ಬಾಗಲಕೋಟೆ : ಬಿಜೆಪಿಯ ಅಭ್ಯರ್ಥಿಯಾಗಿ ವೀರಣ್ಣ ಚರಂತಿಮಠ ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ನಾಮಪತ್ರ ಸಲ್ಲಿಕೆ ಮಾಡಿದ ಬಳಿಕ ಮಾತನಾಡಿದ ಅವರು, ಇಂದು ಸಾಂಕೇತಿಕವಾಗಿ ನಾಮಪತ್ರ ಸಲ್ಲಿಕೆ ಮಾಡಿದ್ದೇನೆ.
ಮಾ.23 ರಂದು ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರ ಸಲ್ಲಿಸಲಾಗುವುದು. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ಮಾಜಿ ಸಚಿವ ಬಿ ಶ್ರೀರಾಮುಲು, ಜಗದೀಶ್ ಶೆಟ್ಟರ್, ಗೋವಿಂದ ಕಾರಜೋಳ ಸೇರಿದಂತೆ ಸ್ಥಳೀಯ ಬಿಜೆಪಿ ನಾಯಕರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಬಸವೇಶ್ವರ ವೃತ್ತದಲ್ಲಿ ಮೆರವಣಿಗೆ ವಾಹನದಲ್ಲೇ ನಾಯಕರು ಬಹಿರಂಗ ಭಾಷಣ ಮಾಡಲಿದ್ದಾರೆ. ಮಾರ್ಚ್ 24 ರಿಂದ ಅಧಿಕೃತವಾಗಿ ಪ್ರಚಾರ ನಡೆಸಲಾಗುವುದು ಆದರೆ ಬೃಹತ್ ಪ್ರಚಾರ ನಡೆಸದೇ ಸಣ್ಣ ಸಣ್ಣ ಬಹಿರಂಗ ಸಮಾವೇಶ ನಡೆಸಲಾಗುವುದು ಎಂದರು.
ಸರ್ಕಾರ ಬಂದು ಪ್ರಚಾರ ಮಾಡಿದರೂ ಏನು ವ್ಯತ್ಯಾಸ ಆಗುವುದಿಲ್ಲ. ಸರ್ಕಾರ ಚುನಾವಣೆಗೆ ನಿಲ್ಲುವುದಿಲ್ಲ, ಅಭ್ಯರ್ಥಿಗಳು ನಿಲ್ಲುತ್ತಾರೆ. ಪ್ರತಿ ಚುನಾವಣೆ ವೇಳೆ ವಾತಾವರಣ ಬೇರೆ ಬೇರೆ ಇರುತ್ತದೆ. ಪಕ್ಷ ಬಿಟ್ಟು ಹೋದವರು ವಾಪಸ್ ಕರೆತರುವ ಕೆಲಸವನ್ನು ನಮ್ಮ ನಾಯಕರಾದ ಕಾರಜೋಳ, ಚುನಾವಣಾ ಉಸ್ತುವಾರಿ ಅರುಣ್ ಶಹಾಪುರ ಮಾಡುತ್ತಾರೆ ಎಂದು ತಿಳಿಸಿದರು.
ಯತ್ನಾಳ್ ಪ್ರಚಾರಕ್ಕೆ ಬರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿ, ಅವರೇ ಬರುತ್ತೇನೆ ಎಂದಿದ್ದಾರೆ. ಆದರೆ ನಮ್ಮ ಅವರ ನಡುವೆ ಮಾತುಕತೆಯಾಗಿಲ್ಲ. ಮಾರ್ಚ್ 24 ರ ನಂತರ ಯಾರು ಬರುತ್ತಾರೆ? ಯಾರು ಬರುವುದಿಲ್ಲ ಎನ್ನುವುದು ನಿಮಗೆ ತಿಳಿಯಲಿದೆ ಎಂದು ಉತ್ತರಿಸಿದರು.















