ನಿರ್ದಿಷ್ಟ ಸ್ಥಳ ಮತ್ತು ಹುದ್ದೆಗಳಲ್ಲಿ ಕರ್ತವ್ಯ ನಿರ್ವಹಿಸುವ ಐಎಎಸ್ ಅಧಿಕಾರಿಗಳ ಕನಿಷ್ಠ ಸೇವಾವಧಿಯನ್ನು ನಿಗದಿಪಡಿಸುವ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅವರ ಹಿತಕಾಯುವ ಉದ್ದೇಶ ಹೊಂದಿರುವ ನಾಗರಿಕ ಸೇವಾ ಮಂಡಳಿ (ಸಿಎಸ್ಬಿ) ಕುರಿತ ನಿರ್ಧಾರ ಕೈಗೊಳ್ಳುವುದು ರಾಕೆಟ್ ತಂತ್ರಜ್ಞಾನವಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಆಡಳಿತಾತ್ಮಕ ನಿರ್ಧಾರವಾಗಿದೆ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಚಾಟಿ ಬೀಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದ ಅನುಸಾರ ಕರ್ನಾಟಕದಲ್ಲಿ ನಾಗರಿಕ ಸೇವಾ ಮಂಡಳಿ ರಚಿಸಬೇಕು ಹಾಗೂ ನಾಗರಿಕರ ಸೇವಾ ಅಧಿಕಾರಿಗಳ ಕನಿಷ್ಠ ಸೇವಾವಧಿ ನಿಗದಿಪಡಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಕೋರಿ ಸಾಮಾಜಿಕ ಕಾರ್ಯಕರ್ತರೂ ಆದ ಬೆಂಗಳೂರಿನ ರಿಷಬ್ ಟ್ರಕ್ರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಎನ್ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಎಂ ಐ ಅರುಣ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲ ನಚಿಕೇತ್ ಜೋಶಿ ಅವರು “ನಾಗರಿಕ ಸೇವಾ ಮಂಡಳಿಯನ್ನು ರಚಿಸುವುದಕ್ಕೆ ಸಂಬಂಧಿಸಿದಂತೆ 2014ರಲ್ಲಿ ಸಂಪುಟ ಸಭೆಯಲ್ಲಿ ತೆಗೆದುಕೊಂಡಿರುವ ನಿರ್ಧಾರವನ್ನು ರಾಜ್ಯ ಸರ್ಕಾರವು ಅಮಾನತಿಲ್ಲಿಟ್ಟಿದೆ. ಆನಂತರ ಸಿಎಸ್ಬಿ ರಚಿಸುವಂತೆ ಹೈಕೋರ್ಟ್ ವಿಭಾಗೀಯ ಪೀಠವು ನಿರ್ದೇಶಿಸಿದೆ. ಇಲ್ಲಿಯವರೆಗೆ ಅದನ್ನೂ ರಚಿಸಲಾಗಿಲ್ಲ. ಹಿಂದಿನ ವಿಚಾರಣೆಯಲ್ಲಿ ಅಡ್ವೊಕೇಟ್ ಜನರಲ್ ಅವರು ಅಧಿವೇಶನ ನಡೆಯುತ್ತಿದ್ದು, ಮಾಹಿತಿ ಪಡೆದು ಪೀಠದ ಮುಂದೆ ಇಡುವುದಾಗಿ ಹೇಳಿದ್ದರು. ಆ ವೇಳೆ ಸ್ಥಿತಿಗತಿ ವರದಿ ಸಲ್ಲಿಸುವಂತೆ ನ್ಯಾಯಾಲಯ ಆದೇಶಿಸಿತ್ತು. ಈಗ ಮತ್ತೆ ಕಾಲಾವಕಾಶ ಕೇಳಲಾಗುತ್ತಿದೆ. ಒಂದು ದಶಕವಾದರೂ ಯಾವುದೇ ಬೆಳವಣಿಗೆಯಾಗಿಲ್ಲ. ನಮ್ಮ ರಾಜ್ಯ ಸರ್ಕಾರಕ್ಕೆ ಸಿಎಸ್ಬಿ ರಚಿಸಲಾಗಿದ್ದು, ಬೇರೆ ರಾಜ್ಯಗಳು ಮಾಡುವುದು ಬೇಕಿಲ್ಲ” ಎಂದರು.
