ಮನೆ ರಾಷ್ಟ್ರೀಯ 75ನೇ ವಸಂತಕ್ಕೆ ಕಾಲಿಟ್ಟ ವೆಂಕಯ್ಯ ನಾಯ್ಡು: ಶುಭ ಕೋರಿದ ಪ್ರಧಾನಿ ಮೋದಿ

75ನೇ ವಸಂತಕ್ಕೆ ಕಾಲಿಟ್ಟ ವೆಂಕಯ್ಯ ನಾಯ್ಡು: ಶುಭ ಕೋರಿದ ಪ್ರಧಾನಿ ಮೋದಿ

0

ನವದೆಹಲಿ: ಮಾಜಿ ಉಪರಾಷ್ಟ್ರಪತಿ ಎಂ. ವೆಂಕಯ್ಯ ನಾಯ್ಡು  ಅವರು 75ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಜಿ ಉಪರಾಷ್ಟ್ರಪತಿ ಎಂ ವೆಂಕಯ್ಯ ನಾಯ್ಡು ಅವರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ.

Join Our Whatsapp Group

ವೆಂಕಯ್ಯ ನಾಯ್ಡು ಅವರು ದೀರ್ಘಾಯುಷಿಗಳಾಗಲಿ ಎಂದು ಪ್ರಾರ್ಥಿಸಿದ್ದಾರೆ. ವೆಂಕಯ್ಯ ನಾಯ್ಡು ಅವರ ಜನ್ಮದಿನ ನಿಮಿತ್ತ ಪ್ರಧಾನಿ ಮೋದಿಯವರು ವೆಂಕಯ್ಯ ನಾಯ್ಡು ಅವರ ಜೀವನ ಆಧಾರಿತ ಮೂರು ಪುಸ್ತಕಗಳನ್ನು ವರ್ಚುವಲ್​ ಮೂಲಕ ಬಿಡುಗಡೆ ಮಾಡಿದರು.

ವೆಂಕಯ್ಯ ನಾಯ್ಡು ಅವರ ಜೀವನ ಪಯಣ ಸಾರ್ವಜನಿಕ ಸೇವೆಗೆ ಸಮರ್ಪಣೆ ಮತ್ತು ಅಚಲ ಬದ್ಧತೆಯನ್ನು ತೋರಿಸುತ್ತದೆ. ಈ ಪುಸ್ತಕಗಳು ಜನರಿಗೆ ಸ್ಫೂರ್ತಿ ಕೇಂದ್ರವಾಗಬಹುದು. ಮತ್ತು ರಾಷ್ಟ್ರದ ಸೇವೆಗೆ ಸರಿಯಾದ ಮಾರ್ಗವನ್ನು ತೋರಿಸುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಾಜಿ ಉಪರಾಷ್ಟ್ರಪತಿಯವರೊಂದಿಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಪ್ರಧಾನಿ ಮೋದಿ, ಶ್ರೀ ವೆಂಕಯ್ಯ ನಾಯ್ಡು ಅವರೊಂದಿಗೆ ದೀರ್ಘಕಾಲ ಕೆಲಸ ಮಾಡುವ ಅವಕಾಶ ತಮಗೆ ದೊರೆತಿದ್ದು ಸುದೈವ ಎಂದಿದ್ದಾರೆ.

