ಟರ್ಕಿ: ಉತ್ತರ ಟರ್ಕಿಯ ಕಲ್ಲಿದ್ದಲು ಗಣಿಯೊಂದರಲ್ಲಿ ಸ್ಫೋಟ ಸಂಭವಿಸಿದ್ದು, ಮೃತರ ಸಂಖ್ಯೆ 28ಕ್ಕೆ ಏರಿಕೆಯಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ
ಕಪ್ಪುಸಮುದ್ರ ಕರಾವಳಿ ಪ್ರದೇಶದಲ್ಲಿನ ಅಮಾಸ್ರ ನಗರದಲ್ಲಿರುವ ಸರ್ಕಾರಿ ಸ್ವಾಮ್ಯದ ಟಿಟಿಕೆ ಅಮಾಸ್ರ ಮುಸ್ಸೆಸ್ಸೆ ಮುದುರ್ಲುಗು ಗಣಿಯಲ್ಲಿ ಶುಕ್ರವಾರ ಸಂಜೆ ಸ್ಫೋಟ ಸಂಭವಿಸಿತ್ತು. ದುರಂತ ನಡೆದಾಗ ಗಣಿಯಲ್ಲಿ 110 ಮಂದಿ ಕೆಲಸ ಮಾಡುತ್ತಿದ್ದರು.
ಈ ಬಗ್ಗೆ ಮಾತನಾಡಿರುವ ಇಂಧನ ಸಚಿವ ಫಾತಿಹ್ ದುರ್ಮಾಜ್, ಬೆಂಕಿ ಹೊತ್ತಿ ಉರಿಯುತ್ತಿರುವ ಸ್ಥಳದಲ್ಲಿ ಸಿಲುಕಿರುವ 15 ಜನರಿಗಾಗಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ ಎಂದು ತಿಳಿಸಿದ್ದಾರೆ.
ಇದುವರೆಗೆ 28 ಮಂದಿ ಮೃತಪಟ್ಟಿದ್ದಾರೆ. ರಕ್ಷಿಸಲಾಗಿರುವ 11 ಜನರನ್ನು ಬಾರ್ಟಿನ್ ಮತ್ತು ಇಸ್ತಾಂಬುಲ್ ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಆರೋಗ್ಯ ಸಚಿವ ಫಗ್ರೆತ್ತಿನ್ ಕೊಕ ಟ್ವೀಟ್ ಮಾಡಿದ್ದಾರೆ.
ಆಂತರಿಕ ಸಚಿವ ಸುಲೇಮಾನ್ ಸೋಯ್ಲು ಅವರು 58 ಜನರನ್ನು ರಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.
ಆ್ಯಂಬುಲೆನ್ಸ್ಗಳು ಘಟನಾ ಸ್ಥಳದಲ್ಲಿವೆ. ನೆರೆಯ ಪ್ರಾಂತ್ಯಗಳಿಂದಲೂ ರಕ್ಷಣಾ ತಂಡಗಳನ್ನು ಕಳುಹಿಸಿಕೊಡಲಾಗಿದೆ ಎಂದು ಟರ್ಕಿ ವಿಪತ್ತು ನಿರ್ವಹಣಾ ಪಡೆ ‘ಎಎಫ್ಎಡಿ’ ತಿಳಿಸಿದೆ.
ರಾಷ್ಟ್ರಾಧ್ಯಕ್ಷರು ಇಂದು ಅಮಾಸ್ರಗೆ ಭೇಟಿ ನೀಡುವ ಸಾಧ್ಯತೆ ಇದೆ.