ಮನೆ ರಾಜ್ಯ ಪಠ್ಯ ಪರಿಷ್ಕರಣೆ: ಸಿದ್ಧಗಂಗಾ, ಆದಿಚುಂಚಗಿರಿ ಸ್ವಾಮೀಜಿ ಮಾಹಿತಿ ಒಂದು ವಾಕ್ಯಕ್ಕೆ ಸೀಮಿತ

ಪಠ್ಯ ಪರಿಷ್ಕರಣೆ: ಸಿದ್ಧಗಂಗಾ, ಆದಿಚುಂಚಗಿರಿ ಸ್ವಾಮೀಜಿ ಮಾಹಿತಿ ಒಂದು ವಾಕ್ಯಕ್ಕೆ ಸೀಮಿತ

0

ಬೆಂಗಳೂರು (Bengaluru): ರೋಹಿತ್‌ ಚಕ್ರತೀರ್ಥ ನೇತೃತ್ವದ ಪಠ್ಯ ಪುಸ್ತಕ ಪರಿಷ್ಕರಣಾ ಸಮಿತಿಯು ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ ಕುರಿತ ವಿವರಗಳನ್ನು ಮರು ಪರಿಷ್ಕರಣೆ ಮಾಡುವಾಗ ಒಂದೇ ವಾಕ್ಯಕ್ಕೆ ಸೀಮಿತಗೊಳಿಸಿದೆ!.

6 ನೇ ತರಗತಿಯ ಸಮಾಜವಿಜ್ಞಾನ ಭಾಗ 1ರಲ್ಲಿದ್ದ ಸಿದ್ಧಗಂಗೆಯ ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿ ಸ್ವಾಮೀಜಿ ಕುರಿತ ವಿವರಗಳನ್ನು ಮರು ಪರಿಷ್ಕರಣೆ ಮಾಡುವಾಗ ಒಂದೇ ವಾಕ್ಯಕ್ಕೆ ಸೀಮಿತಗೊಳಿಸಿದೆ. ಸಿದ್ಧಗಂಗಾ ಮಠ ಹಾಗೂ ಆದಿ ಚುಂಚನಗಿರಿ ಮಠಗಳ ಕುರಿತು ವಿವರಗಳನ್ನು ಪಾಠದಿಂದ ಕೈ ಬಿಡುವ ಮೂಲಕ ಚಕ್ರತೀರ್ಥ ಸಮಿತಿಯು ಅನ್ಯಾಯ ಮಾಡಿದೆ ಎಂಬ ಆರೋಪ ಕೇಳಿಬಂದಿದೆ.

ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯು ಪಠ್ಯಪುಸ್ತಕ ಪರಿಷ್ಕರಣೆ ಮಾಡಿದಾಗ, ಸಿದ್ಧಗಂಗಾ ಮಠವು ಶ್ರೀ ಶಿವಕುಮಾರ ಸ್ವಾಮಿಗಳ ನೇತೃತ್ವದಲ್ಲಿ ಸಾವಿರಾರು ಬಡ ವಿದ್ಯಾರ್ಥಿಗಳಿಗೆ ಅಕ್ಷರ ಮತ್ತು ಅನ್ನ ದಾಸೋಹದ ಕಾರ್ಯ ನಡೆಸುತ್ತಿದೆ. ರಾಮನಗರ ಜಿಲ್ಲೆಯಲ್ಲಿ ನೆಲೆಸಿದ್ದ ಶ್ರೀ ಬಾಲಗಂಗಾಧರ ಸ್ವಾಮೀಜಿಯವರ ನೇತೃತ್ವದಲ್ಲಿ ಬೆಳೆದ ಆದಿ ಚುಂಚನಗಿರಿ ಮಠದ ಶೈಕ್ಷಣಿಕ ಸೇವೆಯು ಅಪೂರ್ವವಾಗಿದ್ದು, ಮೂಲ ಶಿಕ್ಷಣ, ವೃತ್ತಿ ಶಿಕ್ಷಣ ಕಾಲೇಜುಗಳನ್ನು ನಡೆಸುತ್ತಿದೆ. ಚಿತ್ರದುರ್ಗದ ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ ಎಂಬ ಭಾಗವನ್ನು ಅಳವಡಿಸಿತ್ತು.

