ಮುಂಬೈ : ಅಜಿತ್ ಪವಾರ್ ನಿಧನದಿಂದ ತೆರವಾಗಿರುವ ಬಾರಾಮತಿ ವಿಧಾನಸಭಾ ಉಪಚುನಾವಣೆಗೆ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರನ್ನು ಅಭ್ಯರ್ಥಿಯನ್ನಾಗಿ ಅಂತಿಮಗೊಳಿಸಿದೆ. ಮಂಗಳವಾರ (ಫೆ.24) ನಡೆದ ಪಕ್ಷದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಪಕ್ಷದ ಮೂಲಗಳು, ಸುನೇತ್ರಾ ಪವಾರ್ ಅವರ ಹೆಸರನ್ನು ರಾಷ್ಟ್ರೀಯ ಅಧ್ಯಕ್ಷೆಯಾಗಿ ಅಧಿಕೃತವಾಗಿ ಅನುಮೋದಿಸಲಾಗುವುದು ಎಂದು ದೃಢಪಡಿಸಿವೆ. ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಅವರು ನಿಧನರಾದ ನಂತರ ಪಕ್ಷದೊಳಗಿನ ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪದೋನ್ನತಿ ಮಾಡುವ ನಿರ್ಧಾರ ಕೈಗೊಳ್ಳಲಾಗಿದೆ.
ನಂತರ ಪಕ್ಷವು ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅವರ ಹೆಸರನ್ನು ಸರ್ವಾನುಮತದಿಂದ ಒಪ್ಪಿಕೊಂಡಿತು. ಸುನೇತ್ರಾ ಪವಾರ್ ಅವರು ಪ್ರಸ್ತುತ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಶಾಸಕಾಂಗ ಪಕ್ಷದ ನಾಯಕಿಯೂ ಆಗಿದ್ದಾರೆ. ಇದೇ ಸಭೆಯಲ್ಲಿ ಪಕ್ಷವು ರಾಜ್ಯಸಭೆಗೆ ಪಾರ್ಥ್ ಪವಾರ್ ಅವರ ನಾಮನಿರ್ದೇಶನವನ್ನು ಅಂತಿಮಗೊಳಿಸಿತು. ಸುನೇತ್ರಾ ಪವಾರ್ ಅವರ ರಾಜೀನಾಮೆಯಿಂದ ತೆರವಾದ ರಾಜ್ಯಸಭೆ ಸದಸ್ಯ ಸ್ಥಾನ ಖಾಲಿಯಾಗಿತ್ತು. ಮಹಾರಾಷ್ಟ್ರದಲ್ಲಿ ಖಾಲಿ ಇರುವ ಏಳು ರಾಜ್ಯಸಭಾ ಸ್ಥಾನಗಳಿಗೆ ಮಾ.16ರಂದು ಚುನಾವಣೆ ನಡೆಯಲಿದೆ.
ಜ.28ರಂದು ನಡೆದ ವಿಮಾನ ಅಪಘಾತದಲ್ಲಿ ಮಾಜಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ಮರಣದ ನಂತರ ಬಾರಾಮತಿ ವಿಧಾನಸಭಾ ಸ್ಥಾನ ಖಾಲಿಯಾಗಿತ್ತು. 2024ರ ವಿಧಾನಸಭಾ ಚುನಾವಣೆಯಲ್ಲಿ ಅಜಿತ್ ಪವಾರ್ ಅವರು ತಮ್ಮ ಸೋದರಳಿಯ ಮತ್ತು ಎನ್ಸಿಪಿ (ಎಸ್ಪಿ) ಅಭ್ಯರ್ಥಿ ಯುಗೇಂದ್ರ ಪವಾರ್ ಅವರನ್ನು 1,00,899 ಮತಗಳಿಂದ ಸೋಲಿಸಿದರು. ಅವರು 1,81,132 ಮತಗಳನ್ನು ಪಡೆದರೆ, ಯುಗೇಂದ್ರ 80,233 ಮತಗಳನ್ನು ಗಳಿಸಿದ್ದರು.














