ಮನೆ ರಾಜ್ಯ ವಾಲ್ಮೀಕಿ ಹಗರಣ; ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ರಿಲೀಫ್ – ನಿರೀಕ್ಷಣಾ ಜಾಮೀನು ಮಂಜೂರು

ವಾಲ್ಮೀಕಿ ಹಗರಣ; ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ರಿಲೀಫ್ – ನಿರೀಕ್ಷಣಾ ಜಾಮೀನು ಮಂಜೂರು

0

ಬೆಂಗಳೂರು : ವಾಲ್ಮೀಕಿ ಹಗರಣದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರಗೆ ಬಿಗ್ ರಿಲೀಫ್ ಸಿಕ್ಕಿದೆ. ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ನಿರೀಕ್ಷಣಾ ಜಾಮೀನು ಮಂಜೂರು ಮಾಡಿ, ಆದೇಶ ಹೊರಡಿಸಿದೆ. ಮಹರ್ಷಿ ವಾಲ್ಮೀಕಿ ಬಹುಕೋಟಿ ಹಗರಣ ಪ್ರಕರಣದಲ್ಲಿ ಸಿಬಿಐ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದ ಬಳಿಕ ಬಂಧನ ಭೀತಿಯಲ್ಲಿದ್ದ ನಾಗೇಂದ್ರ ನಿರೀಕ್ಷಣಾ ಜಾಮೀನು ಕೋರಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಮಂಗಳವಾರ (ಜ.13) ವಿಚಾರಣೆ ನಡೆಸಿದ್ದ ಕೋರ್ಟ್ ವಾದ-ಪ್ರತಿವಾದ ಆಲಿಸಿ, ಬುಧವಾರಕ್ಕೆ (ಜ.14) ಆದೇಶ ಕಾಯ್ದಿರಿಸಿತ್ತು. ಅದರಂತೆ ಇದೀಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಮಂಗಳವಾರ ವಿಚಾರಣೆ ವೇಳೆ ಪ್ರಕರಣದ ತನಿಖಾಧಿಕಾರಿಯೇ ಕೋರ್ಟ್‌ನಲ್ಲಿ ವಾದಮಂಡನೆ ಮಾಡಿದ್ದರು. ವಾಲ್ಮೀಕಿ ಹಗರಣದಲ್ಲಿ ಹಣ ಪಡೆದವರನ್ನು ಸಿಐಡಿ, ಇಡಿ ತನಿಖೆ ಮಾಡಿದೆ.

ಅದಕ್ಕಿಂತ ಮುಂದುವರೆದು ಇದರಿಂದ ಫಲಾನುಭವಿಗಳು ಯಾರು ಅನ್ನೋದನ್ನ ಪತ್ತೆ ಹಚ್ಚಬೇಕಿದೆ. ಇಲ್ಲಿಯವರೆಗೂ ನಡೆದ ತನಿಖೆಯ ಕೆಲ ಮಾಹಿತಿಗಳನ್ನ ತೆರೆದ ನ್ಯಾಯಾಲಯದಲ್ಲಿ ಹೇಳಲು ಸಾಧ್ಯವಿಲ್ಲ. ಮುಂಬೈನಲ್ಲಿ ಕೂಡ ದಾಳಿ ಮಾಡಿ ಮಾಹಿತಿ ಕಲೆಹಾಕಲಾಗಿದೆ. ಹಗರಣದ ಹಣ ಚಿನ್ನ, ಬುಲಿಯನ್ ಆಗಿ ಕನ್ವರ್ಟ್ ಆಗಿದೆ. ಇದರ ಹಿಂದೆ ನಾಗೇಂದ್ರ, ಅವರ ಸಹಚರರು ಭಾಗಿಯಾಗಿದ್ದಾರೆ. ಇದರ ಹಿಂದೆ ಕೆಲ ಬೋಗಸ್ ಕಂಪನಿಗಳು ಭಾಗಿಯಾಗಿವೆ.

ಈ ಪ್ರಕರಣದ ಬಗ್ಗೆ ಸಾಕಷ್ಟು ಸಾಕ್ಷ್ಯಗಳನ್ನ ಕಲೆ ಹಾಕಲಾಗಿದೆ ಎಂದು ಹೇಳಿ ಕೋರ್ಟ್‌ಗೆ ತಂದಿದ್ದ ಎರಡು ಸೂಟ್‌ಕೇಸ್ ದಾಖಲೆಗಳನ್ನ ತನಿಖಾಧಿಕಾರಿ ತೋರಿಸಿದರು. ನಾಗೇಂದ್ರ ಪರ ವಕೀಲರು ವಾದ ಮಂಡನೆ ಮಾಡಿ, ನಾಗೇಂದ್ರ ಮತ್ತು ನೆಕ್ಕಂಟಿ ನಾಗರಾಜ್ ನಡುವಿನ ವ್ಯವಹಾರ ಅವರ ವೈಯಕ್ತಿಕವಾದದ್ದು, ಸಿಬಿಐ ಹೇಳ್ತಾ ಇರೋ ಟೆಂಡರ್‌ಗೂ ಈ ವ್ಯವಹಾರಗಳಿಗೂ ಯಾವುದೇ ಸಂಬಂಧವಿಲ್ಲ ಅಂತಾ ವಾದಿಸಿದ್ದರು.