ರಾಯಚೂರು : ಜಿಲ್ಲೆಯಾದ್ಯಂತ ಸುರಿಯುತ್ತಿರುವ ಧಾರಾಕಾರ ಮಳೆಗೆ ರಸ್ತೆಗಳು ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.
ಜಿಲ್ಲೆಯ ದೇವದುರ್ಗ ಪಟ್ಟಣದ ಪ್ರಮುಖ ರಸ್ತೆಗಳು ಸಂಪೂರ್ಣವಾಗಿ ಜಲಾವೃತಗೊಂಡಿದೆ. ಪರಿಣಾಮ ವಾಹನ ಸವಾರರ ಜೊತೆಗೆ ನಡೆದುಕೊಂಡು ಹೋಗುವವರಿಗೂ ಸಮಸ್ಯೆಯುಂಟಾಗಿದೆ.
ರಸ್ತೆಯಲ್ಲಿ ನಿರ್ಮಾಣವಾಗಿರುವ ದೊಡ್ಡ ಗುಂಡಿಗಳಿಂದಾಗಿ ಮಳೆ ಬಂದರೆ ಸಾಕು ಬೈಕ್ ಸಾವಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಅದಲ್ಲದೇ ಮಿನಿ ವಿಧಾನಸೌಧ ಕಚೇರಿ ಮುಂಭಾಗದಲ್ಲಿ ನೀರು ನಿಂತ ಪರಿಣಾಮ ಜನರು ಪರದಾಡುತ್ತಿದ್ದಾರೆ.
ಪಟ್ಟಣದ ಉಪ್ಪಾರ ಓಣಿ, ಆನಂದ ಟಾಕೀಸ್ ರಸ್ತೆ, ಹಳೆ ಬಸ್ ನಿಲ್ದಾಣ ರಸ್ತೆಯಲ್ಲೆಲ್ಲಾ ಚರಂಡಿ ನೀರು ಹರಿದಿದೆ. ಜಿಲ್ಲೆಯ ಲಿಂಗಸುಗೂರು, ಸಿಂಧನೂರು ತಾಲೂಕು ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗಿದೆ.














