ಮನೆ ಅಪರಾಧ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರ ಬಂಧನ- ಏಳು ಜನ ಪರಾರಿ

ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರ ಬಂಧನ- ಏಳು ಜನ ಪರಾರಿ

0

ಮೈಸೂರು(Mysuru): ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕಾಡುಕೋಣ ಬೇಟೆಯಾಡಿದ್ದ ಇಬ್ಬರು ಬೇಟೆಗಾರರನ್ನು ಪೊಲೀಸರು ಬಂಧಿಸಿದ್ದು, ಉಳಿದ ಏಳು ಮಂದಿ ತಲೆ ಮರೆಸಿಕೊಂಡಿದ್ದಾರೆ.  

ಪಿರಿಯಾಪಟ್ಟಣ ತಾಲೂಕಿನ ಉದ್ಯಾನವನದಂಚಿನ ಲಕ್ಷ್ಮೀಪುರಂ ನಿವಾಸಿಗಳಾದ ಅಶೋಕ, ಕಾಟಿಚಂದ್ರ ಬಂಧಿತ ಆರೋಪಿಗಳಾಗಿದ್ದಾರೆ. ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಉಳಿದ ಏಳು ಆರೋಪಿಗಳಾದ ಮನು, ಬೊಮ್ಮ, ಭರತ್, ಆನಂದ್, ಶೇಷಮ್ಮನ ಜಯ, ರಾಮಕೃಷ್ಣೇಗೌಡ, ಮಂಜು ತಲೆ ಮರೆಸಿಕೊಂಡಿದ್ದು, ಇವರ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.

ಘಟನೆ ವಿವರ : ಅ.15ರ ರಾತ್ರಿ ಹುಣಸೂರು ಉದ್ಯಾನದ ವನ್ಯಜೀವಿ ವಲಯ ವ್ಯಾಪ್ತಿಯ ಆನೆಚೌಕೂರು ಮೀಸಲು ಅರಣ್ಯ ಪ್ರದೇಶದಲ್ಲಿ ಆರೋಪಿಗಳು ಕಾಡುಕೋಣ ಬೇಟೆಯಾಡಿ ನಾಲ್ಕು ತೊಡೆಗಳು ಹಾಗೂ ಮಾಂಸವನ್ನು ಹೊತ್ತೊಯ್ದಿದ್ದರು ಎನ್ನಲಾಗಿದ್ದು, ಈ ಸಂಬಂಧ ಇಲಾಖೆ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡು ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.

ಆರೋಪಿಗಳ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಹುಲಿಯೋಜನೆ ನಿರ್ದೇಶಕ ಹರ್ಷಕುಮಾರ್ ನರಗುಂದ ನೇತೃತ್ವದ ತಂಡ ಆನೆಚೌಕೂರು ವಲಯದಂಚಿನ ಲಕ್ಷ್ಮೀಪುರಂ ಗ್ರಾಮದಲ್ಲಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿತ್ತು. ಉಳಿದ 7 ಮಂದಿ ಆರೋಪಿಗಳನ್ನು ಬಂಧಿಸಲು ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಡಿಸಿಎಫ್ ಹರ್ಷಕುಮಾರ್ ನರಗುಂದ ಮಾಹಿತಿ ನೀಡಿದರು.

ಕಾರ್ಯಾಚರಣೆಯಲ್ಲಿ ಹುಣಸೂರು ವನ್ಯಜೀವಿ ವಲಯದ ವಲಯ ಅರಣ್ಯ ಅಧಿಕಾರಿಗಳಾದ ರತನ್‌ಕುಮಾರ್. ಗಣರಾಜ ಪಟಗಾರ, ಡಿ.ಆರ್​​​​​ಎಫ್​​​ಒ ಗಳಾದ ಪ್ರಸನ್ನಕುಮಾರ್, ಎನ್.ಕೆ. ವೀರಭದ್ರ, ರಾಮು, ಮನೋಹರ್. ಅರಣ್ಯ ರಕ್ಷಕರುಗಳಾದ ಲಾಲ್ ಮಹಮದ್, ಕೃಷ್ಣ, ಕುಶಲ್, ವಾಹನ ಚಾಲಕ ಶಿವು ಇತರ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರಿದ್ದರು.

ಹಿಂದಿನ ಲೇಖನಕರ್ತವ್ಯ ಲೋಪ: ಕೆ.ಆರ್. ಪುರ ಇನ್‌ಸ್ಪೆಕ್ಟರ್ ಎಚ್‌.ಎಲ್. ನಂದೀಶ್ ಅಮಾನತು
ಮುಂದಿನ ಲೇಖನಜಿಟಿಡಿ ಅವರನ್ನು ಬಿಜೆಪಿಗೆ ಬರುವಂತೆ ಕರೆದಿರಲಿಲ್ಲ: ಸಚಿವ ಎಸ್.ಟಿ.ಸೋಮಶೇಖರ್