ಮನೆ ಅಪರಾಧ ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನಕ್ಕೆ ಯತ್ನಿಸಿದ ಕಾರು ಚಾಲಕ ಮತ್ತು  ಸಹಚರರ ಬಂಧನ

ತಾನು ಕೆಲಸ ಮಾಡುತ್ತಿದ್ದ ಮನೆಯಲ್ಲೇ ಕಳ್ಳತನಕ್ಕೆ ಯತ್ನಿಸಿದ ಕಾರು ಚಾಲಕ ಮತ್ತು  ಸಹಚರರ ಬಂಧನ

0

ದೇವನಹಳ್ಳಿ: ತಾನು ಕಾರ್ ಚಾಲಕನಾಗಿ ಕೆಲಸ ಮಾಡುತ್ತಿದ್ದ ಮನೆಯ ಮಾಲೀಕರ ಮೇಲೆ ಹಲ್ಲೆ ನಡೆಸಿ ಕಳ್ಳತನಕ್ಕೆ ಯತ್ನಿಸಿದ ವ್ಯಕ್ತಿಯನ್ನು ಪೊಲೀಸರು ಬಂಧಿಸಿರುವ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ತಾಲೂಕಿನ ನಾಗಮಂಗಲ ಗ್ರಾಮದಲ್ಲಿ ನಡೆದಿದೆ.

ಸದ್ಯ ಚಾಲಕ ಕೃಷ್ಣಮೂರ್ತಿ ಮತ್ತು ಸಹಚರ ಅನಿಲ್​ ನನ್ನು ಪೊಲೀಸರು ಬಂಧಿಸಿದ್ದಾರೆ.

ಕಾರ್ ಡ್ರೈವರ್ ಕೃಷ್ಣಮೂರ್ತಿ 8 ವರ್ಷಗಳಿಂದ ಒಂದೇ ಮನೆಯಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದ. ಇತ್ತೀಚೆಗೆ ಮನೆ ಮಾಲೀಕ ಜಮೀನು ಮಾರಿ ಬಂದ ಹಣವನ್ನು ಮನೆಯಲ್ಲಿಟ್ಟಿದ್ದ. ಈ ವಿಚಾರ ತಿಳಿದ ಆರೋಪಿ ಕೃಷ್ಣಮೂರ್ತಿ ಹಣ ಲಪಟಾಯಿಸಲು ತನ್ನ ಸ್ನೇಹಿತನೊಂದಿಗೆ ಸೇರಿಕೊಂಡು ಸಂಚು ರೂಪಿಸಿದ್ದ. ಅದರಂತೆ ಕಳೆದ ಶನಿವಾರ ಮುಂಜಾನೆ ಮನೆಯಿಂದ ಶೌಚಾಲಯಕ್ಕೆ ಅಂತ ಎದ್ದು ಹೊರಗಡೆ ಬಂದ ವೇಳೆ ಮನೆ ಮಾಲೀಕ ಹರೀಶ್ ಬಾಬು ಎಂಬುವವರ ಮೇಲೆ ಆರೋಪಿಗಳು ದಾಳಿ ಮಾಡಿ, ಲಾಂಗು ಚಾಕು ತೋರಿಸಿ ಹಲ್ಲೆ ಮಾಡಿದ್ದಾರೆ.

ಈ ವೇಳೆ ಪತ್ನಿ ಕೋಣೆಯಲ್ಲಿ ಬಾಗಿಲು ಲಾಕ್ ಮಾಡಿಕೊಂಡು ಪೊಲೀಸರಿಗೆ ಫೋನ್ ಮಾಡ್ತಿದ್ದಂತೆ ಆರೋಪಿಗಳು ಪರಾರಿಯಾಗಿದ್ದಾರೆ.

ಕಳ್ಳತನ ಯತ್ನದ ದೃಶ್ಯಗಳು ಮನೆಯ ಸಿಸಿ ಟಿವಿಯಲ್ಲಿ ಸೆರೆಯಾಗಿವೆ. ಈ ದೃಶ್ಯಗಳನ್ನು ಆಧರಿಸಿ ವಿಶ್ವನಾಥಪುರ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಕೃತ್ಯಕ್ಕೆ ಬಳಸಿದ್ಧ ಚಾಕು ಮತ್ತು ಬೈಕನ್ನು ವಿಶ್ವನಾಥಪುರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.