ಬಹುತೇಕ ಹೊಸ ಪ್ರತಿಭೆಗಳೇ ಸೇರಿ ನಿರ್ಮಿಸಿರುವ “ಜೊತೆಯಾಗಿರು’ ಸಿನಿಮಾ ಬಿಡುಗಡೆಗೆ ಸಿದ್ಧವಾಗುತ್ತಿದೆ. ಈಗಾಗಲೇ ಸದ್ದಿಲ್ಲದೆ ಈ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪೂರ್ಣಗೊಂಡಿದ್ದು, ಇತ್ತೀಚೆಗೆ “ಜೊತೆಯಾಗಿರು’ ಸಿನಿಮಾವನ್ನು ವೀಕ್ಷಿಸಿದ ಪ್ರಾದೇಶಿಕ ಸೆನ್ಸಾರ್ ಮಂಡಳಿ ಸಿನಿಮಾಕ್ಕೆ “ಯು/ಎ’ ಸರ್ಟಿಫೀಕೆಟ್ ನೀಡಿ ಬಿಡುಗಡೆಗೆ ಅಸ್ತು ಎಂದಿದೆ.
2009ರಲ್ಲಿ ನೆಡೆದ ಸತ್ಯ ಘಟನೆಯೊಂದನ್ನು ಆಧರಿಸಿದ ಈ ಚಿತ್ರಕ್ಕೆ ಸತೀಶ್ ಕುಮಾರ್ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಕೀಪ್ಯಾಡ್ ಮೊಬೈಲ್ ಇದ್ದಂಥ ಸಮಯದಲ್ಲಿ ಹುಡುಗಿಯ ಮೊಬೈಲ್ಗೆ ಬರುವ ಒಂದು ಮಿಸ್ಕಾಲ್ನಿಂದ ಆರಂಭವಾಗುವ ಪ್ರೇಮಕಥೆ ಮುಂದೆ, ಏನೆಲ್ಲ ತಿರುವುಗಳನ್ನು ಪಡೆದುಕೊಳ್ಳುತ್ತದೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ. ಚಿತ್ರವನ್ನು ಅದೇ ಕಾಲಘಟ್ಟಕ್ಕೆ ತಕ್ಕಂತೆ ಚಿತ್ರಿಸಲಾಗಿದೆ ಎಂಬುದು ಚಿತ್ರತಂಡ ಮಾತು.
ವೆಂಕಟೇಶ್ ಹೆಗ್ಡೆ ಮತ್ತು ಸುನೀಲ್ ಕಾಂಚನ್ ನಾಯಕರಾಗಿ, ರಶ್ಮಿಗೌಡ, ಮತ್ತು ಪೂಜಾ ಆಚಾರ್ ನಾಯಕಿಯರಾಗಿ ನಟಿಸಿದ್ದಾರೆ. ಉಳಿದಂತೆ ಶಂಕರ ನಾರಾಯಣ್, ಸುಧೀರ್, ಸುಧಾ, ಯಶೋಧ, ಅಶ್ವಿನಿ, ಸಂತೋಷ್, ರಾಜಶೇಖರ್, ಮಂಜು ಮುಂತಾದವರು ಸಿನಿಮಾದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. “ರೇಣು ಮೂವೀಸ್’ ನಿರ್ಮಾಣದ ಈ ಚಿತ್ರದ ಐದು ಹಾಡುಗಳಿಗೆ ವಿನು ಮನಸು ಸಂಗೀತ ನಿರ್ದೇಶನವಿದೆ. ರಾಜ ಶಿವಶಂಕರ್ ಮತ್ತು ಆನಂದ್ ಇಳಯರಾಜ ಛಾಯಾಗ್ರಹಣ, ಸತೀಶ್ ಚಂದ್ರಯ್ಯ ಸಂಕಲನ, ಕೆ.ಕಲ್ಯಾಣ್ ಮತ್ತು ಮನ್ವರ್ಷಿ ಸಾಹಿತ್ಯವಿದೆ. ಕಳಸ, ಸಕಲೇಶಪುರ, ಕುಂದಾಪುರ, ಬೆಂಗಳೂರು ಸುತ್ತಮುತ್ತ “ಜೊತೆಯಾಗಿರು’ ಸಿನಿಮಾದ ಚಿತ್ರೀಕರಣ ನಡೆಸಲಾಗಿದೆ
ಈ ವರ್ಷದ ಕೊನೆಯಲ್ಲಿ “ಜೊತೆಯಾಗಿರು’ ಚಿತ್ರವನ್ನು ಬಿಡುಗಡೆ ಮಾಡುವ ಯೋಜನೆಯಲ್ಲಿದೆ ಚಿತ್ರತಂಡ.