ರಾಜಕೀಯ ಕ್ಷೇತ್ರದ ಆರಂಭದ ದಿನಗಳಿಂದ ಹಿಡಿದು ಉಪರಾಷ್ಟ್ರಪತಿ ಹುದ್ದೆಯವರೆಗೆ ವೆಂಕಯ್ಯ ನಾಯ್ಡು ಅವರ ವೃತ್ತಿಜೀವನವು ಯುವ ನಾಯಕರಿಗೆ ಪ್ರರಣೆಯಾಗಿದೆ. ಅವರ ವಾಕ್ಚಾತುರ್ಯ, ತ್ತು ಅಭಿವೃದ್ಧಿ ವಿಷಯಗಳ ಮೇಲಿನ ಬಲವಾದ ಗಮನವು ಅವರಿಗೆ ಪಕ್ಷಾತೀತವಾಗಿ ಗೌರವ ತಂದು ಕೊಟ್ಟಿದೆ. ನಾನು ಕೂಡ ಅವರಿಂದ ಸಾಕಷ್ಟು ಕಲಿತಿದ್ದೇನೆ. ಅವರ ಜೀವನದಲ್ಲಿ ಒಂದು ಸಾಮಾನ್ಯ ಸಂಗತಿಯಿದ್ದರೆ, ಅದು ಜನರ ಮೇಲಿನ ಪ್ರೀತಿ ಎಂದು ಹೇಳಿದರು.

ವೆಂಕಯ್ಯ ನಾಯ್ಡು ಅವರು ಆಂಧ್ರಪ್ರದೇಶದಲ್ಲಿ ವಿದ್ಯಾರ್ಥಿಯಾಗಿದ್ದಾಗಲೆ ರಾಜಕೀಯ ಪಯಣ ಆರಂಭಿಸಿದರು. ಅವರ ಪ್ರತಿಭೆ, ವಾಕ್ಚಾತುರ್ಯ, ಸಂಘಟನಾ ಕೌಶಲ್ಯಗಳನ್ನು ಪರಿಗಣಿಸಿ ಯಾವುದೇ ರಾಜಕೀಯ ಪಕ್ಷಕ್ಕೆ ಅವರು ಸೇರಬಹುದಿತ್ತು. ಆದರೆ ಅವರು ರಾಷ್ಟ್ರದ ದೃಷ್ಟಿಯಿಂದ ಸಂಘ ಪರಿವಾರದೊಂದಿಗೆ ಕೆಲಸ ಮಾಡಲು ಮುಂದಾದರು. ಆರ್​ಎಸ್​ಎಸ್​​ ಮತ್ತು ಎಬಿವಿಪಿಯೊಂದಿಗೆ ಸಂಬಂಧ ಹೊಂದಿದ್ದ ಅವರು ನಂತರ ಜನಸಂಘ ಮತ್ತು ಬಿಜೆಪಿಯನ್ನು ಸೇರಿ ಪಕ್ಷ ಬಲಪಡಿಸಿದರು ಎಂದು ತಿಳಿಸಿದರು.

ಸುಮಾರು 50 ವರ್ಷಗಳ ಹಿಂದೆ ತುರ್ತುಪರಿಸ್ಥಿತಿ ಹೇರಿದಾಗ, ತುರ್ತುಪರಿಸ್ಥಿತಿ ವಿರೋಧಿಸಿ ಚಳವಳಿಯಲ್ಲಿ ಭಾಗವಹಿಸಿದ್ದ ವೆಂಕಯ್ಯ ಅವರು ಜಯಪ್ರಕಾಶ್ ನಾರಾಯಣ್​​ ಅವರನ್ನು ಆಂಧ್ರಪ್ರದೇಶಕ್ಕೆ ಆಹ್ವಾನಿಸಿದ್ದಕ್ಕಾಗಿ ಜೈಲು ಸೇರಿದ್ದರು. ಪ್ರಜಾಪ್ರಭುತ್ವದ ಮೇಲಿನ ಈ ಬದ್ಧತೆ ಅವರ ರಾಜಕೀಯ ಜೀವನಕ್ಕೆ ತಿರುವು ನೀಡಿತು. 1980 ರ ದಶಕದ ಮಧ್ಯಭಾಗದಲ್ಲಿ, ಮಹಾನ್ ನಟ ಎನ್‌ಟಿಆರ್ ಅವರ ಸರ್ಕಾರವನ್ನು ಕಾಂಗ್ರೆಸ್ ಅನಧಿಕೃತವಾಗಿ ವಜಾಗೊಳಿಸಿದಾಗ, ಅವರು ಮತ್ತೆ ಪ್ರಜಾಪ್ರಭುತ್ವದ ತತ್ವಗಳನ್ನು ರಕ್ಷಿಸುವ ಚಳವಳಿಯಲ್ಲಿ ಮುಂಚೂಣಿಯಲ್ಲಿದ್ದರು ಎಂದು ಸ್ಮರಿಸಿಕೊಂಡರು.

