ಮನೆ ರಾಜ್ಯ ತುಂಗಭದ್ರಾ: ಧುಮ್ಮಿಕ್ಕುತ್ತಿರುವ ನೀರಿನಲ್ಲೇ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಾಯೋಗಿಕ ಪರೀಕ್ಷೆ

ತುಂಗಭದ್ರಾ: ಧುಮ್ಮಿಕ್ಕುತ್ತಿರುವ ನೀರಿನಲ್ಲೇ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಾಯೋಗಿಕ ಪರೀಕ್ಷೆ

0

ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ತೂಬಿನಲ್ಲಿ ತಾತ್ಕಾಲಿಕ ಗೇಟ್ ಅಳವಡಿಸುವ ಪ್ರಾಯೋಗಿಕ ಪರೀಕ್ಷೆ ಗುರುವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಆರಂಭವಾಗಿದೆ.

Join Our Whatsapp Group

ತೋರಣಗಲ್‌ನ ಜಿಂದಾಲ್‌ ಕಂಪನಿಯ ಆವರಣದಲ್ಲಿ ಸಿದ್ಧವಾದ ಮೊದಲ ಗೇಟ್ ಅನ್ನು ಗುರುವಾರ ಬೆಳಿಗ್ಗೆ ತುಂಗಭಧ್ರಾ ಅಣೆಕಟ್ಟೆಯ ಬಲದಂಡೆಗೆ ತರಲಾಗಿತ್ತು. ಮಧ್ಯಾಹ್ನ 12.30ರ ಸುಮಾರಿಗೆ 24 ಗಾಲಿಗಳನ್ನು ಒಳಗೊಂಡ ಬೃಹತ್ ಟ್ರಕ್‌ ಸುಮಾರು 13 ಟನ್‌ ತೂಕದ ಗೇಟ್ ಎಲಿಮೆಂಟ್ ಅನ್ನು ಅಣೆಕಟ್ಟೆಯ ಒಳಗೆ ಕೊಂಡೊಯ್ದಿತು. 19ನೇ ಗೇಟ್‌ ಸಮೀಪಕ್ಕೆ ತಲುಪಿದ ತಕ್ಷಣ ಧುಮ್ಕಿಕ್ಕಿ ಹರಿಯುತ್ತಿರುವ ನೀರಲ್ಲೇ ಗೇಟ್ ಇಳಿಸುವ ಪ್ರಯೋಗ ಆರಂಭವಾಯಿತು.

ಕ್ರಸ್ಟ್ ಗೇಟ್ ತಜ್ಞ ಕನ್ನಯ್ಯ ನಾಯ್ಡು ಅವರ ಮಾರ್ಗದರ್ಶನದಲ್ಲಿ ಈ ಕಾರ್ಯಾಚರಣೆ ನಡೆಯುತ್ತಿದ್ದು, ವಿಡಿಯೊಗ್ರಫಿಯನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಇದಕ್ಕೆ ಮೊದಲು ಮಾಧ್ಯಮದವರೊಂದಿಗೆ ಮಾತನಾಡಿದ ಕನ್ನಯ್ಯ ನಾಯ್ಡು, ದೇಶದಲ್ಲಿ ಇದೇ ಮೊದಲ ಬಾರಿಗೆ ಧುಮ್ಮಿಕ್ಕಿ ಹರಿಯುತ್ತಿರುವ ನೀರಿನಲ್ಲಿ ಗೇಟ್ ಇಳಿಸುವ ಕಾರ್ಯ ನಡೆಯುತ್ತಿದೆ. ಇದು ಯಶಸ್ವಿಯಾದರೆ ಇದೊಂದು ಮಾಧರಿ ಕೆಲಸವಾಗಲಿದೆ ಎಂದರು.

ಅಣೆಕಟ್ಟೆ ಸಮೀಪಕ್ಕೆ ಯಾರನ್ನೂ ಹೋಗಲು ಬಿಡುತ್ತಿಲ್ಲ. ಮಾಧ್ಯಮದವರನ್ನು ಸಹ ಸ್ವಲ್ಪ ಹೊತ್ತು ತೆರಳುವುದಕ್ಕೆ ಅವಕಾಶ ನೀಡಿ ಬಳಿಕ ಎಲ್ಲರನ್ನೂ ಹೊರಗೆ ಕಳುಹಿಸಲಾಗಿದೆ.

ತುಂಗಭದ್ರಾ ಅಣೆಕಟ್ಟೆಯ ಕೆಳಭಾಗದಲ್ಲಿ ನದಿ ಎರಡು ಕವಲಾಗಿ ಹರಿಯುತ್ತದೆ. ಇಲ್ಲಿಯೇ ಹಳೆ ಸೇತುವೆ ಸಹ ಹಾದು ಹೋಗುತ್ತದೆ. ಅಲ್ಲಿಗೆ ಸಹ ಜನರು ತೆರಳುವುದಕ್ಕೆ ಸದ್ಯ ಅವಕಾಶ ಇಲ್ಲ. ಹೀಗಿದ್ದರೂ, ಅಲ್ಲಿಗೆ ಸಮೀಪದಲ್ಲೇ ನಿಂತು ಗೇಟ್ ಅಳವಡಿಸುವ ಕಾರ್ಯಾಚರಣೆಯನ್ನು ಕ್ಯಾಮೆರಾದಲ್ಲಿ ಸೆರೆ ಹಿಡಿಯುವ ಪ್ರಯತ್ನ ನಡೆಯುತ್ತಿದೆ.