ಮನೆ ರಾಜ್ಯ ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ..!

ಇಂದು ವಿಶ್ವವಿಖ್ಯಾತ ಮೇಲುಕೋಟೆ ವೈರಮುಡಿ ಉತ್ಸವ..!

0

ಮಂಡ್ಯ : ಇಂದು ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಮೇಲುಕೋಟೆಯಲ್ಲಿ ವಿಶ್ವವಿಖ್ಯಾತ ವೈರಮುಡಿ ಬ್ರಹ್ಮೋತ್ಸವ ಜರುಗಲಿದೆ. ಈ ವೈರಮುಡಿ ಉತ್ಸವದಲ್ಲಿ ಶ್ರೀದೇವಿ, ಭೂದೇವಿಯರೊಂದಿಗೆ ಚೆಲುವನಾರಾಯಣಸ್ವಾಮಿ ಭಕ್ತರಿಗೆ ದರ್ಶನ ನೀಡಿಲಿದ್ದಾರೆ. ಮಂಡ್ಯ ಜಿಲ್ಲಾಡಳಿತ ವತಿಯಿಂದ ನಡೆಯಲಿರುವ ವೈರಮುಡಿ ಉತ್ಸವಕ್ಕೆ ರಾತ್ರಿ 8 ಗಂಟೆಗೆ ಸಲ್ಲುವ ಪುಷ್ಯ ನಕ್ಷತ್ರದಲ್ಲಿ ಚಾಲನೆ ಸಿಗಲಿದೆ.

ಬೆಳಗ್ಗೆ 7:30ಕ್ಕೆ ಜಿಲ್ಲಾ ಖಜಾನೆಯಿಂದ ವಜ್ರಖಚಿತ ವೈರಮುಡಿ ಆಭರಣ ತೆರಳಿದ್ದು, ಬಿಗಿ ಭದ್ರತೆಯಲ್ಲಿ ಮಂಡ್ಯದಿದ ಮೇಲುಕೋಟೆಗೆ ರವಾನೆ ಮಾಡಲಾಗುತ್ತದೆ. ಬಳಿಕ ಲಕ್ಷ್ಮಿ ಜನಾರ್ಧನ ಸ್ವಾಮಿ ದೇವಾಲಯದಲ್ಲಿ ಮೊದಲು ಪೂಜೆ ಮಾಡಿ, ಬೆಂಗಳೂರು- ಮೈಸೂರು ಹೆದ್ದಾರಿ ಮೂಲಕ ಶ್ರೀರಂಗಪಟ್ಟಣ ತಾಲೂಕಿನ ಬಾಬುರಾಯನಕೊಪ್ಪಲು, ಪಾಂಡವಪುರ, ಜಕ್ಕನಹಳ್ಳಿ ಮಾರ್ಗವಾಗಿ ಆಭರಣ ಮೇಲುಕೋಟೆ ತಲುಪಲಿದೆ.

ಮಾರ್ಗದುದ್ದಕ್ಕೂ ಸಿಗುವ ಗ್ರಾಮಗಳಲ್ಲಿ ವೈರಮುಡಿ ಕಿರೀಟಕ್ಕೆ ಪೂಜೆಗೆ ಅವಕಾಶವಿದ್ದು, ಸಂಜೆ ವೇಳೆಗೆ ಮೇಲುಕೋಟೆ ತಲುಪಲಿದೆ. ನಂತರ ಶ್ರೀ ಚೆಲುವನಾರಾಯಣಸ್ವಾಮಿಯ ಉತ್ಸವ ಮೂರ್ತಿಗೆ ಕಿರೀಟಧಾರಣೆ ಮಾಡಿ ಉತ್ಸವಕ್ಕೆ ಚಾಲನೆ ಸಿಗಲಿದೆ. ವೈರಮುಡಿ ಉತ್ಸವ ನೋಡಲು 2 ಲಕ್ಷ ಭಕ್ತರು ಸೇರುವ ನಿರೀಕ್ಷೆಯಿದ್ದು, ಈಗಾಗಲೇ ತಮಿಳುನಾಡು, ಕೇರಳ ಸೇರಿದಂತೆ ಹೊರರಾಜ್ಯಗಳಿಂದ ಭಕ್ತರು ಆಗಮಿಸಿದ್ದಾರೆ.

ಶ್ರೀದೇವಿ, ಭೂದೇವಿಯರ ಜೊತೆಗೆ ರತ್ನ ಖಚಿತ ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಲಿರುವ ಗರುಢಾರೂಢನಾದ ಚೆಲುವನಾರಾಯಣಸ್ವಾಮಿಯನ್ನು ನೋಡಿದರೆ ಸಾಕ್ಷಾತ್ ಭಗವಂತನೇ ಧರೆಗಿಳಿದು ವೈರಮುಡಿ ಕಿರೀಟ ಧರಿಸಿ ಭಕ್ತರಿಗೆ ದರ್ಶನ ನೀಡಿದಂತೆ ಭಾಸವಾಗುತ್ತದೆ.