ಮನೆ ರಾಜ್ಯ ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸುವ ಪ್ರಕ್ರಿಯೆ ಇನ್ನಷ್ಟು ತೀವ್ರ – ಮಹತ್ವದ ಸಭೆ

ಕುರುಬ ಸಮುದಾಯವನ್ನ ಎಸ್‌ಟಿಗೆ ಸೇರಿಸುವ ಪ್ರಕ್ರಿಯೆ ಇನ್ನಷ್ಟು ತೀವ್ರ – ಮಹತ್ವದ ಸಭೆ

0

ಬೆಂಗಳೂರು : ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂಬ ಹಲವು ವರ್ಷಗಳ ಬೇಡಿಕೆ ಶೀಘ್ರದಲ್ಲೇ ನೆರವೇರುವ ಸಾಧ್ಯತೆಗಳು ಕಂಡುಬಂದಿದೆ. ಎಸ್‌ಟಿ ಸಮುದಾಯಕ್ಕೆ ಸೇರಿಸುವ ಪ್ರಕ್ರಿಯೆಯನ್ನು ರಾಜ್ಯ ಸರ್ಕಾರ ಮತ್ತಷ್ಟು ತೀವ್ರಗೊಳಿಸಿದೆ.

ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಸಿಎಂ ಬಳಿಯೇ ಇದೆ. ಹೀಗಾಗಿ ಸಿಎಂ ಸೂಚನೆ ಮೇರೆಗೆ ನಾಳೆ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಸಭೆ ಕರೆದಿದೆ. ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಎಂಎಸ್ ಬಿಲ್ಡಿಂಗ್‌ನಲ್ಲಿ ಮಹತ್ವದ ಸಭೆ ನಡೆಯಲಿದ್ದು, ಸಭೆಗೆ ಅಗತ್ಯ ದಾಖಲೆಗಳನ್ನು ತರುವಂತೆ ನಾಲ್ಕು ಇಲಾಖೆಗಳಿಗೆ ಪತ್ರದ ಮುಖೇನ ಸೂಚನೆ ನೀಡಲಾಗಿದೆ.

ಸೂಚನಾ ಪತ್ರದಲ್ಲಿ 2 ವಿಚಾರಗಳ ಬಗ್ಗೆ ಚರ್ಚೆ ನಡೆದಿದೆ. ಮೊದಲಿಗೆ ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರ್ಪಡೆಗೊಳಿಸುವ ವಿಚಾರ ಮತ್ತೊಂದು ಮೂರು ಜಿಲ್ಲೆಗಳಲ್ಲಿ ಮೂರು ಜಿಲ್ಲೆಗಳಲ್ಲಿ ಕುರುಬ ಸಮುದಾಯದ ಬೆಳವಣಿಗೆಗಳ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಈ ಮೂಲಕ ಮತ್ತೊಂದು ರಾಜಕೀಯ ಗುದ್ದಾಟಕ್ಕೆ ವೇದಿಕೆ ಸಿದ್ಧ ಮಾಡಿದ್ರಾ ಸಿಎಂ? ಅನ್ನೋ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಕುರುಬ ಸಮುದಾಯವನ್ನು ಎಸ್‌ಟಿಗೆ ಸೇರಿಸಬೇಕೆಂದು ಒತ್ತಾಯಿಸಿ ಹಲವು ವರ್ಷಗಳಿಂದ ಸಮುದಾಯದ ಮುಖಂಡರು ಹೋರಾಟ ನಡೆಸುತ್ತಿದ್ದಾರೆ. ತಮಿಳುನಾಡು, ಆಂಧ್ರಪ್ರದೇಶಗಳಲ್ಲೂ ಕುರುಬರನ್ನ ಎಸ್‌ಟಿ ವರ್ಗಕ್ಕೆ ಸೇರಿಸಲಾಗಿದೆ. ಸದ್ಯ ಕಾಡು ಕುರುಬರು ಮತ್ತು ಜೇನು ಕುರುಬರು ಮಾತ್ರ ಎಸ್‌ಟಿ ವರ್ಗದಲ್ಲಿದ್ದಾರೆ. ಉಳಿದ ಕುರುಬ ಸಮುದಾಯದ ಒಳ ಪಂಗಡಗಳನ್ನೂ ಎಸ್‌ಟಿಗೆ ಸೇರಿಸಬೇಕೆಂದು ಭಾರೀ ಒತ್ತಾಯ ಕೇಳಿಬರುತ್ತಲೇ ಇದೆ.

ರಾಜ್ಯ ಸರ್ಕಾರ 2023 ರಲ್ಲೇ ಕ್ಯಾಬಿನೆಟ್ ಸಭೆಯಲ್ಲಿ ಕುರುಬರನ್ನು ಎಸ್‌ಟಿಗೆ ಸೇರಿಸುವ ತೀರ್ಮಾನ ಕೈಗೊಂಡಿತ್ತು. ಅದರಂತೆ 2023ರ ಜುಲೈನಲ್ಲಿ ಕೇಂದ್ರ ಸರ್ಕಾರಕ್ಕೂ ಎಸ್‌ಟಿಗೆ ಸೇರಿಸುವಂತೆ ಶಿಫಾರಸು ಮಾಡಿತ್ತು. ಮೈಸೂರಿನ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆಯಿಂದ ಕುರುಬ ಸಮುದಾಯದ ಜನಾಂಗೀಯ ಅಧ್ಯಯನ ನಡೆಸಿದ ವರದಿಯನ್ನೂ ಕಳುಹಿಸಲಾಗಿತ್ತು. ಇದೀಗ ಈವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.