯುತ್ತಿರುತ್ತವೆ. ಆಡಳಿತಾಧಿಕಾರಿಗಳು ನೀಡುವ ಸಲಹೆ-ಸೂಚನೆಗಳನ್ನು ಪಾಲಿಸಬೇಕು. ಆದರೆ ಯಾವುದೇ ಆತಂಕಕ್ಕೆ ಒಳಗಾಗುವುದು ಬೇಡ. ಆಪರೇಷನ್ ಸಿಂಧೂರ ಕಾರ್ಯಾಚರಣೆಗೆ ದೇಶದಲ್ಲಿ ಮಾತ್ರವಲ್ಲ ವಿದೇಶಗಳಿಂದಲೂ ಮೆಚ್ಚುಗೆ ವ್ಯಕ್ತವಾಗಿದೆ. ಇಂಥ ಸಂದರ್ಭದಲ್ಲಿ ಮಹಾತ್ಮ ಗಾಂಧಿ ಫೋಟೋ ಹಾಕಿ ಶಾಂತಿ ಮಂತ್ರ ಪಠಿಸಬೇಕು ಎಂದು ಸಂದೇಶ ನೀಡಿದ ಕಾಂಗ್ರೆಸ್‌ಗೆ ಸಮಯ ಪ್ರಜ್ಞೆ ಇಲ್ಲ ಎನಿಸುತ್ತದೆ ಎಂದರು.

ಇದು ಶಾಂತಿ ಸಾರುವ ಸಮಯವಲ್ಲ, ನಮ್ಮ ನಾಗರಿಕರ ಹತ್ಯೆ ಮಾಡಿದವರಿಗೆ ತಕ್ಕ ಶಾಸ್ತಿ ಮಾಡುವ ಕಾಲ. ಈ ವೇಳೆಯಲ್ಲಿ ರಾಜಕೀಯ ಮಾಡುವುದು ಘೋರ ಅಪರಾಧ. ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಆಗುತ್ತಿದ್ದಂತೆ ಕಾಂಗ್ರೆಸ್ ಪಕ್ಷ ಟ್ವೀಟ್ ಡಿಲೀಟ್ ಮಾಡಿದೆ. ಕಾಂಗ್ರೆಸ್ ಪಕ್ಷ ಇನ್ನಾದರೂ ಸುಧಾರಿಸಲಿ. ನಾವೆಲ್ಲರೂ ಸರ್ಕಾರದ ಜೊತೆಗೆ ಮತ್ತು ನಮ್ಮ ವೀರ ಸೇನಾ ಪಡೆಗಳ ಜೊತೆ ನಿಲ್ಲೋಣ. ದೇಶದ ಮೇಲೆ ಮತ್ತು ನಮ್ಮ ನಾಗರಿಕರ ಮೇಲೆ ದಾಳಿ ನಡೆಸುವವರಿಗೆ ಪ್ರತಿದಾಳಿಯೇ ತಕ್ಕ ಉತ್ತರ ಎಂಬ ಸಂದೇಶ ಸಾರಿದ್ದೇವೆ. ಉಗ್ರವಾದ, ದೇಶ ದ್ರೋಹಕ್ಕೆ ತಕ್ಕ ಪಾಠವಾಗಲಿದೆ ಎಂದು ತಿಳಿಸಿದರು