2017ರಲ್ಲಿ ಎನ್​ಡಿಎ ಸರ್ಕಾರ ವೆಂಕಯ್ಯ ನಾಯ್ಡು ಅವರನ್ನು ಉಪರಾಷ್ಟ್ರಪತಿ ಮಾಡಿತು. ವೆಂಕಯ್ಯ ನಾಯ್ಡು ಅವರು ರಾಜ್ಯಸಭೆಯ ಸ್ಪೀಕರ್ ಆಗಿದ್ದ ಅವಧಿಯಲ್ಲಿ ಸೃಷ್ಟಿಸಿದ ಸಕಾರಾತ್ಮಕ ವಾತಾವರಣವನ್ನು ಪ್ರಧಾನಿ ಶ್ಲಾಘಿಸಿದರು. ಸದನವು ಕೈಗೊಂಡ ವಿವಿಧ ಪ್ರಮುಖ ನಿರ್ಧಾರಗಳನ್ನು ಪ್ರಮುಖವಾಗಿ ಪ್ರಸ್ತಾಪಿಸಿದರು. ಲೋಕಸಭೆಯಲ್ಲಿ ಮಂಡಿಸುವ ಮೊದಲು ರಾಜ್ಯಸಭೆಯಲ್ಲಿ 370 ನೇ ವಿಧಿಯನ್ನು ರದ್ದು ಮಾಡುವ ಅಥವಾ ಹಿಂತೆಗೆದುಕೊಳ್ಳುವ ಮಸೂದೆಯನ್ನು ಪರಿಚಯಿಸಿದ್ದನ್ನು ನೆನಪಿಸಿಕೊಂಡ ಪ್ರಧಾನಿ, ಸದನದ ಘನತೆಯನ್ನು ಕಾಪಾಡಿಕೊಳ್ಳುವಾಗ ಇಂತಹ ಸೂಕ್ಷ್ಮ ಮಸೂದೆಯನ್ನು ಅಂಗೀಕರಿಸುವಲ್ಲಿ ವೆಂಕಯ್ಯ ನಾಯ್ಡು ಅವರ ಅನುಭವಿ ನಾಯಕತ್ವವನ್ನು ಶ್ಲಾಘಿಸಿದರು. ವೆಂಕಯ್ಯ ನಾಯ್ಡು ಅವರಿಗೆ ದೇವರು ದೀರ್ಘ ಮತ್ತು ಆರೋಗ್ಯಕರ ಜೀವನವನ್ನು ಕರುಣಿಸಲಿ ಎಂದು ಪ್ರಧಾನಿ ಪಾರ್ಥಿಸಿದರು.

ಹಿಂದಿನ ಲೇಖನಪುಣೆ: ಜಲಪಾತದಲ್ಲಿ ಕೊಚ್ಚಿ ಹೋದ ಒಂದೇ ಕುಟುಂಬದ ಐವರು
ಮುಂದಿನ ಲೇಖನತ್ರಿವಳಿ ಹತ್ಯೆ: ಉತ್ತರ ಪ್ರದೇಶದ ಮಾಜಿ ಶಾಸಕನ ಕ್ಷಮಾದಾನ ಅರ್ಜಿ ಕುರಿತು ಕೂಡಲೇ ನಿರ್ಧರಿಸುವಂತೆ ಸುಪ್ರೀಂ ಸೂಚನೆ