ಮಂಡ್ಯ: ಮಹಾರಾಜರ ಆಡಳಿತದಲ್ಲಿ ತಮಿಳಿಗರು ವಾಸಿಸಲು ಕೊಡುಗೆಯಾಗಿ ನೀಡಿದ್ದ ಜಮೀನನ್ನು ಒತ್ತಾಯ ಪೂರ್ವಕವಾಗಿ ಖಾಲಿ ಮಾಡಿಸಲು ಹೊರಟಿರುವ ಬಲಾಢ್ಯರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ತಮಿಳು ಕಾಲೋನಿ ನಿವಾಸಿಗಳು ಮತ್ತು ಜೈಭೀಮ್ ಸಂಘಟನೆಯ ಮುಖಂಡರು ಮತ್ತು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಕುಮಾರಿ ಅವರು ಪ್ರತಿಭಟನೆಗೆ ಸಾಥ್ ನೀಡುವ ಮೂಲಕ ಘೊಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಿವಾಸಿಗಳು ವಾಸಿಸಲೆಂದು ಈ ಜಮೀನನ್ನು ಕೊಡುಗೆ ನೀಡಿದ್ದಾರೆ, ನಾವು ಈ ವಾಸಸ್ಥಳದಿಂದ ಖಾಲಿ ಮಾಡುವುದಿಲ್ಲ ಹಾಗಾಗಿ ನಮ್ಮನ್ನು ಒಕ್ಕಲೆಬ್ಬಿಸಬಾರದು. 1973 ರಲ್ಲಿ ನಗರಸಭೆಗೆ ಕಿಮ್ಮತ್ತು ಕಟ್ಟಿರುವ ಇಲ್ಲಿನ ನಿವಾಸಿಗಳು, ನಮ್ಮ ಪೂರ್ವಿಕರಿಂದಲೂ ವಾಸಿಸುತ್ತಾ ಬಂದಿದ್ದೇವೆ. ನಮ್ಮನ್ನು ಖಾಲಿ ಮಾಡಿಸಲು ಹೋಗಬಾರದು ಎಂದು ಒತ್ತಾಯಿಸಿದರು.
ಕೆಲವರು ನಮ್ಮನ್ನು ಖಾಲಿ ಮಾಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಿಮ್ಸ್ನವರು 2010 ರಲ್ಲಿ ನ್ಯಾಯಾಲಯದಲ್ಲಿ ದಾವೆ ಹೂಡಿದ್ದು, 2015 ರಲ್ಲಿ ತೆರವುಗೊಳಿಸಲು ಆದೇಶ ನೀಡಿದ ನಂತರ ನಾವೆಲ್ಲರು ಹೈಕೋರ್ಟ್ಗೆ ಹೋಗಿ ತಡೆಯಾಜ್ಞೆ ತಂದಿರುತ್ತೇವೆ, ಇಷ್ಟಿದ್ದರೂ ನಮ್ಮನ್ನು ಖಾಲಿ ಮಾಡಿಸಲು ಪ್ರಯತ್ತಿಸಿರುವುದನ್ನು ನಿಲ್ಲಿಸಬೇಕು. ಇಲ್ಲದಿದ್ದರೆ ಹೋರಾಟ ತೀವ್ರಗೊಳಿಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
251 ಕುಟುಂಬಗಳು ಇಲ್ಲಿ ಹಲವು ವರ್ಷಗಳಿಂದ ವಾಸಿಸುತ್ತಿದ್ದಾರೆ, ಹೈಕೋರ್ಟ್ನಲ್ಲಿ ಹಲವು ಬಾರಿ ನಮ್ಮ ಪರವಾಗಿಯೇ ಆದೇಶ ಬಂದಿದೆ. ಈ ಸ್ಥಳಕ್ಕೆ ಸಂಬಂಧಿಸಿದಂತೆ ಹಲವು ಅಗತ್ಯ ದಾಖಲೆಗಳನ್ನು ನಾವು ಹೊಂದಿದ್ದೇವೆ. 1933 ರಿಂದ ಇದುವರೆವಿಗೂ ವಾಸವಾಗಿರುವ ನಾವುಗಳು ಅವಿರತ ಹೋರಾಟ ನಡೆಸುತ್ತಲೇ ಇದ್ದೇವೆ, ನ್ಯಾಯ ದೊರಕಿಸಿಕೊಡಲು ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಬರಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಜೈಭೀಮ್ ಸಂಘಟನೆಯ ವೆಂಕಟೇಶ್, ವಿಜಯಕಾಂತ್, ಪ್ರಕಾಶ್, ನಿವಾಸಿಗಳಾದ ಅನ್ಬಳಗನ್, ಏಳುಮಲೈ, ಶ್ರೀಕಾಂತ್, ಸುರೇಶ್, ಮುರುಗನ್, ಕೊಂಗನಾಥ್, ಸೇರಿದಂತೆ ಹಲವರು ಭಾಗವಹಿಸಿದ್ದರು.