ಆಗ ರಾಜ್ಯ ಸರ್ಕಾರ ಪ್ರತಿನಿಧಿಸಿದ್ದ ವಕೀಲೆ ನಿಲೋಫರ್ ಅಕ್ಬರ್ ಅವರು “ಈ ವಿಚಾರವನ್ನು ಸಂಪುಟ ಸಮಿತಿಯ ಪರಿಶೀಲನೆಗೆ ಕಳುಹಿಸಲಾಗಿದೆ. ಬೇರೆ ರಾಜ್ಯಗಳಿಂದಲೂ ಈ ಸಂಬಂಧ ಮಾಹಿತಿ ಕೇಳಲಾಗಿದೆ. ಪರಿಣಾಮಕಾರಿಯಲ್ಲದ ನಿರ್ಧಾರ ಕೈಗೊಳ್ಳಬಾರದು ಎಂಬುದರ ಹಿನ್ನೆಲೆಯಲ್ಲಿ ತಡವಾಗಿದ್ದು, ನಾಲ್ಕು ವಾರ ಕಾಲಾವಕಾಶ ನೀಡಬೇಕು” ಎಂದರು.
ಇದರಿಂದ ಕೆರಳಿದ ನ್ಯಾಯಮೂರ್ತಿ ಅರುಣ್ ಅವರು “ನಿರ್ದಿಷ್ಟ ಹುದ್ದೆಯಿಂದ ಅಧಿಕಾರಿಯೊಬ್ಬರನ್ನು ಏಕೆ ವರ್ಗಾವಣೆ ಮಾಡಲಾಗುತ್ತದೆ ಎಂಬುದನ್ನು ಲಿಖಿತವಾಗಿ ಉಲ್ಲೇಖಿಸಿ, ಅಸಾಮಾನ್ಯ ಸಂದರ್ಭದಲ್ಲಿ ವರ್ಗಾವಣೆ ಮಾಡಬಹುದು. ಆಳವಾಗಿ ಬೇರೂರಿರುವ ಭ್ರಷ್ಟಾಚಾರವನ್ನು ತೊಡೆದು ಹಾಕಲು ಅಧಿಕಾರಿಯೊಬ್ಬರಿಗೆ ನಿರ್ದಿಷ್ಟ ಸೇವಾ ಭದ್ರತೆ ಒದಗಿಸಬೇಕು. ವಾಸ್ತವವಾಗಿ ಏನು ನಡೆಯುತ್ತಿದೆ ಎಂಬುದು ಎಲ್ಲರಿಗೂ ಗೊತ್ತಿದೆ” ಎಂದರು.
“ಸಿಎಸ್ಬಿ ರೂಪಿಸಲು ನಿಮಗೆ ಕಾಲಾವಕಾಶಬೇಕಿಲ್ಲ. ಇದು ರಾಕೆಟ್ ತಂತ್ರಜ್ಞಾನವಲ್ಲ. ಬೇರೆ ಇಲಾಖೆಗಳಿಂದ ಮಾಹಿತಿ ಪಡೆದು ರಾಕೆಟ್ ಅನ್ನು ಹೇಗೆ ರೂಪಿಸಬೇಕು ಎಂಬಂಥ ವಿಚಾರ ಇದಲ್ಲ. ರಾಜ್ಯದ ಹಿತದೃಷ್ಟಿಯಿಂದ ಕೈಗೊಳ್ಳಬೇಕಾದ ಆಡಳಿತಾತ್ಮಕ ನಿರ್ಧಾರ ಇದಾಗಿದೆ. ಈ ವಿಚಾರಕ್ಕಾಗಿ ನೀವು ಬೇರೆ ಕಡೆಯಿಂದ ಮಾಹಿತಿ ಪಡೆಯಬೇಕಿಲ್ಲ. ಒಬ್ಬ ಅಧಿಕಾರಿಯನ್ನು ಒಂದು ಹುದ್ದೆಗೆ ನೇಮಿಸಿ, ಕನಿಷ್ಠ ಮೂರು ವರ್ಷ ಅವರನ್ನು ಅಲ್ಲಿ ಉಳಿಸದಿದ್ದರೆ ಅವರು ಕೆಲಸ ಮಾಡುವುದು ಹೇಗೆ?” ಎಂದು ಕಿಡಿಕಾರಿದರು.
ಅಂತಿಮವಾಗಿ ಪೀಠವು ಮಾರ್ಚ್ 21ರಂದು ನ್ಯಾಯಾಲಯಕ್ಕೆ ಸಿಎಸ್ಬಿ ರಚಿಸುವ ವಿಚಾರದಲ್ಲಿ ಏನಾಗಿದೆ ಎಂಬುದರ ಮಾಹಿತಿ ಒದಗಿಸಬೇಕು ಎಂದು ಅರ್ಜಿ ವಿಚಾರಣೆ ಮುಂದೂಡಿತು.