ಆದರೆ, ಚಕ್ರತೀರ್ಥ ಸಮಿತಿಯು ಈ ಭಾಗಕ್ಕೆ ಕತ್ತರಿ ಪ್ರಯೋಗಿಸಿ, ಸಿದ್ಧಗಂಗಾ ಮಠ ಹಾಗೂ ಆದಿ ಚುಂಚನಗಿರಿ ಮಠ, ಮುರುಘರಾಜೇಂದ್ರ ಮಠ ಮತ್ತು ಸಿರಿಗೆರೆ ತರಳಬಾಳು ಮಠಗಳ ಶೈಕ್ಷಣಿಕ ಸೇವೆಯೂ ಗಮನಾರ್ಹ ಎಂಬ ಒಂದು ವಾಕ್ಯವನ್ನು ಮಾತ್ರ ಉಳಿಸಿಕೊಂಡಿದೆ.

ಲೋಪ ಸರಿಪಡಿಸಲು ಮಠಾಧೀಶರಿಂದ 10 ದಿನ ಗಡುವು:

ಪುಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಲೋಪವನ್ನು ಹತ್ತು ದಿನಗಳ ಒಳಗಾಗಿ ಸರಿಪಡಿಸಬೇಕು ಎಂದು ಉತ್ತರ ಕರ್ನಾಟಕ ಪ್ರಮುಖ ಮಠಗಳ ಮಠಾಧೀಶರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ 21 ಪ್ರಮುಖ ಮಠಗಳ ಮಠಾಧೀಶರೊಂದಿಗೆ ಧಾರಾವಾಡದಲ್ಲಿ ನಡೆಸಿದ ನಂತರ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಮೊದಲ ಭಾಗದಲ್ಲಿ ವೈದಿಕ ಧರ್ಮವನ್ನು ಮಕ್ಕಳ ಮೇಲೆ ಹೇರುವ ಕೆಲಸವನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿದೆ. ವೈದಿಕ ಪರಂಪರೆ ಹಾಗೂ ಜನಿವಾರವನ್ನು ಧಿಕ್ಕರಿಸಿ ಅರಿವೇ ಗುರು ಎಂದ ಬಸವಣ್ಣನವರು ಲಿಂಗಾಯತ ಧರ್ಮ ಪ್ರತಿಷ್ಠಾಪಿತರು. ಆದರೆ ಅವರ ತತ್ವಕ್ಕೆ ಅಪಚಾರ ಎಸಗುವ ಕೆಲಸವನ್ನು ಸಮಿತಿ ಮಾಡಿದೆ ಎಂದು ಆರೋಪಿಸಿದರು.

ಕುವೆಂಪು, ಅಂಬೇಡ್ಕರ್ ಹಾಗೂ ಇನ್ನಿತರ ಮಹಾನ್ ನಾಯಕರ ಕುರಿತೂ ತಪ್ಪು ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ಮುದ್ರಿಸಲಾಗಿದೆ. ಬಸವಣ್ಣನವರ ಕುರಿತ ಪಠ್ಯವನ್ನು ನಾವೇ ಪರಿಷ್ಕರಿಸಿ ಸರ್ಕಾರಕ್ಕೆ ನೀಡುತ್ತೇವೆ. ಸರ್ಕಾರ ಅದನ್ನಾದರೂ ಒಪ್ಪಬಹುದು, ಇಲ್ಲವೇ ತಾನೇ ಸರಿಪಡಿಸಬಹುದು. ಹತ್ತು ದಿನಗಳ ಒಳಗಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಮತ್ತೆ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಕುರಿತು ತೀರ್ಮಾನಿಸಲಾಗುವುದು ಎಂದರು.

ಇತ್ತೀಚೆಗೆ ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರು ಪ್ರತಿಕ್ರಿಯಿಸಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳಬೇಕು ಎಂದು ಆಗ್ರಹಿಸಿದರು.

ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆನಂದಪುರದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ನಿಡಸೋಸಿ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕೂಡಲಸಂಗಮದ ಗಂಗಾಮಾತಾಜಿ, ಬಸವಜಯಮೃತ್ಯುಂಜಯ ಸ್ವಾಮೀಜಿ, ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸೇರಿದಂತೆ 21 ಮಠಾಧೀಶರು ಪಾಲ್ಗೊಂಡಿದ್ದರು.

ಹಿಂದಿನ ಲೇಖನಪರಿಸರ ಸೂಚ್ಯಂಕ: ಭಾರತಕ್ಕೆ ಕೊನೆಯ ಸ್ಥಾನ
ಮುಂದಿನ ಲೇಖನರಾಜ್ಯದಲ್ಲಿ ಮುಂಗಾರು ದುರ್ಬಲ: 3 ದಿನದ ಬಳಿಕ ಮಳೆ ಬಿರುಸು ಪಡೆಯುವ ಸಾಧ್ಯತೆ