ಮಂಗಳೂರು : ಅನನ್ಯಾ ಭಟ್ ನಾಪತ್ತೆ ಪ್ರಕರಣದ ಸೃಷ್ಟಿಕರ್ತೆ ಸುಜಾತ ಭಟ್ ಇಂದು ವಿಶೇಷ ತನಿಖಾ ತಂಡದ ಕಚೇರಿಗೆ ಆಗಮಿಸಿ ಅಧಿಕಾರಿಗಳಿಗೆ ಶಾಕ್ ಕೊಟ್ಟಿದ್ದಾರೆ. ಅನನ್ಯಾ ಭಟ್ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ಪೊಲೀಸರು ಆ.29 ರಂದು ವಿಚಾರಣೆಗೆ ಹಾಜರಾಗುವಂತೆ ಸುಜಾತ ಭಟ್ಗೆ ನೋಟಿಸ್ ನೀಡಿದ್ದರು.
ಶುಕ್ರವಾರ ವಿಚಾರಣೆ ನಿಗದಿಯಾಗಿದ್ದರೂ ಇಂದು ಬೆಳಗ್ಗೆ 5 ಗಂಟೆಗೆ ಬೆಳ್ತಂಗಡಿಯಲ್ಲಿರುವ ಎಸ್ಐಟಿ ಕಚೇರಿಗೆ ಇಬ್ಬರು ವಕೀಲರ ಜೊತೆ ಆಗಮಿಸಿದ್ದಾರೆ. ಸುಜಾತ ಭಟ್ ಬರುವಾಗ ಅಧಿಕಾರಿಗಳು ನಿದ್ದೆಯಲ್ಲಿದ್ದರು. ಕಚೇರಿಗೆ ಬಂದ ನಂತರ ಪೊಲೀಸರು ಸುಜಾತ ಭಟ್ ಅವರನ್ನು ಒಳಗಡೆ ಬರುವಂತೆ ಹೇಳಿದ್ದಾರೆ.
ಮಣಿಪಾಲದಲ್ಲಿ ಎಂಬಿಬಿಎಸ್ ಓದುತ್ತಿದ್ದ ಪುತ್ರಿ ಅನನ್ಯಾ ಭಟ್ ಧರ್ಮಸ್ಥಳಕ್ಕೆ ಬಂದಾಗ ನಾಪತ್ತೆಯಾಗಿದ್ದಾಳೆ. ಈ ವೇಳೆ ನನ್ನ ಮಗಳ ಮೂಳೆ ಸಿಕ್ಕಿದರೆ ನಾನು ಸನಾತನ ಹಿಂದೂ ಧರ್ಮದ ಪ್ರಕಾರ ಅಂತ್ಯಸಂಸ್ಕಾರ ಮಾಡುತ್ತೇನೆ ಎಂದು ಸುಜಾತ ಭಟ್ ಕಲರ್ ಕಲರ್ ಕಥೆ ಕಟ್ಟಿದ್ದರು.
ಸುಜಾತ ಭಟ್ ಅಂತ್ಯ ಹಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಸಮೀರ್ ಅನನ್ಯಾ ಭಟ್ಗೆ ಸಂಬಂಧಿಸಿದಂತೆ ಎಐ ವಿಡಿಯೋ ರಚಿಸಿ ಬುರುಡೆ ಬಿಟ್ಟಿದ್ದ. ಈ ವಿಡಿಯೋ ಲಕ್ಷಗಟ್ಟಲ್ಲೇ ವ್ಯೂ ಪಡೆದುಕೊಂಡಿತ್ತು ಮತ್ತು ಪ್ರಕರಣಕ್ಕೆ ದೊಡ್ಡ ತಿರುವು ನೀಡಿತ್ತು.
ಕೊನೆಗೆ ಸುಜಾತ ಭಟ್ ನಾನು ಹೇಳುತ್ತಿರುವುದು ಸುಳ್ಳು ಎಂದು ಅಧಿಕೃತವಾಗಿ ತಿಳಿಸಿ ಈ ನಾಪತ್ತೆ ಪ್ರಕರಣಕ್ಕೆ ಅಂತ್ಯ ಹಾಡಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಸುಜಾತ ಭಟ್ ಅವರನ್ನು ವಿಚಾರಣೆಗೆ ಬರುವಂತೆ ಸೂಚಿಸಿದ್ದರು.














